ಚರಂಡಿ ನೀರು ನಿಲ್ಲುತ್ತಿದ್ದ ರಸ್ತೆಗೆ ಹೊಸ ಪೈಪ್ ಲೈನ್
ಮೈಸೂರು: ಯುಜಿಡಿ ಸಮಸ್ಯೆಯಿಂದ ಚರಂಡಿಯ ನೀರು ನಿಂತು ದುರ್ವಾಸನೆ ಬೀರುತ್ತಿದ್ದ ರಸ್ತೆಗೆ ಹೊಸ ಪೈಪ್ಲೈನ್ ಅಳವಡಿಸುವ ಮೂಲಕ ಶುಚಿತ್ವ ಕಾಪಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದರೆ ಸಮಸ್ಯೆ ಬಗೆಹರಿಯಲಿದೆ ಎಂದು ನಗರಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಭರವಸೆ ನೀಡಿದರು.
‘ಆಂದೋಲನ’ ದಿನಪತ್ರಿಕೆಯಲ್ಲಿ ಜ.11ರಂದು ‘ಸುಗಮ ಸಂಚಾರಕ್ಕೆ ರಸ್ತೆ ಸರಿಪಡಿಸಿ’ ಶೀರ್ಷಿಕೆಯಡಿ ಪ್ರಕಟವಾಗಿರುವ ಓದುಗರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಶೋಭಾ ಸುನಿಲ್ ಅವರು, ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ವಿದ್ಯಾರಣ್ಯಪುರಂನ 4ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆಯಲ್ಲಿ ಚರಂಡಿ ನೀರು ನಿಂತು ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿ ಸುತ್ತಿದ್ದುದನ್ನು ಕಂಡು ಮುತುವರ್ಜಿ ವಹಿಸಿ ಯುಜಿಡಿ ಸಮಸ್ಯೆ ಬಗೆಹರಿಸಿ, ಹೊಸ ಪೈಪ್ ಲೈನ್ ಅಳವಡಿಸಲಾಗಿದೆ. ಮಣ್ಣಿನ ಗುಂಡಿಗಳನ್ನು ಸಮತಟ್ಟುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸ್ವತಃ ನಾನೇ ಸ್ಥಳಕ್ಕೆ ಹೋಗಿ ದೂಳು ಬಾರದಂತೆ ನೀರು ಸಿಂಪಡಿಸಿದ್ದೇನೆ.ರಸ್ತೆ ಡಾಂಬರೀಕರಣ ಕಾಮಗಾರಿ ನಡೆದರೆ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ತಿಳಿಸಿದ್ದಾರೆ.





