ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಅಭಿನಯದ ಮೊದಲ ಚಿತ್ರ ‘ಕುಮಾರ್ 21 ಎಫ್’. ಆ ಚಿತ್ರದ ನಂತರ ಪ್ರಣಾಮ್ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸಿದರಾದರೂ, ಯಾವುದೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಪ್ರಣಾಮ್ ಅಭಿನಯದ ಎರಡನೇ ಚಿತ್ರ ಏಳು ವರ್ಷಗಳ ನಂತರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಪ್ರಣಾಮ್ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಆಗಸ್ಟ್.22ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಸಂಜಿತ್ ಹೆಗ್ಡೆ ಹಾಡಿರುವ ‘ಮಿಡ್ನೈಟ್ ರಸ್ತೆಯಲ್ಲಿ…’ ಎಂಬ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಧನಂಜಯ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ಪ್ರಣಾಂ ಮತ್ತು ಖುಷಿ ಹೆಜ್ಜೆ ಹಾಕಿದ್ದಾರೆ.
ತಂದೆ-ಮಗನ ಬಾಂಧವ್ಯದ ಕುರಿತಾದ ಈ ಚಿತ್ರವನ್ನು ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘2018ರಲ್ಲಿ ಮಾಡಿಕೊಂಡ ಕಥೆ ಇದು. ನನಗೆ ಆ ಸಮಯದಲ್ಲಿ ಬಜೆಟ್ ಇರಲಿಲ್ಲ. ನಾವೇ ಗೆಳೆಯರು ಒಂದಿಷ್ಟು ಜನ ಸೇರಿ ಈ ಚಿತ್ರವನ್ನು ನಿರ್ಮಿಸಬೇಕೆಂಬ ಯೋಚನೆ ಇತ್ತು. ಆ ಸಂದರ್ಭದಲ್ಲಿ ಪುರಾತನ ಫಿಲಂಸ್ನವರು ಪರಿಚಯಾಗಿ ಚಿತ್ರ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದರು. ಈ ಚಿತ್ರಕ್ಕೆ ಪ್ರಣಾಮ್ ಸೂಕ್ತ ಎಂದರು. ಅವರ ಮನೆಗೆ ಹೋದಾಗ ದೇವರಾಜ್ ಅವರ ಭೇಟಿ ಆಯ್ತು. ಈ ಚಿತ್ರದಲ್ಲಿ ಐಟಂ ಸಾಂಗ್ ಇಲ್ಲ, ಫೈಟ್ ಇಲ್ಲ, ಕಮರ್ಷಿಯಲ್ ಅಂಶಗಳಿಲ್ಲ, ಮಲಯಾಳಂ ಚಿತ್ರದ ಫೀಲ್ ಕೊಡುವಂತಹ ಚಿತ್ರ ಇದು ಎಂದೆ. ಪ್ರಣಾಮ್ಗೆ ಈ ತರಹದ ಕಥೆ ಬೇಕು ಎಂದು ದೇವರಾಜ್ ಒಪ್ಪಿಕೊಂಡರು. ಅಲ್ಲಿಂದ ಚಿತ್ರ ಶುರುವಾಯ್ತು’ ಎಂದರು.
ಚಿತ್ರದಲ್ಲಿ ಪ್ರಣಾಂ ಮತ್ತು ಅವರ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಇಬ್ಬರೂ ಪೈಪೋಟಿಯಲ್ಲಿ ನಟಿಸಿದ್ದಾರೆ ಎನ್ನುವ ಶ್ರೀಕಾಂತ್, ‘ಮುತ್ತಣ್ಣ, ಶಿವು ಎರಡು ಪಾತ್ರಗಳೂ ಅದ್ಭುತವಾಗಿದೆ. ಇನ್ನು, ಈ ಹಾಡನ್ನು ಕೇವಲ ಎರಡು ದಿನಗಳಲ್ಲಿ ಮಾಡಿದ್ದೇವೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಣಾಂ ಅವರ ನೃತ್ಯದ ವೇಗಕ್ಕೆ ಖುಷಿ ಮ್ಯಾಚ್ ಮಾಡಿದ್ದಾರೆ. ಮೊದಲೇ ಕೆಲವು ದಿನಗಳ ಕಾಲ ರಿಹರ್ಸಲ್ ಮಾಡಿ ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ’ ಎಂದರು.
ಈ ಚಿತ್ರ ತನ್ನ ಪಾಲಿಗೆ ರೀಲಾಂಚ್ ಇದ್ದಂತೆ ಎನ್ನುವ ಪ್ರಣಾಮ್, ‘ಈ ಚಿತ್ರದಲ್ಲಿ ನಟಿಸಿದ್ದಿಕ್ಕೆ ಯಾವುದೇ ಪೂರ್ವತಯಾರಿ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಣಾಮ್, ‘ನಾನು ಮನೆಯಲ್ಲಿ ಅಪ್ಪನ ಜೊತೆಗೆ ಹೇಗಿರುತ್ತೀನೋ, ಅದೇ ರೀತಿ ರಘು ಅವರ ಜೊತೆಗೂ ಇದ್ದೇನೆ. ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ’ ಎಂದರು.
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಶ್ರೀಕಾಂತ್ ಹುಣಸೂರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.





