ರಾಜಕೀಯ ಪಕ್ಷಗಳು ನಡೆಸುವ ಸಭೆಗಳಿಗೆ ಸಭಾಸದರನ್ನು ಸೇರಿಸುವುದು ಆಯಾ ಪಕ್ಷಗಳಿಗೆ ಸೇರಿದ ಸ್ಥಳೀಯ ನಾಯಕರ ಜವಾಬ್ದಾರಿ. ಬೇರೆಬೇರೆ ಪ್ರದೇಶಗಳಲ್ಲಿ ನಡೆಯುವ ಬೃಹತ್ ಅಧಿವೇಶನಗಳಿಗೆ ಆಯಾ ಪಕ್ಷದ ಶಕ್ತಿಗನುಗುಣವಾಗಿ, ಪಕ್ಷದ ಸ್ಥಳೀಯ ನಾಯಕರ ಶಕ್ತಿಗನುಗುಣವಾಗಿ ಜನರು ಸೇರುತ್ತಾರೆ. ಅರ್ಥಾತ್ ಸೇರಿಸಲಾಗುತ್ತದೆ. ಅವರಿಗೆ ಊಟ, ತಿಂಡಿ, ಸಂಚಾರದ ವ್ಯವಸ್ಥೆ, ಜೊತೆಗೆ ಮೊದಲೇ ನಿಗದಿಪಡಿಸಿದ ನಗದು ಮೊತ್ತವನ್ನು ನೀಡಲಾಗುತ್ತದೆ.
ಜನ ಸೇರಿಸುವ ಪ್ರಸ್ತಾಪ ಇಲ್ಲಿ ಏಕೆ ಎನ್ನುವ ಅನುಮಾನ ಸಹಜ. ಆದರೆ ಇಲ್ಲೂ ಅಂತಹ ಬೆಳವಣಿಗೆ ಆಗುತ್ತಿದೆ ಎನ್ನುತ್ತಿವೆ ಮೂಲಗಳು. ಇದಕ್ಕಾಗಿಯೇ ಮಧ್ಯವರ್ತಿ ಸಂಸ್ಥೆಗಳು ಅಲ್ಲೊಂದು ಇಲ್ಲೊಂದು ಹುಟ್ಟಿಕೊಂಡಿವೆ. ಜನರನ್ನು ಸೆಳೆಯುವ ಅಥವಾ ಪ್ರೇಕ್ಷಕರನ್ನು ಸೆಳೆಯುವ ಏಜೆನ್ಸಿ (crowd pulling agency)ಗಳು ಈಗ ಕಾರ್ಯನಿರತವಾಗಿವೆ ಎನ್ನುತ್ತಾರೆ ಗಾಂಧಿನಗರದ ಹಿರಿಯ ವಿತರಕರು.
ಯಾವುದೇ ಚಿತ್ರ ತೆರೆಕಂಡಾಗ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರುವ ಜವಾಬ್ದಾರಿಯನ್ನು ಈ ಏಜೆನ್ಸಿಗಳು ವಹಿಸಿಕೊಳ್ಳುತ್ತಿವೆಯಂತೆ. ಯಾವ ವರ್ಗದ ಪ್ರೇಕ್ಷಕರಿಗಾಗಿ ಚಿತ್ರ ತಯಾರಾಗಿದೆಯೋ ಆ ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವಂತೆ ಇವು ಮಾಡುತ್ತವೆ. ಹೊಸ ಚಿತ್ರ ಪ್ರೇಮಕಥೆ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅದನ್ನು ನೋಡಬೇಕು ಎನ್ನುವುದು ನಿರ್ಮಾಪಕ/ನಿರ್ದೇಶಕರ ಉದ್ದೇಶ ಎಂದಿಟ್ಟುಕೊಳ್ಳಿ. ಅವರೇ ಚಿತ್ರಮಂದಿರದಲ್ಲಿ ತುಂಬಿರುವಂತೆ ಈ ಏಜೆನ್ಸಿಗಳು ಮಾಡುತ್ತವೆ.
ವಾಹ್! ಎಂತಹ ಖುಷಿಯ ವಿಷಯ ಇದು ಅಲ್ಲವೇ? ಹೌದು. ಖುಷಿಯ ವಿಷಯವೇನೋ ಹೌದು. ಆದರೆ ಇದು ಚಿತ್ರದ ಪ್ರಚಾರದ ಭಾಗ ಅಷ್ಟೇ! ಈ ಪ್ರೇಕ್ಷಕರಿಗೆ ಟಿಕೆಟುಗಳನ್ನು ಚಿತ್ರದ ನಿರ್ಮಾಪಕ/ವಿತರಕರೇ ಒದಗಿಸಿಕೊಡಬೇಕು. ಬರೀ ಟಿಕೆಟ್ ಅಷ್ಟೇ ಅಲ್ಲ, ಅದರ ಜೊತೆ ಅವರು ಆ ಚಿತ್ರ ನೋಡಲು ಬಂದದ್ದಕ್ಕೆ ಸಂಭಾವನೆಯಾಗಿ 250 ರೂಪಾಯಿ ನೀಡಬೇಕು. ಭತ್ತೆ ಎಂದಿಟ್ಟುಕೊಳ್ಳಿ. ಇಂತಹದೊಂದು ಪ್ರಚಾರ ತಂತ್ರ ಆರಂಭವಾದದ್ದು, ಕಳೆದ ವರ್ಷ. ಅದು ಕೂಡಾ ನಾಡಿನ ಸಾಂಸ್ಕತಿಕ ರಾಜಧಾನಿಯಿಂದಲೇ ಎನ್ನುವುದು ಗಮನಿಸಬೇಕಾದ ವಿಷಯ.
ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ವೃತ್ತಿಯ ಈ ಏಜೆನ್ಸಿಗಳು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬೇಕಾದರೂ ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದೆ. ಸಿನಿಮಾ ನೋಡುವ ಪ್ರೇಕ್ಷಕರನ್ನು ಕರೆತಂದು, ಅವರಿಗೆ ಟಿಕೇಟು ನೀಡಿ, ಅದರ ಮೇಲೆ ಅವರು ಸಿನಿಮಾ ನೋಡಿದ್ದಕ್ಕೆ ಹಣ! ಮನರಂಜನೋದ್ಯಮ, ಅದರಲ್ಲೂ ಇಂದು ಬಹುತೇಕ ಸಿನಿಮಾಗಳಿಗೆ ಬಂದಿರುವ ಸ್ಥಿತಿ ಇದು.
ಸಿನಿಮಾ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿದೆಯೇ? ಕನ್ನಡದಲ್ಲಿ ತಯಾರಾಗುತ್ತಿರುವ ಚಿತ್ರಗಳ ಗುಣಮಟ್ಟದ ಕಾರಣ ಈ ಬೆಳವಣಿಗೆಯೇ? ಚಿತ್ರದ ನಿರ್ಮಾಣ ವೆಚ್ಚಕ್ಕಿಂತಲೂ ಹೆಚ್ಚು ಮೊತ್ತವನ್ನು ಪ್ರಚಾರದ ಹೆಸರಿನಲ್ಲಿ ವ್ಯಯಿಸಬೇಕಾದ ಅನಿವಾರ್ಯತೆ ಏಕೆ ಬಂದಿದೆ? ಈ ಪ್ರಶ್ನೆಗಳು ಏಳುತ್ತಿವೆ.
ಒಂದೆಡೆ ಜನರನ್ನು ಸೇರಿಸಿ ಪ್ರಚಾರ ಮಾಡುವ ಮೂಲಕ ʼಚಿತ್ರಮಂದಿರ ತುಂಬಿದೆ’ ಎನ್ನುವ ಹೊಸ ಬೆಳವಣಿಗೆ, ಒಳಗೆ ಜನ ತುಂಬದೆ ಇದ್ದರೂ, ಚಿತ್ರಮಂದಿರದ ಹೊರಗೆ ʼಜನಭರಿತ’ ಬೋರ್ಡನ್ನು ಹಾಕುವ ಹೊಸ ಖಯಾಲಿ ಆರಂಭವಾಗಿದೆ. ತಮ್ಮ ಚಿತ್ರವನ್ನು ನೀಡಿರುವ ನಿರ್ಮಾಪಕ/ವಿತರಕರ ಬೇಡಿಕೆಯಂತೆ ಪ್ರದರ್ಶಕರು ಈ ಕೆಲಸ ಮಾಡುತ್ತಾರೆ ಎನ್ನಲಾಗಿದೆ.
ಮುದ್ರಣ ಮತ್ತು ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತಿತರ ಜಾಗಗಳಲ್ಲಿ ಜಾಹೀರಾತು ನೀಡಲು ನಿರ್ಮಾಪಕರು ಸಾಕಷ್ಟು ಮೊತ್ತ ವ್ಯಯಿಸಬೇಕಾಗುತ್ತದೆ. ಚಿತ್ರಗಳ ಕುರಿತ ಲೇಖನಗಳ ಜಾಗಕ್ಕೆ ಜಾಹೀರುಲೇಖನಗಳು ಬಹಳಷ್ಟು ಕಡೆ ಬಂದಿವೆ. ಅವು ಕೊಂಡುಕೊಳ್ಳುವ ಸುದ್ದಿಗಳು. ರಾಜಕಾರಣಿಗಳೂ ಈಗ ಅದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ತಮ್ಮ ಜನ್ಮದಿನದ ಸಂದರ್ಭದಲ್ಲಿ ತಾವು ಮಾಡಿದ ಸಮಾಜಸೇವೆಗಳ ವಿವರಗಳನ್ನು ಸಣ್ಣಸಣ್ಣ ಲೇಖನಗಳ ಮೂಲಕ ಹೇಳುವ ಜಾಹೀರಾತು ನೀಡುವುದಿದೆ. ಸರ್ಕಾರದ ಜಾಹೀರಾತುಗಳೂ ಈಗ ಅದೇ ರೂಪ ಪಡೆದುಕೊಳ್ಳತೊಡಗಿವೆ.
ಕೋಟಿಗಟ್ಟಲೆ ನಿರ್ಮಾಣ ವೆಚ್ಚದ ಚಿತ್ರಗಳು ಕನ್ನಡದಲ್ಲಿ ತಯಾರಾಗುತ್ತಿರುವುದು ಬೆರಳೆಣಿಕೆಯ ಸಂಖ್ಯೆಯಲ್ಲಿ. ಉಳಿದಂತೆ ಕೋಟಿಯ ಆಚೆ ಈಚೆ ನಿರ್ಮಾಣ ವೆಚ್ಚದವೇ ಹೆಚ್ಚು. ಅವು ಇಂದಿನ ಪ್ರಚಾರದ ಬೇಡಿಕೆಯನ್ನು ಪೂರೈಸಲಾರವು. ಡಿಜಿಟಲ್ ಮಾರ್ಕೆಟಿಂಗ್ ಹೆಸರಲ್ಲಿ ಆಗುವ ವೆಚ್ಚಕ್ಕೂ ಅದರ ಫಲಿತಾಂಶಕ್ಕೂ ಸಂಬಂಧವೇ ಇಲ್ಲ, ವೃಥಾ ಹಣ ಪೋಲು ಎನ್ನಲಾಗುತ್ತಿದೆ. ಆದರೆ ಅದ್ಧೂರಿ ವೆಚ್ಚದಲ್ಲಿ ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರು ಪ್ರಚಾರಕ್ಕಾಗಿ ಸಾಕಷ್ಟು ಹಣ ವ್ಯಯಿಸುತ್ತಾರೆ.
ಚಿತ್ರಗಳ ಗಳಿಕೆಯ ಕುರಿತಂತೆ ಕೂಡಾ ಸರಿಯಾದ ಮಾಹಿತಿ ಸಿಗುವುದು ಅಪರೂಪ. ಚಿತ್ರದ ನಿರ್ಮಾಪಕ ಅದರ ಬಿಡುಗಡೆಗೂ ಮೊದಲು ವ್ಯಾಪಾರ ಮಾಡಿ ಲಾಭ ಗಳಿಸುವುದೂ ಇದೆ. ಚಿತ್ರದ ಆಡಿಯೋ ಹಕ್ಕು, ಸ್ಯಾಟಲೈಟ್ ಪ್ರಸಾರದ ಹಕ್ಕು, ಒಟಿಟಿ ಪ್ರಸಾರದ ಹಕ್ಕು ಹೀಗೆ ಬೇರೆಬೇರೆ ಹಕ್ಕುಗಳನ್ನು ಮೊದಲೇ ಮಾರುತ್ತಾರೆ. ಮಾತ್ರವಲ್ಲ, ಚಿತ್ರ ತೆರೆಕಾಣುವ ಪ್ರದರ್ಶನ ಮಂದಿರಗಳಿಂದ ಸಾಕಷ್ಟು ಮುಂಗಡ ಪಡೆದೇ ಚಿತ್ರವನ್ನು ಪ್ರದರ್ಶನಕ್ಕೆ ನೀಡುವುದಿದೆ. ಬೇಡಿಕೆ ಇರುವ ಜನಪ್ರಿಯ, ವರ್ಚಸ್ವೀ ನಟರ ಚಿತ್ರಗಳು ಹೀಗೆ ವ್ಯಾಪಾರ ಮಾಡುವುದು ವಾಡಿಕೆ. ಚಿತ್ರಕ್ಕೆ ಪ್ರೇಕ್ಷಕರು ಮುಗಿಬಿದ್ದರೆ, ಮುಂಗಡ ನೀಡಿದ ಪ್ರದರ್ಶಕರಿಗೆ ಅನುಕೂಲವಾಗುತ್ತದೆ, ಲಾಭವಾಗುತ್ತದೆ. ಇಲ್ಲದಿದ್ದರೆ ನಷ್ಟ. ನಷ್ಟವಾದರೂ ಪ್ರದರ್ಶಕರು ಅದನ್ನು ಹೊರಗೆ ಹೇಳುವುದು ಕಡಿಮೆ. ವ್ಯಾಪಾರದಲ್ಲಿ ಲಾಭ–ನಷ್ಟ ಸಾಮಾನ್ಯ ತಾನೇ?
ಮೊನ್ನೆ ಪ್ರಧಾನಿ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದ ವೇಳೆ ರಾಜಭವನದಲ್ಲಿ ನಡೆದ ಔತಣಕೂಟಕ್ಕೆ ಕನ್ನಡ ಚಿತ್ರರಂಗದ ಮೂವರಿಗೆ ಆಹ್ವಾನವಿತ್ತು. ಹಾಕಿದ ಬಂಡವಾಳದ ಬಹುಪಟ್ಟು ಲಾಭ ಮಾಡಿದ ‘ಕಾಂತಾರ’ ಚಿತ್ರದ ನಟ, ನಿರ್ದೇಶಕ ರಿಶಭ್ ಶೆಟ್ಟಿ, ಅದ್ಧೂರಿ ನಿರ್ಮಾಣವೆಚ್ಚ, ಪ್ರಚಾರಗಳ ಮೂಲಕ ದಾಖಲೆ ಬರೆದ ಕೆಜಿಎಫ್ ಚಾಪ್ಟರ್ 2’ ಚಿತ್ರದ ನಟ ಯಶ್ ಮತ್ತು ಅವೆರಡೂ ಚಿತ್ರಗಳಿಗೆ ಬಂಡವಾಳ ಹೂಡಿದ ಹೊಂಬಾಳೆಯ ವಿಜಯ್ ಕಿರಗಂದೂರು ಈ ಮೂವರು ಅತಿಥಿಗಳು. ಜೊತೆಗೆ ಜನಪ್ರಿಯ ಆರ್ಜೆ, ಸ್ಟಾಂಡಪ್ ಕಾಮಿಡಿಯ ಶ್ರದ್ಧಾ.
ವಿಶೇಷವೆಂದರೆ ಇಲ್ಲಿ ಆಗಿದೆ ಎನ್ನಲಾದ ಚಿತ್ರನಗರಿಯ ಕುರಿತ ಪ್ರಸ್ತಾಪ. ಅಂತಾರಾಷ್ಟ್ರೀಯ ಮಟ್ಟದ ಚಿತ್ರನಗರಿಯೊಂದನ್ನು ಸ್ಥಾಪಿಸಬೇಕು ಎನ್ನುವ ಬೇಡಿಕೆಯನ್ನು ಯಶ್ ಮುಂದಿಟ್ಟರು ಎನ್ನಲಾಗಿದೆ. ಚಿತ್ರನಗರಿಯ ಕುರಿತ ಬೇಡಿಕೆಯನ್ನು ಎರಡು ದಿನಗಳ ನಂತರ ಚಿತ್ರರಂಗದ ಪ್ರತಿನಿಽಗಳು ಮುಂಗಡ ಪತ್ರದಲ್ಲಿ ಹೇಳುವಂತೆ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪವಿಟ್ಟಿದ್ದರು.
ಚಿತ್ರನಗರಿ ಯೋಜನೆಯ ಪ್ರಸ್ತಾಪ ಮೊದಲು ಮಾಡಿದ್ದು ಕರ್ನಾಟಕ. 1972ರಲ್ಲಿ ಚಿತ್ರನಗರಿಗಾಗಿ ಬೆಂಗಳೂರಿನ ಹೆಸರಘಟ್ಟದಲ್ಲಿ ಅಡಿಗಲ್ಲು ಹಾಕಲಾಗಿತ್ತು. ಅದಾದ ನಂತರ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರನಗರಿಗಳ ಸ್ಥಾಪನೆ ಆಯಿತು. ಆಗುತ್ತಿವೆ. ಕೆಲವು ರಾಜ್ಯ ಸರ್ಕಾರದ ನೆರವಿನಿಂದಾದರೆ, ಕೆಲವು ಖಾಸಗಿಯವು. ನೆರೆಯ ಆಂಧ್ರಪ್ರದೇಶದಲ್ಲಿರುವ ರಾಮೋಜಿ ಚಿತ್ರನಗರಿ, ಮಾಧ್ಯಮ ಕ್ಷೇತ್ರದ ಹಿರಿಯ ರಾಮೋಜಿ ರಾವ್ ಅವರು ಸ್ಥಾಪಿಸಿದ್ದು.
ಚಲನಚಿತ್ರ ಕ್ಷೇತ್ರದ ಕುರಿತಂತೆ ಪ್ರಧಾನಿ ಮೋದಿ ಅವರಿಗಿದ್ದ ಆಸಕ್ತಿ ಮತ್ತು ಜ್ಞಾನದ ಕುರಿತಂತೆ ನಟರಿಬ್ಬರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮಾಧ್ಯಮದ ಶಕ್ತಿ ಮತ್ತು ಸಾಧ್ಯತೆಗಳ ಕುರಿತಂತೆ ಸಾಕಷ್ಟು ಮಾತನಾಡಿದರಂತೆ. ಇದು ಮನರಂಜನೋದ್ಯಮದಲ್ಲಿ ಹೊಸದೊಂದು ಬೆಳವಣಿಗೆಗೆ ಕಾರಣವಾಗಬಹುದೇ? ಮುಂದಿನ ದಿನಗಳು ಹೇಳಲಿವೆ.
ಭಾರತ ಸಂವಿಧಾನದ ಏಳನೇ ಅನುಸೂಚಿ (246ನೇ ಅನುಚ್ಛೇದ)ಯಂತೆ ಸಿನಿಮಾ, ಪ್ರದರ್ಶನಕ್ಕೆ ಮಂಜೂರಾತಿಯ ಹೊರತಾಗಿ, ರಾಜ್ಯಕ್ಕೆ ಸೇರುತ್ತದೆ. ಒಕ್ಕೂಟಕ್ಕಲ್ಲ. ಸಮವರ್ತಿ ಪಟ್ಟಿಗೆ ಸಿನಿಮಾ ಇನ್ನೂ ಸೇರಿಲ್ಲದಿರಬೇಕು. ಸೇರಿಸಬೇಕು ಎನ್ನುವ ಒತ್ತಾಯ ಇದೆ. ಸಮವರ್ತಿ ಪಟ್ಟಿಗೆ ಸೇರಿದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಿನಿಮಾ ಮಂದಿಯ ಬೇಡಿಕೆಗೆ ಸ್ಪಂದಿಸಬಹುದು. ಹಾಗಾಗಬಾರದು ಎಂದೇನಿಲ್ಲ.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧೀನದಲ್ಲಿರುವ ಪೂನಾ ಚಲನಚಿತ್ರ ತರಬೇತಿ ಸಂಸ್ಥೆಯ ಶಾಖೆಯೊಂದನ್ನು ಮೈಸೂರಿನಲ್ಲಿ ಸ್ಥಾಪನೆಯಾಗಿರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಆರಂಭಿಸಬೇಕು ಎನ್ನುವ ಯೋಜನೆ, ಟ್ರಸ್ಟಿನ ಸದಸ್ಯರೂ ಆಗಿರುವ ಅವರ ಅಳಿಯ ಅನಿರುದ್ಧ ಅವರದು. ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆಯನ್ನು ಇಟ್ಟು ಅದನ್ನು ಆಗುಮಾಡುವ ಪ್ರಯತ್ನ ಕೂಡಾ ಆಗಬೇಕಿದೆ.
ಇವತ್ತು ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಂಗಡ ಪತ್ರ ಮಂಡಿಸಲಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಎಲ್ಲರಿಗೂ ಪ್ರಿಯವಾಗುವ ಆಯ–ವ್ಯಯ ಪತ್ರ ಇದಾಗಲಿದೆ ಎನ್ನುವ ಮಾತಿದೆ. ಚಿತ್ರರಂಗಕ್ಕೆ ಏನೇನು ಇದೆ, ಇನ್ನೇನು ಇಂದೇ ತಿಳಿಯಲಿದೆ.