ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಕಟ್ಟಲು ಏಪ್ರಿಲ್ ತಿಂಗಳಿನಲ್ಲಿ ಮಾತ್ರ ಶೇ.5ರಷ್ಟು ರಿಯಾಯಿತಿಯನ್ನು ನೀಡಿದೆ.
ನಂತರದ ಮೇ ಮತ್ತು ಜೂನ್ ತಿಂಗಳಲ್ಲಿ ಆಸ್ತಿ ತೆರಿಗೆ ಕಟ್ಟುವವರಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ, ನಂತರ ತೆರಿಗೆ ಪಾವತಿಸುವವರಿಗೆ, ಪ್ರತಿ ತಿಂಗಳಿಗೆ, ಶೇ.2ರಷ್ಟು ಬಡ್ಡಿ ದರದಲ್ಲಿ ವರ್ಷಕ್ಕೆ ಶೇ. 24ರಷ್ಟು ಬಡ್ಡಿ ವಿಧಿಸುತ್ತಾರೆ. ಬಹುಶಃ ಇದು ಯಾವುದೇ ದೇಶದಲ್ಲೂ ಇಲ್ಲ. ಇದೊಂದು ರೀತಿಯಲ್ಲಿ ನಗರ ಪಾಲಿಕೆಯ ಅವೈಜ್ಞಾನಿಕ ತೆರಿಗೆ ನೀತಿಯಾಗಿದೆ. ಸಾರ್ವಜನಿಕರಿಗೆ ಆಗುತ್ತಿರುವ ಈ ಅನ್ಯಾಯವನ್ನು ಯಾವ ಜನಪ್ರತಿನಿಧಿಗಳೂ ಪ್ರಶ್ನಿಸುತ್ತಿಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ವರ್ಷಕ್ಕಿಂತ ಶೇ. 3ರಷ್ಟು ಆಸ್ತಿ ತೆರಿಗೆಯನ್ನು ಈ ವರ್ಷ ಏಕಾಏಕಿ ಏರಿಕೆ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವಾಗ ಕೌನ್ಸಿಲ್ ಸಭೆ ನಡೆಯದೇ ನಗರ ಪಾಲಿಕೆಯ ಆಯುಕ್ತರೇ ಈ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯೇ? ಈಗಾಗಲೇ ಈ ವರ್ಷ ಶೇ.3ರಷ್ಟು ಹೆಚ್ಚು ಆಸ್ತಿ ತೆರಿಗೆಯನ್ನು ಕಟ್ಟಿರುವ ಸಾರ್ವಜನಿಕರಿಗೆ ಹಣ ಹಿಂದಿರುಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು




