ಕೆ.ಎನ್.ಲಿಂಗಪ್ಪ
ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ.
ಬೇಡಗಂಪಣ– ಆ ಜನರೇ ಹೇಳಿಕೊಳ್ಳುವಂತೆ ಅದೊಂದು ಬುಡುಕಟ್ಟು ಸಮುದಾಯ. ಮಲೆ ಮಹದೇಶ್ವರ ಬೆಟ್ಟ ಮತ್ತು ಆಜು–ಬಾಜಿನಲ್ಲಿ ನೆಲೆ ಕಂಡುಕೊಂಡಿರುವ ಒಂದು ಪುಟ್ಟ ಸಮುದಾಯವಿದು. ಅಂದಾಜು 12000 ದಷ್ಟು ಜನ ಸಂಖ್ಯೆ ಇರುವ ಇವರು ಬೆಟ್ಟದ ಇಳಿಜಾರಿನಲ್ಲಿ ವಾಸಿಸುತ್ತಿರುವುದರಿಂದ ವ್ಯವಸಾಯ ಮಾಡುವುದು. ಆಡು, ಕುರಿ – ಎಮ್ಮೆ ಮೇಯಿಸುವುದು ಮುಂತಾದ ಕುಸುಬುಗಳನ್ನು ಮಾಡುತ್ತಾರೆ. ಭಿಕ್ಷೆ ಬೇಡುವುದೂ ಕೂಡ ಇವರ ಮತ್ತೊಂದು ಕಾಯಕವಾಗಿದೆ. ಬೇಡ ಗಂಪಣರಲ್ಲಿ ಒಂದು ಗುಂಪು ಪರ್ಯಾಯವಾಗಿ ವೇತನವಿಲ್ಲದೆ ಪೂಜೆ ಕಾರ್ಯ ನಿರ್ವಹಿಸು ವುದೂ ಇದೆ.
ಇತ್ತೀಚೆಗೆ ಕೆಲವು ರಾಜಕಾರಣಿಗಳು ಬೇಡ–ಗಂಪಣ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಹೇಳಿಕೊಂಡು ಈ ಸಮುದಾಯದ ಮುಖಂಡರನ್ನು ಪುಸಲಾಯಿಸಿ ದಿಲ್ಲಿ ತನಕ ಕರದೊಯ್ದಿದ್ದರು.ಯಾವುದೇ ಜಾತಿ ಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದರೆ ಕೆಲವು ನಿರ್ದಿಷ್ಟ ಕ್ರಮಗಳನ್ನು ಅನುಸರಿಸಲೇಬೇಕು. ಮೊದಲಿಗೆ ಆ ಜಾತಿಯ ಕುಲಶಾಸ್ತ್ರೀಯ ಅಧ್ಯಯನವನ್ನು ಯಾವುದಾದರೂ ವಿಶ್ವವಿದ್ಯಾಲಯದ ಮಾನವ ಶಾಸ್ತ್ರಜ್ಞರು ಕೈಗೊಳ್ಳಬೇಕು.ಅಧ್ಯಯನದ ಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರ ಒತ್ತಡದಿಂದಲೋ ಅಥವಾ ಸ್ವ ಇಚ್ಛೆಯಿಂದಲೋ ವರದಿಯನ್ನು ಕೇಂದ್ರ ಸರ್ಕಾರದ ನೇರ ನಿಯಂತ್ರಣದಲ್ಲಿರುವ ರಿಜಿಸ್ಟರ್ ಜನರಲ್ ಅವರ ಕಚೇರಿಗೆ ಕಳುಹಿಸಿಕೊಡುವುದು.ಅದು ಆಮೂಲಾಗ್ರ ಅಧ್ಯಯನ ನಡೆಸಿ ವರದಿಯನ್ನು ರಾಷ್ಟ್ರೀಯ ಹಿಂದುಳಿದ ಪಂಗಡಗಳ ಆಯೋಗಕ್ಕೆ ರವಾನಿಸುವುದು. ಆಯೋಗವು ಅಧ್ಯಯನ ವರದಿಯನ್ನು ಪರಿಶೀಲಿಸಿ ಒಕ್ಕೂಟ ಸರ್ಕಾರದ ಸಂಪುಟ ಸಭೆಗೆ ಮಂಡಿಸಲನುವಾಗುವಂತೆ ಸರ್ಕಾರಕ್ಕೆ ಕಳುಹಿಸಿ ಕೊಡುವುದು. ಸಂಪುಟ ಸಭೆ ನಿರ್ಧಾರದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿದ ವಿಧೇಯಕವನ್ನು ಪಾಸು ಮಾಡಿಸಿ–ಕೊಂಡ ನಂತರವಷ್ಟೇ ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳಿಸಲಾಗುತ್ತದೆ. ಈ ವಿಧಾನ ಸುಲಭ ಸಾಧ್ಯವಲ್ಲ. ಸಾಮಾನ್ಯವಾಗಿ ತಿಳಿವಳಿಕೆ ಇಲ್ಲದ ಸಮೂಹಗಳು ಮೋಸ ಹೋಗು–ವುದುಂಟು.
ಬೇಡಗಂಪಣರೇ ಹೇಳಿಕೊಳ್ಳುವಂತೆ, ಮೂಲತಃ ಅವರು ಬೇಡರು. ಅರಣ್ಯದಲ್ಲಿ ಕಾಡು ಮನುಷ್ಯರಾಗಿ ಗೆಡ್ಡೆ ಗೆಣಸು ತಿಂದುಕೊಂಡು ಜೀವನ ನಡೆಸುತ್ತಿದ್ದವರು. ಇವರಲ್ಲಿ ಕೆಲವರು ಮಾಂಸಾಹಾರಿಗಳೂ ಹೌದು. ಇತಿಹಾಸದ ಕಾಲಘಟ್ಟದಲ್ಲಿ ‘ಮಹದೇಶ್ವರ’ ಬೆಟ್ಟಕ್ಕೆ ವಲಸೆ ಬಂದಾಗ ಇವರ ಮುಗ್ಧ ಭಕ್ತಿಗೆ ಮೆಚ್ಚಿ ಲಿಂಗಧಾರಣೆ ಮಾಡಿಸಿ ಪೂಜಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ–ದರು. ಹೀಗಾಗಿ ಅವರನ್ನು ಲಿಂಗಾಯತ–ರೆಂದು ಭಾವಿಸಲಾಯಿತು. ಆದರೆ ಲಿಂಗಾಯತರಿಗೂ ಹಾಗೂ ಬೇಡಗಂಪಣರಿಗೂ ಯಾವುದೇ ರೀತಿ ಸಂಬಂಧವಿಲ್ಲ.ಅದಕ್ಕೆ ಯಾವುದೇ ದಾಖಲೆಗಳೂ ಇಲ್ಲ. ಬೇಡಗಂಪಣರು ಬೇಡರ ಕಣ್ಣಪ್ಪನ ವಂಶಸ್ಥರು. ಗಂಪಣ ಎಂಬವನು ಆ ಜಾತಿಯ ನಾಯಕನಾಗಿದ್ದರಿಂದ ಬೇಡರಿಗೆ ಗಂಪಣ ಸೇರಿಕೊಂಡು ಬೇಡಗಂಪಣರೆನಿಸಿಕೊಂಡರು ಎಂಬುದು ನಂಬಿಕೆಯಾಗಿದೆ.
ಬೇಡಗಂಪಣ ಜನಾಂಗವು ಸುಮಾರು 21 ಕುಗ್ರಾಮಗಳಲ್ಲಿ ಅಂದರೆ ಕೊಳ್ಳೇಗಾಲ ತಾಲ್ಲೂಕಿನ ಕೆಲವು ಹಳ್ಳಿಗಳು ಮತ್ತು ತಮಿಳುನಾಡಿನ ಕರ್ನಾಟಕಕ್ಕೆ ಅಂಟಿಕೊಂಡ ಕೆಲವು ಭಾಗಗಳಲ್ಲಿ ವಾಸಿಸುತ್ತಿದೆ. ಅವರೇ ಮುಂದುವರಿದು ಹೇಳುವಂತೆ, ಈ ಜನಾಂಗವು ಶ್ರೀ ಮಾದೇಶ್ವರರನ್ನು ಪೂಜಿಸುವ ತಂಬಡಿ ಜನಾಂಗದ ಬೇಡ ಗುಂಪಣ ಜನಾಂಗವೆಂದು ಕರೆಯಲಾಗುತ್ತಿದೆ. ಹಳ್ಳಿಗಳಲ್ಲಿ, ಅರಣ್ಯ ಅದರಲ್ಲೂ ಬೆಟ್ಟಗುಡ್ಡಗಳ ಸಾಲಿನಲ್ಲಿ ವಾಸಿಸುತ್ತಿದ್ದು, ಇಲ್ಲಿ ಸರಿಯಾದ ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಶಾಲೆಗಳು ಇಲ್ಲದೆ, ಆಧುನಿಕ ಸೌಕರ್ಯಗಳಿಂದ ವಂಚಿತರಾಗಿ ಕಾಡು ಜನರಾಗಿಯೇ ಬದುಕುತ್ತಿದ್ದಾರೆ. ಇತ್ತೀಚೆಗೆ, ಅಲ್ಲೊಂದು ಇಲ್ಲೊಂದು ಶಾಲೆಗಳಿದ್ದರೂ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲು ಅವರಿಗೆ ಅವಕಾಶವಾಗಿಲ್ಲ. ಹಾಗಾಗಿ ಅವರ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ತೀರಾ ಕಡಿಮೆ. ನಿಶ್ಚಿತವಾದ ಆದಾಯವೆಂಬುದು ಇಲ್ಲವೇ ಇಲ್ಲ. ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ವಾಸಿಸುವುದರಿಂದ ಜೋಪಡಿಗಳಲ್ಲಿಯೇ ವಾಸಿಸಬೇಕಾದ ಅನಿವಾರ್ಯತೆ ಇವರದು. ಬೇಡಗಂಪಣರು ಜಮೀನ್ದಾರರಲ್ಲದಿದ್ದರೂ ಇರುವ ಅಲ್ಪ – ಸ್ವಲ್ಪ ಭೂಮಿಯಲ್ಲಿ ಸೊಪ್ಪು– ತರಕಾರಿ ಇವೇ ಮುಂತಾದ ಬೆಳೆಗಳನ್ನು ಬೆಳೆದು ಹೊಟ್ಟೆ ಹೊರೆದುಕೊಳ್ಳುವರು.
ಅವರು ವಾಸಿಸುವ ಹಾಡಿಗಳಿಗೆ ವಾಹನಗಳು ಬರಲು ಪಕ್ಕಾ ರಸ್ತೆಗಳ ಕೊರತೆಯಿಂದಾಗಿ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗದೆ ದಾರಿಯಲ್ಲಿ ರೋಗಿ ಮರಣ ಹೊಂದುವ ಸಾಧ್ಯತೆ ಇದೆ. ಜೀವನ ಮಾರ್ಗಕ್ಕೆ ಗುಳೆ ಹೋಗು–ವುದು ಸಾಂಪ್ರದಾಯಿಕವಾಗಿದೆ. ಗುಳೆ ಹೋಗುವುದರಿಂದ ಯಾವ ವಿದ್ಯಾಭ್ಯಾಸ ಸೌಲಭ್ಯಗಳನ್ನೂ ಅವರ ಮಕ್ಕಳಿಗೆ ತಲುಪಿಸಲು ಸಾಧ್ಯವಾಗುವುದೇ ಇಲ್ಲ. ಹೀಗಾಗಿ ಅವರಲ್ಲಿ ಅನಕ್ಷರಸ್ಥರೇ ಹೆಚ್ಚು. ಸರ್ಕಾರಿ ನೌಕರಿಯಲ್ಲಿರುವುದು ತುಂಬಾ ವಿರಳ. ಅವರದು ಒಂದು ಲಿಂಗಾಯತರ ಪಂಗಡವೆಂದು ಪರಿಗಣಿಸಿ ಯಾವುದೇ ಮೀಸಲಾತಿ ಸೌಲಭ್ಯಗಳನ್ನು ನೀಡುತ್ತಿಲ್ಲ. ಈವರೆಗೂ ಬೇಡಗಂಪಣ ಜಾತಿಯ ಹೆಸರು ಯಾವ ಮೀಸಲಾತಿ ಪಟ್ಟಿಯಲ್ಲಿಯೂ ಸೇರಿಲ್ಲ. ಹಾಗಾಗಿ ಬೇಡಗಂಪಣ ಜಾತಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಮುಖ್ಯ ವಾಹಿನಿ–ಯಿಂದ ದೂರವಿದೆ. ರಾಜ ಮಹಾರಾಜರ ಕಾಲದಲ್ಲಿ ಇವರ ಸ್ಥಿತಿ– ಗತಿಗಳನ್ನು ಗಮನಿಸಿ ಇವರನ್ನು ತೆರಿಗೆಗಳಿಂದ ಮುಕ್ತರನ್ನಾಗಿ ಮಾಡಿದ್ದರು. ಸಾಮಾಜಿಕ ಸ್ಥಿತಿಯಂತೂ ಈಗಲೂ ಬದಲಾಗಿಲ್ಲ. ಈಗಾಗಲೇ ಬುಡಕಟ್ಟು ಸಮಾಜವೆಂದು ಪರಿಗಣಿಸಿರುವ ಸೋಲಿಗರು ಮತ್ತು ಬೇಡಗಂಪಣರು ಜೊತೆ ಜೊತೆಗೆ ವಾಸ ಮಾಡುತ್ತಿದ್ದು, ಎರಡೂ ಜನಾಂಗಗಳ ಜೀವನಕ್ರಮ ಒಂದೇ ಆಗಿದೆ! ಬೇಡಗಂಪಣ ಜಾತಿಯಲ್ಲಿ ಒಟ್ಟು 2800 ಕುಟುಂಬಗಳಿವೆ ಎಂದೂ ಅವುಗಳ ಒಟ್ಟು ಜನಸಂಖ್ಯೆ 12000 ಇರಬಹುದೆಂದೂ ಹೇಳಲಾಗಿದೆ. ಅವರ ಮಾತೃಭಾಷೆ ಕನ್ನಡ. ಸಾಕ್ಷರತಾ ಪ್ರಮಾಣ ಅಂದಾಜು ೬೦ರ ಅಂಚಿನಲ್ಲಿದೆ. ಇತ್ತೀಚೆಗೆ ಸರ್ಕಾರದ ಸಹಾಯದಿಂದ ಕೆಲವು ಕುಟುಂಬಗಳು ಶೌಚಾಲಯವನ್ನು ಹೊಂದುತ್ತಿವೆ. ಬಹುತೇಕ ಕುಟುಂಬಗಳು ಅಡುಗೆಗೆ ಕಟ್ಟಿಗೆಯನ್ನು ಬಳಸುವುದು ತೀರ ಸಾಮಾನ್ಯ.
ಸಮಾಜ ಶಾಸ್ತ್ರೀಯ ಅಧ್ಯಯನಕಾರರಾದ Edgar thurston ಅವರ caste and tribes of southern india (page 236 ರಿಂದ 291) ಗ್ರಂಥದಲ್ಲಿ ಲಿಂಗಾಯತರ ಬಗ್ಗೆ ದಾಖಲಾಗಿದೆ. ಆ ಪುಟಗಳಲ್ಲಿ ಬೇಡಗಂಪಣ ಲಿಂಗಾಯತರ ಉಪಜಾತಿ ಎಂದಾಗಲೀ ಅಥವಾ ಪರ್ಯಾಯ ಜಾತಿ ಎಂದಾಗಲೀ ದಾಖಲಾಗಿಲ್ಲ. ಹಾಗೆಯೇ ಕೆ.ಎಸ್.ಸಿಂಗ್ ಅವರ ‘community, segments, synonyms,surnames, and titles‘ ಎಂಬ ಗ್ರಂಥದಲ್ಲಿಯೂ ಕೂಡ ಲಿಂಗಾಯತರ ಬಗ್ಗೆ ದಾಖಲಾಗಿದೆಯೇ ವಿನಾ, ಆ ಪುಟಗಳಲ್ಲಿ ಕೂಡ ಬೇಡಗಂಪಣರನ್ನು ಲಿಂಗಾಯತರ ಉಪಜಾತಿ ಎಂದಾಗಲೀ ಅಥವಾ ಪರ್ಯಾಯ ಜಾತಿ ಎಂದಾಗಲೀ ನಮೂದಾಗಿಲ್ಲ.
ಸಮಾಜಶಾಸ್ತ್ರೀಯ ಅಧ್ಯಯನಕಾರರ ಗ್ರಂಥಗಳ ಪರಿಶೀಲನೆಯಲ್ಲಿ ಕಂಡುಬರುವ ಸಂಗತಿ ಎಂದರೆ ಬೇಡಗಂಪಣರು ಲಿಂಗಾಯತರಲ್ಲ. ಹಾಗೆ ಲಿಂಗಾಯತರ ಉಪಜಾತಿ ಅಥವಾ ಪರ್ಯಾಯ ಪದಗಳು ಕೂಡ ಅಲ್ಲವೆಂಬದು ದೃಢಪಟ್ಟಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೇಡಗಂಪಣರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮಾನದಂಡಗಳನ್ನು ಅನುಸರಿಸಿ ಬೇಡಗಂಪಣ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ -2aಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. 2018 ರಲ್ಲಿಯೇ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾಗ್ಯೂ, ಇಂತಹ ನೂರಾರು ವರದಿಗಳನ್ನು ಯಾವುದೋ ಭದ್ರ ತಿಜೋರಿಯಲ್ಲಿ ಸರ್ಕಾರ ಇಟ್ಟು, ಜಡ ಭರತನಂತೆ ಕುಳಿತು ಇಂಥ ಜಾತಿಗಳಿಗೆ ಸಿಗಬೇ–ಕಾದ ಸಾಮಾಜಿಕ ನ್ಯಾಯವನ್ನು ದೊರಕಿಸಿ–ಕೊಡದೆ ಘನ ಘೋರ ಅನ್ಯಾಯವೆಸಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಇಲಾಖೆಯನ್ನು ಮೂವರು ಸಚಿವರು ನಿಭಾಯಿಸಿದ್ದಾರೆ. ಇಂಥ ಸಾಮಾಜಿಕ ಕೆಲಸಗಳ ಕಡೆ ಅವರ ಗಮನ ಹರಿಯದಿರುವುದಕ್ಕೆ ಅವರ ಜೋಬದ್ರ ಗೇಡಿತನವೇ ಪ್ರತ್ಯಕ್ಷ ಸಾಕ್ಷಿ. ಇನ್ನೂ ಕೆಲವು ದಿನಗಳಲ್ಲೇ ಚುನಾವಣೆ ನಡೆಯು–ವುದು ಗ್ಯಾರಂಟಿ. ಅಷ್ಟರಲ್ಲಿ ಅಸಹಾಯಕ– ಅಮಾ ಯಕ ಬೇಡಗಂಪಣ ಜಾತಿಯನ್ನು ಹಿಂದುಳಿದ ವರ್ಗಗಳ– 2b ಪ್ರವರ್ಗಕ್ಕೆ ಸೇರಿಸುವ ಕೆಲಸವನ್ನು ಮಾಡಿದರೆ ಬೇಡಗುಂಪಣರು ಸರ್ಕಾರವನ್ನು ಸದಾ ಸ್ಮರಣೆ ಮಾಡುವರು!