‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ನಟಿ ರಚಿತಾ ರಾಮ್ ವಿರುದ್ಧ ಚಿತ್ರತಂಡದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ದೂರು ದಾಖಲಿಸಿದ್ದರು. ರಚಿತಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಆ ಚಿತ್ರದ ನಿರ್ದೇಶಕರು, ನಿರ್ಮಾಪಕರು ಹಾಗೂ ಹೀರೋ ಇತ್ತೀಚೆಗೆ ಕೆಲವು ಸಂದರ್ಶನಗಳಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಮತ್ತು ಅವರು ನೀಡಿದ ಹೇಳಿಕೆಗಳಿಂದ ನನಗೆ ತುಂಬ ನೋವಾಗಿದೆ ಎಂದು ರಚಿತಾ ರಾಮ್ ಸಹ ಹೇಳಿಕೊಂಡಿದ್ದರು.
ಈಗ ಈ ಪ್ರಕರಣದ ಬಗ್ಗೆ ಶ್ರೀನಗರ ಕಿಟ್ಟಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಒಂದು ಚಿತ್ರದ ಪ್ರಚಾರ ಮಾಡುವುದು ಚಿತ್ರದ ನಟ-ನಟಿಯರ ಜವಾಬ್ದಾರಿ ಮತ್ತು ಕರ್ತವ್ಯ. ರಚಿತಾ ಆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಾವು ಕಲಾವಿದರು ಚಿತ್ರರಂಗದಿಂದ ಊಟ ಮಾಡುತ್ತಿದ್ದೇವೆ, ಅದರಿಂದ ಬದುಕಿದ್ದೇವೆ. ಸಿನಿಮಾದ ಪ್ರಚಾರ ಮಾಡೋದು, ನಮ್ಮ ಜವಾಬ್ದಾರಿ ಆಗಿರುತ್ತದೆ. ಆ ಜವಾಬ್ದಾರಿಯನ್ನು ರಚಿತಾ ಸರಿಯಾಗಿ ನಿರ್ವಹಿಸಿಲ್ಲ. ವಿಷಯದಲ್ಲಿ ಆಕೆಯ ಬಗ್ಗೆ ಅಸಮಾಧಾನವಿದೆ. ಇದರಲ್ಲಿ ಅವರ ಬೇಜವಾಬ್ದಾರಿತನ ಕಾಣುತ್ತಿದೆ. ದಯಮಾಡಿ ಮುಂದಿನ ಚಿತ್ರದಲ್ಲಿ ಕೆಲಸ ಮಾಡುವಾಗ, ಚಿತ್ರತಂಡದ ಜೊತೆಗೆ ನಿಂತು ಪ್ರಚಾರ ಮಾಡುವುದು ನಿಮ್ಮ ಕರ್ತವ್ಯ’ ಎಂದು ಹೇಳಿದ್ದಾರೆ.
ಅದ್ಯಾವುದು..? ರಚಿತಾ ರಾಮ್ ಮೇಲೆ ಫಿಲ್ಮ್ ಚೇಂಬರ್ನಲ್ಲಿ ಎರಡು ಪ್ರಕರಣ ದಾಖಲಾಗಿದೆ..
ಪ್ರಚಾರದ ವಿಷಯದಲ್ಲಿ ಆಕೆಯ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿಲ್ಲ ಎಂಬುದು ಮೊದಲೇ ಚರ್ಚೆಯಾಗಿತ್ತು ಎನ್ನುವ ಕಿಟ್ಟಿ, ‘ಇದಕ್ಕೂ ಮೊದಲು ಬೇರೆ ಚಿತ್ರಗಳ ಪ್ರಚಾರಕ್ಕೆ ರಚಿತಾ ಬರದಿರುವ ಬಗ್ಗೆ ಮಾತು ಕೇಳಿಬಂದಿತ್ತು. ಆಕೆಯ ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿಲ್ಲ, ಯೋಚನೆ ಮಾಡಿ ಮುಂದುವರೆಯಿರಿ ಎಂದು ನಾನು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಹೇಳಿದ್ದೆ. ಮೊದಲು ಅಗ್ರೀಮೆಂಟ್ ಮಾಡಿಕೊಳ್ಳಿ ಎಂದಿದ್ದೆ. ಅವರು ಪ್ರಯತ್ನಿಸಿದರೂ, ಕೊಟ್ಟಿರುವ ಅಗ್ರೀಮೆಂಟ್ಗೆ ಆಕೆ ಸೈನ್ ಮಾಡಿರಲಿಲ್ಲ. ಆಕೆಯ ಬಳಿ ಸಹಿ ಹಾಕಿಸಿಕೊಂಡಿದ್ದರೆ ಈ ಸಮಸ್ಯೆಗಳು ಇರುತ್ತಿರಲಿಲ್ಲ. ಇದರಲ್ಲಿ ಇವರದ್ದೂ ಬೇಜವಾಬ್ದಾರಿತನವಿದೆ’ ಎಂದಿದ್ದಾರೆ.
ಈ ತರಹದ ಬೆಳವಣಿಗೆ ಚಿತ್ರರಂಗಕ್ಕೆ ಪೂರಕವಲ್ಲ ಎಂದಿರುವ ಕಿಟ್ಟಿ, ‘ನಾನು ಸಾಕಷ್ಟು ನಟಿಯರ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ, ಯಾವತ್ತೂ ಹೀಗೆ ಆಗಿಲ್ಲ. ಪ್ರಚಾರಕ್ಕೆ ಬರಬೇಕು ಎಂದಾಗ ಪ್ರೀತಿಯಿಂದ ಬಂದು ಅವರು ತಮ್ಮ ಕೆಲಸ ಮಾಡಿಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನನಗೆ ಇಂಥದ್ದೊಂದು ಅನುಭವವಾಗುತ್ತಿರುವುದು ಈ ತರಹದ ಬೆಳವಣಿಗೆ ಚಿತ್ರರಂಗಕ್ಕೆ ಪೂರಕವಲ್ಲ’ ಎಂದು ಹೇಳಿದ್ದಾರೆ.





