Mysore
20
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಮಧ್ಯರಾತ್ರಿಯಲ್ಲಿ ಮುತ್ತಣ್ಣ ಮಗನ ಡ್ಯುಯೆಟ್‍…

Midnight duet by Muthanna’s son...

ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ದೇವರಾಜ್‍ ಅವರ ಎರಡನೇ ಮಗ ಪ್ರಣಾಮ್‍ ಅಭಿನಯದ ಮೊದಲ ಚಿತ್ರ ‘ಕುಮಾರ್ 21 ಎಫ್‍’. ಆ ಚಿತ್ರದ ನಂತರ ಪ್ರಣಾಮ್‍ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸಿದರಾದರೂ, ಯಾವುದೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಪ್ರಣಾಮ್‍ ಅಭಿನಯದ ಎರಡನೇ ಚಿತ್ರ ಏಳು ವರ್ಷಗಳ ನಂತರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಪ್ರಣಾಮ್‍ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಆಗಸ್ಟ್.22ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಸಂಜಿತ್‍ ಹೆಗ್ಡೆ ಹಾಡಿರುವ ‘ಮಿಡ್‍ನೈಟ್ ರಸ್ತೆಯಲ್ಲಿ…’ ಎಂಬ ಹಾಡನ್ನು ಯೋಗರಾಜ್ ಭಟ್‍ ಬರೆದಿದ್ದು, ಸಚಿನ್‍ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಧನಂಜಯ್‍ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ಪ್ರಣಾಂ ಮತ್ತು ಖುಷಿ ಹೆಜ್ಜೆ ಹಾಕಿದ್ದಾರೆ.

ತಂದೆ-ಮಗನ ಬಾಂಧವ್ಯದ ಕುರಿತಾದ ಈ ಚಿತ್ರವನ್ನು ಶ್ರೀಕಾಂತ್‍ ಹುಣಸೂರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘2018ರಲ್ಲಿ ಮಾಡಿಕೊಂಡ ಕಥೆ ಇದು. ನನಗೆ ಆ ಸಮಯದಲ್ಲಿ ಬಜೆಟ್‍ ಇರಲಿಲ್ಲ. ನಾವೇ ಗೆಳೆಯರು ಒಂದಿಷ್ಟು ಜನ ಸೇರಿ ಈ ಚಿತ್ರವನ್ನು ನಿರ್ಮಿಸಬೇಕೆಂಬ ಯೋಚನೆ ಇತ್ತು. ಆ ಸಂದರ್ಭದಲ್ಲಿ ಪುರಾತನ ಫಿಲಂಸ್‍ನವರು ಪರಿಚಯಾಗಿ ಚಿತ್ರ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದರು. ಈ ಚಿತ್ರಕ್ಕೆ ಪ್ರಣಾಮ್‍ ಸೂಕ್ತ ಎಂದರು. ಅವರ ಮನೆಗೆ ಹೋದಾಗ ದೇವರಾಜ್‍ ಅವರ ಭೇಟಿ ಆಯ್ತು. ಈ ಚಿತ್ರದಲ್ಲಿ ಐಟಂ ಸಾಂಗ್‍ ಇಲ್ಲ, ಫೈಟ್‍ ಇಲ್ಲ, ಕಮರ್ಷಿಯಲ್‍ ಅಂಶಗಳಿಲ್ಲ, ಮಲಯಾಳಂ ಚಿತ್ರದ ಫೀಲ್‍ ಕೊಡುವಂತಹ ಚಿತ್ರ ಇದು ಎಂದೆ. ಪ್ರಣಾಮ್‍ಗೆ ಈ ತರಹದ ಕಥೆ ಬೇಕು ಎಂದು ದೇವರಾಜ್‍ ಒಪ್ಪಿಕೊಂಡರು. ಅಲ್ಲಿಂದ ಚಿತ್ರ ಶುರುವಾಯ್ತು’ ಎಂದರು.

ಚಿತ್ರದಲ್ಲಿ ಪ್ರಣಾಂ ಮತ್ತು ಅವರ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಇಬ್ಬರೂ ಪೈಪೋಟಿಯಲ್ಲಿ ನಟಿಸಿದ್ದಾರೆ ಎನ್ನುವ ಶ್ರೀಕಾಂತ್, ‘ಮುತ್ತಣ್ಣ, ಶಿವು ಎರಡು ಪಾತ್ರಗಳೂ ಅದ್ಭುತವಾಗಿದೆ. ಇನ್ನು, ಈ ಹಾಡನ್ನು ಕೇವಲ ಎರಡು ದಿನಗಳಲ್ಲಿ ಮಾಡಿದ್ದೇವೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಣಾಂ ಅವರ ನೃತ್ಯದ ವೇಗಕ್ಕೆ ಖುಷಿ ಮ್ಯಾಚ್‍ ಮಾಡಿದ್ದಾರೆ. ಮೊದಲೇ ಕೆಲವು ದಿನಗಳ ಕಾಲ ರಿಹರ್ಸಲ್‍ ಮಾಡಿ ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ’ ಎಂದರು.

ಈ ಚಿತ್ರ ತನ್ನ ಪಾಲಿಗೆ ರೀಲಾಂಚ್‍ ಇದ್ದಂತೆ ಎನ್ನುವ ಪ್ರಣಾಮ್‍, ‘ಈ ಚಿತ್ರದಲ್ಲಿ ನಟಿಸಿದ್ದಿಕ್ಕೆ ಯಾವುದೇ ಪೂರ್ವತಯಾರಿ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಣಾಮ್‍, ‘ನಾನು ಮನೆಯಲ್ಲಿ ಅಪ್ಪನ ಜೊತೆಗೆ ಹೇಗಿರುತ್ತೀನೋ, ಅದೇ ರೀತಿ ರಘು ಅವರ ಜೊತೆಗೂ ಇದ್ದೇನೆ. ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ’ ಎಂದರು.

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್‍ ಕೊಮ್ಮೆ ಸಂಕಲನವಿದೆ. ಶ್ರೀಕಾಂತ್‍ ಹುಣಸೂರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.

Tags:
error: Content is protected !!