ಶಶಿಕುಮಾರ್ ಅವರ ಮಗ ಆದಿತ್ಯ ಅಭಿನಯದ ‘ಓ ಮೈ ಲವ್’, ‘ಕೇವೋಸ್’ ಮತ್ತು ‘ಕಾದಾಡಿ’ ಚಿತ್ರಗಳು ಅದ್ಯಾಕೋ ಹೆಚ್ಚು ಸದ್ದು ಮಾಡಲಿಲ್ಲ. ಚಿತ್ರದ ಗೆಲುವು, ಸೋಲು ಅತ್ಲಾಗಿರಲಿ. ಚಿತ್ರ ಬಿಡುಗಡೆಯಾಗಿದ್ದು ಸಹ ಗೊತ್ತಾಗಲಿಲ್ಲ. ಈಗ ಆದಿತ್ಯ ಹಳೆಯದನ್ನು ಮರೆತು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಧುವನ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ವಿಜಯ್ ಪಾಳೇಗಾರ್ ನಿರ್ದೇಶಿಸುತ್ತಿರುವ, ಆದಿತ್ಯ ಶಶಿಕುಮಾರ್ ನಟಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ಈ ಚಿತ್ರಕ್ಕೆ ‘ರಾಶಿ’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಶೀರ್ಷಿಕೆ ಅನಾವರಣ ಮಾಡಲಾಗಿದೆ.
‘ರಾಶಿ’ ಚಿತ್ರದ ಕಥೆಯೇನು? ಅಥವಾ ತಮ್ಮ ಪಾತ್ರವೇನು? ಎಂಬುದರ ಕುರಿತು ಆದಿತ್ಯ ಹೇಳಲಿಲ್ಲ. ‘ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ’ ಎಂದರು.
ನಿರ್ದೇಶಕ ವಿಜಯ್ ಪಾಳೇಗಾರ್ ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಕರೆದು ಈ ಚಿತ್ರವನ್ನು ನಿರ್ದೇಶಿಸಿಕೊಡಬೇಕೆಂದರಂತೆ. ಇದಕ್ಕೂ ಮೊದಲು ಅವರು ‘ಟ್ರಿಗರ್’ ಎಂಬ ಚಿತ್ರ ಮಾಡಿದ್ದ ವಿಜಯ್ಗೆ ಇದು ಎರಡನೇ ಚಿತ್ರ. ‘ಅಖಿಲೇಶ್ ಅವರೇ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನನ್ನು ಮಾಡುತ್ತಿದ್ದೇನೆ. ಇನ್ನು ಈ ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣವಿದೆ’ ಎಂದರು.
ಇತ್ತೀಚಿಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಚಿತ್ರಕ್ಕೆ ಫೋಟೋಶೂಟ್ ಮಾತ್ರ ಆಗಿದ್ದು, ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.