ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿದ್ದು ಎಲ್ನಿನೋ ಪರಿಣಾಮ ಎಂದು ವರದಿಗಳು ಹೇಳಿವೆ. ಜೊತೆಗೆ ಹವಾಮಾನ ಇಲಾಖೆ ಅದನ್ನು ಪುಷ್ಟೀಕರಿಸಿದ್ದು, ಈ ನಡುವೆ ತಮಿಳುನಾಡು ರಾಜ್ಯ ಎಂದಿನಂತೆ ತನ್ನ ನೀರಿನ ಹಕ್ಕಿನ ಕ್ಯಾತೆಯನ್ನು ಮುಂದುವರಿಸಿದೆ.
ತಮಿಳುನಾಡು ತಮ್ಮ ಪಾಲಿನ ನೀರಿಗೆ ಹಕ್ಕು ಮಂಡಿಸಿರುವುದು ಶೋಚನೀಯ. ನಮ್ಮ ರಾಜ್ಯವು ಕಳೆದ ಸಾಲಿನಲ್ಲಿ ೨೩೦ ಟಿಎಂಸಿಗಳಿಗೂ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಏಕಪಕ್ಷೀಯವಾಗಿಯೇ ತಮಿಳುನಾಡಿಗೆ ಕರ್ನಾಟಕ ನೀರು ಹರಿಸಬೇಕೆಂದು ಆದೇಶ ನೀಡುತ್ತಿರುವುದು ಸರಿಯಲ್ಲ. ಬಹುಶಃ ಲೋಕಸಭೆಯಲ್ಲಿ ಮಂಡಿಸಲಿರುವ ಕೆಲವು ಮಸೂದೆಗಳ ಬೆಂಬಲವನ್ನು ತಮಿಳುನಾಡಿನ ಡಿಎಂಕೆ ಮತ್ತು ಇತರೆ ಪಕ್ಷಗಳಿಂದ ಪಡೆಯುವ ಸಲುವಾಗಿ ಕರ್ನಾಟಕವನ್ನು ಹರಕೆಯ ಕುರಿಯನ್ನಾಗಿ ಮಾಡುವ ಇರಾದೆಯನ್ನೂ ತಳ್ಳಿಹಾಕುವಂತಿಲ್ಲ.
ಇನ್ನು ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸುವ ವಾಟಾಳ್ ನಾಗರಾಜ್ ರವರು, ನಮ್ಮ ಕೈಮೇಲೆ ನಾವೇ ಬರೆಹಾಕಿಕೊಂಡಂತೆ, ನಮ್ಮ ರಾಜ್ಯವನ್ನು ಬಂದ್ ಮಾಡಿ, ನಮ್ಮ ವಹಿವಾಟಿಗೆ ಧಕ್ಕೆ ತಂದುಕೊಂಡು ಮತ್ತು ನಮ್ಮ ಜನಕ್ಕೆ ತೊಂದರೆಯಾಗುವಂತೆ ಮಾಡಿದರೆ ಆಗುವ ಲಾಭವೇನು? ಕೇಂದ್ರದ ವಿರುದ್ಧ ಜನ ದನಿ ಎತ್ತಬೇಕು, ಅದಕ್ಕೆ ರಾಜ್ಯದ ಎಲ್ಲ ಸಂಸದರು ಪಕ್ಷಾತೀತವಾಗಿ ಹೋರಾಡಬೇಕು. ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ೧೯೫೬ ಅನ್ನು ಇಂದಿನ ಪರಿಸ್ಥಿತಿಗೆ ತಕ್ಕಂತೆ ಮಾರ್ಪಡಿಸಬೇಕೆನ್ನುವ ಕೂಗು ಪ್ರಧಾನಿಯನ್ನು ಮುಟ್ಟಲಿ. ವಾಸ್ತವ ಅರಿಯುವಂತೆ ಮಾಡಿ ಹೋರಾಟ ನಡೆಸಲಿ.
-ವಿಜಯ್ ಹೆಮ್ಮಿಗೆ, ಮೈಸೂರು



