ಕೆಲವು ವರ್ಷಗಳ ಹಿಂದಿನ ಮಾತು. ನೀನಸಾಂ ವಿದ್ಯಾರ್ಥಿಗಳು ಮತ್ತು ತಂಡದವರು ಸೇರಿ ಮಾಡುತ್ತಿರುವ ‘ಹಿಕೋರಾ’ ಎಂಬ ಚಿತ್ರದ ಮುಹೂರ್ತಕ್ಕೆ ಬಂದು, ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಚಿತ್ರವು ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ.
‘ಹಿಕೋರಾ’ ಚಿತ್ರವನ್ನ ರತ್ನ ಶ್ರೀಧರ್ ನಿರ್ಮಿಸಿದ್ದು, ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚತ್ರದ ಕರಿತು ಮಾತನಾಡುವ ಕಿಟ್ಟಿ, ‘ನಾನು ನೀನಾಸಂನ ವಿದ್ಯಾರ್ಥಿ. ಅಲ್ಲೇ ನಟನೆ ಕಲಿತದ್ದು. ನಿರ್ಮಾಪಕಿ ರತ್ನ ಹಾಗೂ ಅವರ ಪತಿ ಶ್ರೀಧರ್ ನೀನಾಸಂನಲ್ಲೇ ಮೆಸ್ ನಡೆಸುತ್ತಿದ್ದರು. ಅವರ ಕೈತುತ್ತು ತಿಂದು ಬೆಳೆದವನು ನಾನು. ರತ್ನ ಶ್ರೀಧರ್ ಅವರು ಕರೋನಕ್ಕೂ ಸ್ವಲ್ಪ ದಿನಗಳ ಮುಂಚೆ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ನಂತರ ಕೊರೋನಾ ಮುಂತಾದ ಕಾರಣಗಳಿಂದ ಚಿತ್ರ ತಡವಾಗಿ, ಇದೀಗ ಬಿಡುಗಡೆ ಹಂತಕ್ಕೆ ಚಿತ್ರ ಬಂದಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದರು.

ಇಷ್ಟಕ್ಕೂ ‘ಹಿಕೋರಾ’ ಎಂದರೇನು? ‘ಕೊರೋನ ಎಂದರೆ ವೈರಸ್ ಎಂದು ಎಲ್ಲರಿಗೂ ಗೊತ್ತು. ಅದನ್ನು ಹೋಗಲಾಡಿಸಲು ಅನೇಕ ಆಂಟಿ ವೈರಸ್ ಕಂಡು ಹಿಡಿಯಲಾಯಿತು. ‘ಹಿಕೋರಾ’ ಕೂಡ ಒಂದು ಆಂಟಿ ವೈರಸ್. ಹಾಗಾದರೆ ವೈರಸ್ ಯಾವುದು? ಅದನ್ನು ತಿಳಿಯಲು ನೀವು ನಮ್ಮ ಸಿನಿಮಾ ನೋಡಬೇಕು’ ಎಂದರು ನಿರ್ದೇಶಕ ಹಾಗೂ ನಟ ನೀನಾಸಂ ಕಿಟ್ಟಿ.
ಈ ಹಿಂದೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಸ್ಪಂದನಾ ಪ್ರಸಾದ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘ಈ ಸಮಯದಲ್ಲಿ ನಾನು ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳಬೇಕು. ಅವರು ನನಗೆ ಹೇಳಿದ ಮಾತು ನಾನು ಈ ಚಿತ್ರದಲ್ಲಿ ನಟಿಸಲು ಸ್ಪೂರ್ತಿ’ ಎಂದರು ಸ್ಪಂದನ ಪ್ರಸಾದ್.
‘ಹಿಕೋರಾ’ ಚಿತ್ರದಲ್ಲಿ ಸರ್ದಾರ್ ಸತ್ಯ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರತ್ನಕ್ಕ ಅವರ ಅನ್ನದ ಋಣ ನನ್ನ ಮೇಲಿದೆ. ನಾನು ನೀನಾಸಂನಲ್ಲಿದ್ದಾಗ ಅವರಿಂದ ಬೇಕಾದನ್ನು ಮಾಡಿಸಿಕೊಂಡು ತಿಂದಿದ್ದೇನೆ. ಒಂದು ದಿನ ರತ್ನಕ್ಕ ಬಂದು ಈ ಚಿತ್ರದಲ್ಲಿ ನಟಿಸಬೇಕು ಎಂದರು. ಜೊತೆಗೆ ಸಂಭಾವನೆಯನ್ನು ಕೇಳಿದರು. ನಾನು ಕೇವಲ ಒಂದು ರೂಪಾಯಿ ಪಡೆದು ಈ ಚಿತ್ರದಲ್ಲಿ ನಟಿಸಿದ್ದೇನೆ’ ಎಂದು ನಟ ಸರ್ದಾರ್ ಸತ್ಯ ಹೇಳಿದರು.
‘ಹಿಕೋರಾ’ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ತಮ್ಮದೇ ಹಾಡಿಯೋ ಆಡಿಯೋ ಸಂಸ್ಥೆ ಮೂಲಕ ಹಾಡುಗಳನ್ನು ಹೊರತಂದಿದ್ದಾರೆ.





