ಹೊಸಬರೇ ಸೇರಿ ಮಾಡಿರುವ ‘ಎಲ್ಟು ಮುತ್ತಾ’ ಚಿತ್ರವು ಜುಲೈ ಕೊನೆಯಲ್ಲಿ ಅಥವಾ ಆಗಸ್ಟ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದಕ್ಕೂ ಮೊದಲು ರಾ.ಸೂರ್ಯ ನಿರ್ದೇಶನದ ‘ಎಲ್ಟು ಮುತ್ತಾ’ ಚಿತ್ರದ ಹಾಡುಗಳನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಹೈ 5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್. ಶ್ರೀನಿವಾಸನ್ ನಿರ್ಮಿಸಿರುವ, ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ ಮುಂತಾದವರು ಅಭಿನಯಿಸಿರುವ ‘ಎಲ್ಟು ಮುತ್ತಾ’ ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಹುಬ್ಬಳ್ಳಿಯ ರಾಯಲ್ ರಿಟ್ಜ್ ರೆಸಾರ್ಟ್ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ 50 ವರ್ಷ ಪೂರೈಸಿದ ಸಂಗೀತಾ ಕಟ್ಟಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ಕಟ್ಟಿ, ‘L2 ಅಂದರೆ Latitude, Longitude (ಅಕ್ಷಾಂಶ, ರೇಖಾಂಶ) ಎಂದರ್ಥ. ‘ಎಲ್ಟು ಮುತ್ತಾ’ ಚಿತ್ರ ಸಹ ದೇಶದ, ಪ್ರಪಂಚದ ಉದ್ಧಗಲಕ್ಕೂ ಹೆಸರು ಮಾಡಲಿ’ ಎಂದು ಹಾರೈಸಿದರು.
ಇದೊಂದು ಸಾರ್ವತ್ರಿಕ ಕಥೆ ಎನ್ನುವ ನಿರ್ದೇಶಕ ರಾ. ಸೂರ್ಯ, ‘ನಾನು ಮೂಲತಃ ಕೊಡಗಿನವನು. ನಾನು ಈ ಜನರನ್ನು ನೋಡಿದ್ದೇನೆ. ಕೆಲವರು ಬದುಕಿದ್ದಾರೆ. ಇನ್ನೂ ಕೆಲವರು ಈಗಿಲ್ಲ. ಅವರ ಜೀವನವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡಿದ್ದೇನೆ. ಇದು ಬರೀ ಕೊಡಗಿನ ಕಥೆಯಲ್ಲ, ಕೊಡಗಿನ ಕಥೆಯನ್ನು ಇಡೀ ಕರ್ನಾಟಕಕ್ಕೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
ನಾಯಕನಾಗಿ ನಟಿಸಿರುವ ಶೌರ್ಯ ಪ್ರತಾಪ್ ಮಾತನಾಡಿ, ‘ಈ ಚಿತ್ರದಲ್ಲಿ ನಾನು ಮುತ್ತನ ಪಾತ್ರದಲ್ಲಿ ನಟಿಸಿದ್ದೇನೆ ಎನ್ನುವದಕ್ಕಿಂತ ಮುತ್ತನಾಗಿ ಜೀವಿಸಿದ್ದೇನೆ. ಪಾತ್ರಕ್ಕೆ ದೈಹಿಕವಾಗಿ ತಯಾರಾಗುವುದಕ್ಕಿಂತ ಮಾನಸಿಕವಾಗಿ ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದರು.
ನಾಯಕಿ ಪ್ರಿಯಾಂಕಾ ಮಳಲಿ ಮಾತನಾಡಿ, ‘ಕೊಡಗಿನಲ್ಲಿ ಇಂಥದ್ದೊಂದು ಜನಾಂಗ ನನಗೆ ಗೊತ್ತಿರಲಿಲ್ಲ. ನಿರ್ದೇಶಕರು ಹೇಳಿದ ಮೇಲೆ ಗೊತ್ತಾಗಿದ್ದು. ಈ ಪಾತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸುಮಾರು ಮೂರು ದಿನಗಳ ಕಾಲ ಬೇಕಾಯಿತು. ನಾಲ್ಕನೇ ದಿನ ನಾನೇ ಪಾತ್ರವಾಗಿ ಹೋದೆ. ಸಿನಿಮಾಗಾಗಿ ಒಂದೂವರೆ ತಿಂಗಳ ಕಾಲ ಸತತ ಚಿತ್ರೀಕರಣ ಮಾಡಿದ್ದೇವೆ. ಬೆಂಗಳೂರಿಗೆ ವಾಪಸ್ಸಾದ ನಂತರ ಆ ಗುಂಗಿನಿಂದ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಚಿತ್ರದಿಂದ ತುಂಬಾ ಕಲಿತಿದ್ದೇನೆ. ನನಗೆ ಇಂಥದ್ದೊಂದು ಅವಕಾಶ ಕೊಟ್ಟ ತಂಡದವರಿಗೆ ನಾನು ಆಭಾರಿ’ ಎಂದರು.
‘ಎಲ್ಟು ಮುತ್ತಾ’ ಚಿತ್ರದ ಟ್ರೇಲರ್ ಜುಲೈ 16ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.





