‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಸುದೀಪ್, ‘ಮ್ಯಾಕ್ಸ್ 2’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿಬಂದಿತ್ತು. ಚಿತ್ರದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದ್ದು, ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ, ‘ಮ್ಯಾಕ್ಸ್ 2’ ಚಿತ್ರವನ್ನು ಪಕ್ಕಕ್ಕಿಟ್ಟು, ಅದರ ಬದಲು ಇನ್ನೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರವು ಸುದೀಪ್ ಅಭಿನಯದ 47ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಕೆ-47’ ಎಂದು ಕರೆಯಲಾಗುತ್ತಿದೆ. ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ.
ಇದಕ್ಕೂ ಮೊದಲು ಸುದೀಪ್ ಅಭಿನಯದ 47ನೇ ಚಿತ್ರವನ್ನು ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡಿ, ತಮಿಳಿನ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶನ ಮಾಡಬೇಕಿತ್ತು. ಆದರೆ, ಚೇರನ್ ಚಿತ್ರ ಮುಂದೆ ಹೋದ ಕಾರಣ, ಅದರ ಬದಲು ವಿಜಯ್ ಕಾರ್ತಿಕೇಯ ನಿರ್ದೇಶನದ ಚಿತ್ರ ಮೊದಲು ಪ್ರಾರಂಭವಾಗಲಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಫಿಲಂಸ್ ಸಂಸ್ಥೆಯು, ‘ಸತ್ಯಜ್ಯೋತಿ’ ಚಿತ್ರವನ್ನು ನಿರ್ಮಿಸಿತ್ತು. ಈಗ 39 ವರ್ಷಗಳ ನಂತರ ಸಂಸ್ಥೆಯು ಮತ್ತೆ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ.
ಚಿತ್ರದ ಕುರಿತು ಮಾತನಾಡಿದ ಸುದೀಪ್, ‘’ಮ್ಯಾಕ್ಸ್’ ನಂತರ ನಾನು ಮತ್ತು ವಿಜಯ್ ಕಾರ್ತಿಕೇಯ ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ‘ಮ್ಯಾಕ್ಸ್ 2’ ಸಿನಿಮಾ ಕೈ ಬಿಟ್ಟಿದ್ದೇವಿ. ಈ ವರ್ಷ ಎರಡು ಸಿನಿಮಾ ಮಾಡುತ್ತೇವೆ. ‘ಬಿಲ್ಲ ರಂಗ ಬಾಷ’ ಚಿತ್ರವು ಈ ವರ್ಷ ಬಿಡುಗಡೆ ಆಗುವುದಿಲ್ಲ. ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ‘ಬಿಗ್ ಬಾಸ್’ ಶುರು ಆಗಲಿದೆ’ ಎಂದು ಸುದೀಪ್ ಹೇಳಿದ್ದಾರೆ.
ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.





