ಡಿಸಿ ಕಚೇರಿಗೆ ಬಂದೋಬಸ್ತ್ಗಾಗಿ ಹೋಗಿದ್ದವನು ಊಟಕ್ಕೆ ನೇರವಾಗಿ ಮನೆಗೆ ಹೋದೆ. ಮಧ್ಯಾಹ್ನ ಮೂರು ಮೀರಿತ್ತು. ಬೆಳಿಗ್ಗೆಯಿಂದ ಬಿಸಿಲಲ್ಲಿ ಬೆಂದು ವಿಪರೀತ ಸುಸ್ತಾಗಿತ್ತು. ಊಟ ಮಾಡಿ ಉರುಳೋಣವೆಂದು ತಟ್ಟೆ ಮುಂದೆ ಕುಳಿತೆ. ಅರ್ಧ ಸಾಗಿತ್ತು. ಠಾಣೆಯಿಂದ ಕರೆ. ಫೋನೆತ್ತಿಕೊಂಡೆ. ಲಷ್ಕರ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್. ರಾಜೇಂದ್ರ ಮಾತಾಡುತ್ತಿದ್ದರು. “ಅಟ್ರಾಸಿಟಿ ಕೇಸು ಬಂದಿದೆ ಸಾರ್. ಕೆಇಬಿ ಯೂನಿಯನ್ ಸೆಕ್ರೆಟರಿ ತನ್ನ ಮಗಳ ಮದುವೆಗೆ ಸಹೋದ್ಯೋಗಿಗಳನ್ನೆಲ್ಲ ಆಹ್ವಾನಿಸಿದ್ದನಂತೆ. ಗೋವರ್ಧನ್ ಹೋಟೆಲ್ಲಿನಲ್ಲಿ ಮಧ್ಯಾಹ್ನದ ರಿಸೆಪ್ಷನ್ ಇಟ್ಟುಕೊಂಡಿದ್ದ. ಪಕ್ಕದಲ್ಲೇ ಕೆಇಬಿ ಆಫೀಸ್ . ಎಲ್ಲರೂ ಆರತಕ್ಷತೆಗೆ ಬಂದು , ಉಡುಗೊರೆಗಳನ್ನೂ ಕೊಟ್ಟು ಫೋಟೋ ತೆಗೆಸಿಕೊಂಡರು. ಆದರೆ 80% ಜನ ಯಾರೂ ಊಟಾ ಮಾಡದೆ ಏನೇನೋ ಸಬೂಬು ಹೇಳಿಕೊಂಡು ಹೋದರಂತೆ. ಅವನು ಗೋವರ್ಧನ್ ಹೋಟಲಲ್ಲಿ ರಿಸೆಪ್ಷನ್ ಇಟ್ಟುಕೊಂಡದ್ದೇ ತನ್ನ ಸಹೋದ್ಯೋಗಿಗಳಿಗಾಗಿ. ಅವರು ಬೇಕೆಂದೇ ಊಟವನ್ನು ಮಾಡದೆ ಬಾಯ್ಕಾಟ್ ಮಾಡಿ ಹೋಗಿರುವುದರಿಂದ ಜಾತಿ ತಾರತಮ್ಯ ಮಾಡಿದ್ದಾರೆ . ದಲಿತರ ಮೇಲಿನ ದೌರ್ಜನ್ಯದ ಕೇಸು ಹಾಕಬೇಕು ಅಂತ ಲಿಖಿತ ಕಂಪ್ಲೇಂಟ್ ತಂದಿದ್ದಾನೆ” .
“ ಮದುವೆ ಮಾಡೋದು ಬಿಟ್ಟು ಕಂಪ್ಲೇಂಟ್ ಹಿಡ್ಕಂಡು ಅಲ್ಲಿಗೆ ಬಂದಿದ್ದಾನಾ?” ಕೇಳಿದೆ.
“ ಇಲ್ಲಾ ಸಾರ್. ಮದುವೆಯಾಗಿ ಆಗ್ಲೇ ಆರೇಳು ದಿನಗಳಾಗಿವೆ . ಈವತ್ತು ಕಂಪ್ಲೇಂಟ್ ಬರಕೊಂಡು ಬಂದಿದ್ದಾನೆ.”
“ ಯಾರ್ರೀ ಅದು? ಊಟಕ್ಕೆ ಕರೆಯೋದು ನಮ್ಮ ಧರ್ಮ. ಬರೋದು ಬಿಡೋದು ಅತಿಥಿಗಳಿಗೆ ಸೇರಿದ್ದು. ರಿಸೆಪ್ಷನ್ನಿಗೆ ಬಂದು ಗಿಫ್ಟ್ ಕೊಟ್ಟು , ಫೋಟೋನೂ ತೆಗಿಸ್ಕೊಂಡು ಹೋಗಿದ್ದಾರೆ ಅಂದ್ರೆ , ಅವನ ಆಹ್ವಾನಕ್ಕೆ ಮರ್ಯಾದೆ ಕೊಟ್ಟಿದ್ದಾರೆ ಅಂತ ತಾನೇ ಅರ್ಥ? ಅದರಲ್ಯಾವ ಹುಳುಕು ಕಂಡನಂತೆ ಅವನು? ಯಾರು ಆ ಮಹಾನುಭಾವ? ” ಕೇಳಿದೆ.
“ ಅವನೇ ಸಾರ್ ಆ ಹುಟ್ಟು ತರಲೆ. ತುಂಬುದೋಳಿನ ಸಫಾರಿ ಹಾಕ್ಕಂಡು ತಿರುಗುತ್ತಾನಲ್ಲಾ? ಆ ನಿಂಗಯ್ಯ. ಅವನೇ ಈ ಬಾರಿ ಯೂನಿಯನ್ ಸೆಕ್ರೆಟರಿ ಆಗಿದ್ದಾನೆ.”
“ ಯಾರು? ಆ ಪೊರಕೆ ಮೀಸೆ ನಿಂಗಯ್ಯನಾ? ಕಿರಾತಕ ಸೂ*ಮಗ. ಅವನದ್ದೇನ್ರೀ ಕಂಪ್ಲೇಂಟು? ಎಲ್ಲಿದ್ದಾನೆ ಅವನು?”
“ ನನ್ನ ಆಫೀಸ್ ರೂಮಲ್ಲಿ ಕೂರಿಸಿದ್ದೇನೆ ಸರ್. ನಿಮ್ಮ ಚೇಂಬರ್ ಫೋನಿಂದ ಮಾತಾಡ್ತಿದ್ದೇನೆ. ಕೇಸು ತಗೊಳ್ಳೋದೋ ಹೇಗೆ?”
“ ಈ ಹೂಸಿದ್ದು ಕೆಮ್ಮಿದ್ದಕ್ಕೆಲ್ಲಾ ಕೇಸು ರಿಜಿಸ್ಟರ್ ಮಾಡ್ತಾ ಕೂತ್ರೆ ಆಗುತ್ತೇನ್ರೀ? ಈಗಲೇ ಊಟ ಮುಗಿಸಿಕೊಂಡು ಬರ್ತೀನಿ. ಅವನಿಗೂ ಊಟಾ ಗೀಟಾ ತಿಂದು ಬರೋಕೆ ಹೇಳಿ. ಹೊಟ್ಟೆ ತಂಪಾದ್ರೆ ನಾವು ಹೇಳೋದಾದ್ರೂ ತಲೆಗೆ ಹೋಗಬೌದು !”
ದಲಿತರ ಮೇಲಿನ ದೌರ್ಜನ್ಯದ ಅಪರಾಧ ಅಂದರೆ ಘೋರ ಅಪರಾಧದ ಕೇಸು. ದೂರು ಬಂದ ತಕ್ಷಣ ದೂಸರಾ ಮಾತಾಡದೆ ಕೇಸು ದಾಖಲು ಮಾಡಿ, ಎ–ಐಆರ್ ಅನ್ನು ವಿಳಂಬಕ್ಕೆಡೆ ಕೊಡದಂತೆ ಬೇಗ ಕೋರ್ಟಿಗೆ ಕಳಿಸಿ ತನಿಖೆ ಕೈಗೆತ್ತಿಕೊಳ್ಳಬೇಕು. ಬೇರೆಲ್ಲ ಕೇಸುಗಳಿಗಿಂತ ಅದಕ್ಕೆ TOP PRIORITY. ಮೇಲಧಿಕಾರಿಗಳೆಲ್ಲರಿಗೂ express fir ಕಳಿಸಿ ತ್ವರಿತವಾಗಿ ಕ್ರಮ ಜರುಗಿಸಬೇಕು. ಅಪರಾಧಿಗಳನ್ನು ತಕ್ಷಣ ಬಂಧಿಸಬೇಕು. ನೊಂದ ದಲಿತರಿಗೆ ರಕ್ಷಣೆ ಕೊಡುವಲ್ಲಿ ಒಂದಿನಿತೂ ಲೋಪವಾಗಕೂಡದು. ವಿಳಂಬವಾಗಕೂಡದು. ಅದು ತೊಂಬತ್ತರ ದಶಕ. 1989ರ ಅಟ್ರಾಸಿಟಿ ಕಾನೂನು ಬಂದು ಆಗಿನ್ನೂ ಆರು ವರ್ಷವಾಗಿತ್ತು. ರೂಲ್ಸುಗಳು ಬಂದದ್ದೂ ಕೇವಲ ವರ್ಷದ ಹಿಂದೆ. ಹೊಸ ಕಾನೂನಿನ ವ್ಯಾಪ್ತಿ, ವ್ಯಾಖ್ಯೆಯ ಬಗ್ಗೆ ನಮಗೇ ಅನೇಕ ಅನುಮಾನ ಗೊಂದಲಗಳಿದ್ದವು.
ಕೊಟ್ಟಿರುವ ಕಂಪ್ಲೇಂಟು ನಿಜವೋ ಸುಳ್ಳೋ , ಉತ್ಪ್ರೇಕ್ಷೆಯೋ ಮುಖ್ಯವಲ್ಲ. ಪೊಲೀಸ್ ಅಧಿಕಾರಿ ಅದನ್ನೆಲ್ಲಾ ತರ್ಕಿಸುತ್ತಾ ವಿಳಂಬ ಮಾಡುವಂತಿಲ್ಲ. ಕೋಣ ಈದಿದೆ ಎಂದರೆ ಏಕೂ ಪೂಕು ವಿಚಾರಿಸದೆ , ಮರು ಮಾತಾಡದೆ ಕೊಟ್ಟಿಗೆಗೆ ಕಟ್ಟಲೇ ಬೇಕು. ಯಾಕೆಂದರೆ ಅಟ್ರಾಸಿಟಿ ಕೇಸೇ ಹಾಗೆ. ತರ್ಕಕ್ಕೆ , ವಿಶ್ಲೇಷಣೆಗೆ ಅವಕಾಶವಿಲ್ಲ.
ಠಾಣೆಗೆ ಜೀಪಿನಲ್ಲಿ ಹೊರಟವನಿಗೆ ಈ ಕೇಸಿನ ಗೊಂದಲ ಕಾಡತೊಡಗಿತು. ಅವನು ಕಂಪ್ಲೇಂಟ್ ಕೊಟ್ಟಿರುವುದು , ದಿನ ಬೆಳಗಾದರೆ ಮುಖ ನೋಡಬೇಕಾದ ಸಹೋದ್ಯೋಗಿಗಳೆಲ್ಲರ ವಿರುದ್ಧ. ಕೇಸ್ ಸ್ವೀಕರಿಸುವಾಗ ಕೊಂಚ ಕಿರಿಕ್ ಆದರೂ ರಾಣಾರಂಪ ಮಾಡುತ್ತಾನೆ. ಪತ್ರಿಕಾಗೋಷ್ಠಿ ಕರೆದು ಪೊಲೀಸರ ವಿರುದ್ಧವೇ ಇನ್ನಿಲ್ಲದ ಆರೋಪಗಳ ಸುರಿಮಳೆ ಸುರಿಯುತ್ತಾನೆ. ಅವನು ಹಿಡಿದದ್ದೇ ಹಠ. ದೊಡ್ಡ ತಂಟಲಮಾರಿ. ಜೊತೆಗೆ ಅಪ್ಪಳಿಸುವ ಅನಾಗರಿಕ ರಾಗ!
ವಿಷಯ ತಿಳಿದೊಡನೆ , ನಮ್ಮ ಎಸಿಪಿಯವರಿಗೆ ಮನೆಯಿಂದಲೇ ಫೋನ್ ಮಾಡಿ ತಿಳಿಸಿದ್ದೆ. “ಅವನಾಗಿ ಕಂಪ್ಲೇಂಟು ಕೊಟ್ಟಿರುವುದರಿಂದ ನಿರಾಕರಿಸುವುದಕ್ಕೆ ಬರೋದಿಲ್ಲ. ಮೊದಲು ರಿಜಿಸ್ಟರ್ ಮಾಡಿಬಿಡಿ. ವಿಳಂಬ ಅಂತಾಗಬಾರದು. ಪೊಲೀಸ್ನೋರ ಮೇಲೆ ಗೂಬೆ ಕೂರಿಸೋದಿಕ್ಕೆ ಅವನು ಏನೇನೋ ಹೇಳಿಕೆ ಕೊಡೋದು, ಧರಣಿ ಕೂರೋದೆಲ್ಲ ಬೇಡ. dont give room for such nonsens ಎಂದಿದ್ದರು.
ಕೆಇಬಿ ಯೂನಿಯನ್ ಎಂಬುದು ನಾನಾ ಒಳ ಜಗಳಗಳಿಂದ , ಗುಂಪುಗಾರಿಕೆಯಿಂದ ತುಂಬಿ ಹೋಗಿತ್ತು. ಯಾವ್ಯಾವುದೋ ಹಡತರಲೆ ವಿಚಾರಕ್ಕೆಲ್ಲ ಕೇಸು ಕೌಂಟರ್ ಕೇಸುಗಳು ಬರುತ್ತಲೇ ಇದ್ದವು. ಮಾತೆತ್ತಿದರೆ ಜಗಳ, ಧರಣಿ ಹೊಡೆದಾಟ ಇದ್ದದ್ದೇ. ಇವನ ಈ ಕಂಪ್ಲೇಂಟು ಬರಿ ಒಬ್ಬನದಲ್ಲ. ಅದರಲ್ಲೂ ಸೆನ್ಸೇಷನಲ್ ಕೇಸು. ನ್ಯಾಯಾ ನ್ಯಾಯ ಯಾವನಿಗೆ ಬೇಕು? ಈ ನೆಪದಲ್ಲಿ ನಾನಾ ಕಿತಾಪತಿಗಳು ಹುಟ್ಟಿ ಎಲ್ಲೆಲ್ಲಿಗೋ ವ್ಯಾಪಿಸುವುದು ನಿಶ್ಚಿತ.
ಠಾಣೆಗೆ ಬಂದಾಗ ನನ್ನ ಬರವಿಗಾಗೇ ಕಾದಿದ್ದ ನಿಂಗಯ್ಯ ಅರ್ಜಿ ಕೊಟ್ಟ . ವ್ಯಗ್ರತೆಯ ಮುಖದಲ್ಲಿ ಪೊರಕೆ ಮೀಸೆಗಳು ನಿಗುರಿದ್ದವು. ದೂರು ಅರ್ಜಿಯನ್ನು ಓದಿದೆ. ದೌರ್ಜನ್ಯದ ವ್ಯಾಖ್ಯೆಗೆ ಒಗ್ಗುವಂತೆ ಕಂಪ್ಲೇಂಟನ್ನು ನೀಟಾಗಿ ಬರೆದಿದ್ದ.
“ ನಿಂಗಯ್ಯನೋರೇ, ನಿಮ್ಮ ಕೇಸನ್ನು ತಗೊಳ್ಳಲೇ ಬೇಕು , ತಗೋಳ್ತೀನಿ. ಅದ್ರಲ್ಲಿ ಎರಡನೇ ಮಾತಿಲ್ಲ. ಆದರೆ ನೀವು ಇನ್ನೊಮ್ಮೆ ಯೋಚನೆ ಮಾಡಿ ಕಂಪ್ಲೇಂಟ್ ಕೊಡಿ. ಎಐಆರ್ ಆದ ಮೇಲೆ ಮನಸ್ಸು ಬದಲಾಯಿಸಿ , ಕಂಪ್ಲೇಂಟ್ ವಾಪಸ್ ತಗೋತೀನಿ ಅಂತ ನೀವು ಯಾವ ಕಾರಣಕ್ಕೂ ಹೇಳುವಂತಿಲ್ಲ. ಯಾಕೆಂದರೆ ಅವರೆಲ್ಲಾ ನಿಮ್ಮ ಜೊತೆಲೇ ಇರೋ ಕೊಲೀಗ್ಸ್. ಅವರ ಸಪೋರ್ಟಿನಿಂದಾನೆ ನೀವು ಸೆಕ್ರೆಟ್ರಿ ಆಗಿದ್ದೀರಾ. ಒಂದು ಸಾರಿ ಕೇಸು ರಿಜಿಸ್ಟರ್ ಆದಮೇಲೆ ಮುಗೀತು. ಅದೇ ಫೈನಲ್.”
“ ಏನಿಲ್ಲಾ ಸಾರ್. ಎಲ್ಲಾನೂ ಚೆನ್ನಾಗಿ ಯೋಚ್ನೆ ಮಾಡೇ ಕಂಪ್ಲೇಂಟ್ ಕೊಡ್ತಾ ಇದ್ದೀನಿ. ಕಳೆದ ನಾಲ್ಕಾರು ದಿನಗಳಿಂದ ನೆಮ್ಮದೀನೆ ಹೋಗಿದೆ. ಮದುವೆ ಮಾಡಿದ ಸಂತೋಷಾನೂ ಉಳಿದಿಲ್ಲ. ನಾನು ಎಷ್ಟು ಪ್ರೀತಿಯಿಂದ ನಮ್ಮ ಕೊಲೀಗ್ಸ್ ಗೆಲ್ಲಾ ಒಂದೊಳ್ಳೇ ಊಟ ಕೊಡಿಸೋಣ ಅಂತ , ನಮ್ಮ ಆಫೀಸ್ ಪಕ್ಕದ ಗೋವರ್ಧನ್ ಹೋಟಲಿನಲ್ಲೇ ಆರತಕ್ಷತೆ ಏರ್ಪಾಡು ಮಾಡಿದ್ದೆ. ಬ್ರಾಮುಂಡ್ರುಗಳ ರೀತಿನೇ ಅಡುಗೆ ಮಾಡಿಸಿದ್ದೆ. ಮದುವೆಗೇನೋ ಎಲ್ಲಾ ಬಂದ್ರು. ಆದ್ರೆ ಮುಕ್ಕಾಲು ಭಾಗ ಊಟಾನೇ ಮಾಡ್ಲಿಲ್ಲ. ಮೊದ್ಲೇ ಊಟಾ ಮಾಡ್ಕಂಡು ಬಂದಿದ್ದೋ , ಹೊಟ್ಟೆನೋವು , ಭೇದಿ ಅಂತ ಹೇಳ್ಕಂಡು ಹೋಗೇಬಿಟ್ರು. ಇನ್ನು ಕೆಲವರು ಊಟ ಮಾಡ್ತೀವಿ ಅಂತ ಠಲಾಯಿಸಿ ಹಂಗೇ ನುಣುಚಿಕೊಂಡ್ರು . . . . . “
ಅವನ ಮಾತನ್ನು ಕಟ್ ಮಾಡಿ ಹೇಳಿದೆ, “ ಅಲ್ರೀ , ಊಟ ತನ್ನಿಚ್ಛೆ ಅಂತಾರೆ. ಅವರು ಊಟ ಮಾಡದಿದ್ರೆ ಕತ್ತೆಬಾಲ. ನೀವಂತೂ ಬಾಯ್ತುಂಬಾ ಆತ್ಮೀಯವಾಗಿ ಕರೆದಿದ್ದೀರಿ. ಅವರೆಲ್ಲಾ ಬಂದಿದ್ದಾರೆ. ನಗುನಗುತ್ತಾ ಫೋಟೋ ತೆಗೆಸಿಕೊಂಡು ಗಿಫ್ಟನ್ನೂ ಕೊಟ್ಟು ಹೋಗಿದ್ದಾರೆ. ಅದು ನಿಮಗೆ ಕೊಟ್ಟಿರೋ ಗೌರವವೇ ಅಲ್ಲವೇ? ಯಾಕೆ ತಕರಾರು ಬೆಳೆಸ್ತೀರಿ? ಬೇಕಾದ್ರೆ ಅವರನ್ನೆಲ್ಲಾ ಕರೆಸುತ್ತೇನೆ. ನೀವೂ ಒಂದು ಸಾರಿ ಮಾತಾಡಿ. ಆಗಲೂ ನಿಮಗೆ ಸಮಾಧಾನ ಆಗ್ಲಿಲ್ಲ ಅಂದ್ರೆ ಕಂಪ್ಲೇಂಟು ಕೊಡಿ. ದುಡುಕಬೇಡಿ. ಅವರೆಲ್ಲಾ ನಿಮ್ಮ ಜೊತೆ ಕೆಲಸಾ ಮಾಡೋರು. ದಿನ ಬೆಳಗಾದರೆ ನಿಮ್ಮ ಮುಖ ಅವರು ನೋಡ್ಬೇಕು. ನೀವೂ ಅಷ್ಟೇ. . . . . . “
“ ಏನು ಮಾತಾಡ್ತಿದ್ದೀರಿ ಸಾರ್ ನೀವೂನು. ಒಬ್ಬ ದಲಿತನಿಗಾದ ನೋವು ಎಂಥದ್ದು ಅಂತ ನಿಮಗೆ ಗೊತ್ತಾಗೋದಿಲ್ಲ ಅಲ್ವಾ ? ಅವರ ಪರವಾಗೇ ಮಾತಾಡ್ತಿದ್ದೀರಾ? ನಾನಾಗ್ಲಿಂದ ಹೇಳ್ತಾನೆ ಇದ್ದೇನೆ ನೀವು ಕಿವೀಗೆ ಹಾಕ್ಕಂತಿಲ್ಲ. ಈ ಕೊಲೀಗ್ಸ್ ಗಳಿಗೋಸ್ಕರವೇ ನಾನು ಅ ಹೋಟ್ಲಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದು. ಇವರಿಗೆ ಬೇಕಾದ ಅಡುಗೆ ಮಾಡಿಸಿದ್ದು. ಆ ಪ್ರೀತೀನೇ ಇವರು ಅರ್ಥ ಮಾಡಿಕೊಳ್ಳಲಿಲ್ಲ ನೋಡಿ. ಇವರಿಗೆಲ್ಲಾ ಏನಾದ್ರೂ ತೊಂದ್ರೆಯಾದ್ರೆ ನಾನು ಮುಂದೆ ನಿಂತು ಹೋರಾಟ ಮಾಡಿ ನ್ಯಾಯ ಕೊಡ್ಸಿ ದ್ದೀನಿ. ಇವರುಗಳಿಗೋಸ್ಕರ ನಮ್ಮ ಮೇಲಧಿಕಾರಿಗಳ ಜೊತೆ ವಿರೋಧ ಕಟ್ಟಿ ಕೊಂಡಿದ್ದೇನೆ. ನಿಜಾ ಹೇಳಬೇಕೂ ಅಂದ್ರೆ ನನಗೆ ಮದುವೆ ಮಾಡೋ ಶಕ್ತೀನೇ ಇಲ್ಲ. ಆದರೂ ಸಾಲ ಸೋಲ ಮಾಡಿ ಆರತಕ್ಷತೆ ಮಾಡಿದ್ರೆ , ಜಾತಿ ನೆಪ ಮಾಡಿಕೊಂಡು ಊಟಾನೇ ಮಾಡದೆ ಹೋಗಿದ್ದಾರಲ್ಲಾ? ಇದು ನಿಮಗೆ ದೌರ್ಜನ್ಯ ಅನ್ನಿಸೋದಿಲ್ವಾ? ” ಎಂದು ಅಟಕಾಯಿಸಿಕೊಂಡ. ಮೊದಲೇ ಚಳವಳಿಕೋರ. ಜಗಳಗಂಟ ಗಂಟಲು. ನನಗೆ ನಾನೇ ತಪ್ಪಿತಸ್ಥನೆನೆಸಿ ದನಿ ಉಡುಗಿತು.
ಬಾಗಿಲ ಬಳಿ ನಿಂತಿದ್ದ ದಫೇದಾರರು ಬರುವಂತೆ ನನಗೆ ಕಣ್ಸನ್ನೆ ಮಾಡಿದರು. ಏನೋ ಫೈಲ್ ತೆಗೆದುಕೊಳ್ಳುವ ನೆಪದಲ್ಲಿ ಎದ್ದು ಛೇಂಬರಿನ ಹೊರಬಂದೆ.
“ ಸಾರ್ ಈ ನನ್ಮಗ ಸರಿಯಾದ ಕಿರಾತಕ. ರಿಸೆಪ್ಷನ್ನಿಗೆ ಸೀಮೆಲಿಲ್ಲದ ಖರ್ಚು ಮಾಡಿದ್ದೀನಿ ಅಂತ ಗಫಾ ಹೊಡೆದು ಡಬಲ್ ವಸೂಲ್ ಮಾಡೋ ಹುನ್ನಾರ ಮಾಡಿದ್ದಾನೆ. ಭಾರಿ ಅವಮಾನ ಆಗಿದೆ ಲಾಸಾಗಿದೆ ಅಂತ ಬಣ್ಣ ಕಟ್ತಿದ್ದಾನೆ. ನಂಗೊತ್ತು ಇವನು ವಸೂಲಿ ಬಡ್ಡಿಮಗ. ಮದುವೆಯಾಗಿ ಒಂದು ವಾರದ ಮೇಲೆ ಇವನಿಗೆ ದಲಿತ ನ್ಯಾಯದ ಜ್ಞಾನೋದಯ ಆಗೈತೆ ಅಂತಾನಲ್ಲ ಸಾರ್” ಎಂದು ದಫೇದಾರರು ಬುದ್ಧಿಚುರುಕು ಕೊಟ್ಟರು. ಅವರೂ ದಲಿತರೇ.
ಹಿಂದಿನ ನಾಲ್ಕೈದು ಕಾರ್ಮಿಕ ಗಲಾಟೆಗಳಲ್ಲಿ ನಿಂಗಯ್ಯನನ್ನು ಗಮನಿಸಿದ್ದೆ. ಎಷ್ಟು ದೊಡ್ಡ ಅಧಿಕಾರಿಯೇ ಇರಲಿ. ಮುಖ ಮುಸಡಿ ನೋಡದೆ ಉಛಾಯಿಸಿ ಮಾತಾಡಿ ಬಿಡುತ್ತಿದ್ದ. ವಿಶ್ವಾಮಿತ್ರನ ರೀತಿ ಕೈಯೆತ್ತಿ ದಬಾಯಿಸುತ್ತಿದ್ದ. ಕ್ಯಾಂಟಾಂಕ್ರಸ್ (cantankerous) ಹೆಸರಿಗೆ ಲಗತ್ತಾಗಿದ್ದ ಗುಟುರು ಗೂಳಿ. ಕಿರಿಕ್ ಪಾರ್ಟಿ.
“ ಸಾರ್, ತಾವು ಹೇಳಿದ್ರೆ ಇವರ ಆಫೀಸಿನವರನ್ನು ಕರೆಸುತ್ತೀನಿ . ಅವರವರೇ ಮಾತಾಡಿಕೊಳ್ಳಲಿ. ಆಮೇಲೆ ಇದ್ದೇ ಇದೆ. ರಿಜಿಸ್ಟರ್ ಮಾಡೋದು. ಜೈಲಿಗೆ ಕಳಿಸೋದು.”
ದಫೇದಾರರ ಮಾತು ನನಗೂ ಸರಿ ಎನಿಸಿತು. ಕೇಸು ಫೈಲನ್ನೆಲ್ಲಾ ತಾನೇ ಬರೆಯಬೇಕಲ್ಲಾ ಎಂಬ ಮೈಗಳ್ಳತನಕ್ಕೆ ಆತ ಹಾಗೆ ಹೇಳಿರಬಾರದೇಕೆ? ಕ್ಷಣ ಅನ್ನಿಸಿತು. ಅದರೂ ಈ ಬಗೆಯ ಕೇಸುಗಳು ಬಂದಾಗ ರಾಜಿಯಾಗೋದೇ ಹೆಚ್ಚು.
ಮುಂದುವರಿಯಲಿದೆ…