ಹಿಂದಿನ ಸಂಚಿಕೆಯಿಂದ
‘ಈ ರೀತಿ ಕಳಿಸೋದಾದ್ರೆ ಇನ್ನೂ ಮುಕ್ಕಾಲು ಗಂಟೆಯಾಗಿ ಹೋಗುತ್ತಲ್ಲಾ ಸಾರ್? ವಿಷ್ಯ ತಿಳಿದ ತಕ್ಷಣ ಜನರನ್ನ ಕಳಿಸೋದು ಬಿಟ್ಟು ರೀಫಂಡ್ ಪಾಸ್ ಕೊಡುತ್ತಾ ಕಾಲಹರಣ ಮಾಡಿದರು. ಈ ಅನಾಹುತಕ್ಕೆ ಪೊಲೀಸ್ನೋರೆ ಹೊಣೆ ಅಂತ ಶುರುವಾಗುತ್ತೆ. ನಮ್ಮಗಳ ತಲೆದಂಡವಾಗುತ್ತೆ’ ಎಂಬುದು ಸಬ್ ಇನ್ಸ್ಪೆಕ್ಟರ್ ರಾಜೇಂದ್ರರ ಆತಂಕ.
‘ಈಗ ಬಾಂಬ್ ಸುದ್ದಿ ಹೇಳಿದ್ರೂ ಗಾಬ್ರಿ ಬಿದ್ದು ಜನ ಆಚೆ ಬರೋದಿಕ್ಕೆ ಅರ್ಧ ಗಂಟೇನೆ ಆಗುತ್ತೆ. ರೀಫಂಡ್ ಕಾರ್ಡ್ ಕೊಟ್ರೆ ಇನ್ನೊಂದು ಹತ್ತು ನಿಮಿಷ ಹೆಚ್ಚಾಗಬಹುದು. ಕಾರ್ಡ್ ಕೊಡೋದು ಕೊಟ್ಟು ಬಿಡಲಿ. ರಗಳೆ ಇರೋದಿಲ್ಲ. ರೊಳ್ಳೆ ತೆಗೆಯೋದಿಲ್ಲ. ಕಾರ್ಡ್ ಕೈಗೆ ಸಿಕ್ಕರೆ ಸಾಕು ಯಾರೂ ಇಲ್ಲಿ ನಿಲ್ಲೋದೂ ಇಲ್ಲ’
‘ಹಾಗಲ್ಲ ಸಾರ್. ಏನಾದ್ರೂ ಅನಾಹುತವಾದ್ರೆ ಕಂಟ್ರೋಲ್ ರೂಮಿಗೆ ಮಾಹಿತಿ ಬಂದಾಗಲಿಂದ ನಾವು ಏನೇನು ಮಾಡಿದೋ ಅಂತ ಲೆಕ್ಕ ಹಿಡಿದು ನಮ್ಮನ್ನೇ ಹೊಣೆ ಮಾಡ್ತಾರೆ. ಸಮರ್ಥಿಸಿಕೊಳ್ಳೋದಿಕ್ಕೆ ಆಗೋದಿಲ್ಲ’
‘ಮಿನಿಟ್ ಟು ಮಿನಿಟ್ ಲೆಕ್ಕ ಹಿಡಿದರೆ ನಾವೇ ಫಿಕ್ಸಾಗೋದು ಗ್ಯಾರಂಟಿ. ಆಗಿದ್ದು ಆಗಲಿ ಫೇಸ್ ಮಾಡೋಣ’ ಅಂದೆ.
ಥಿಯೇಟರ್ ಕರೆಂಟ್ ಬಂದ್ ಆಯಿತು. ಜನ ಹೋ ಎಂದರು. slide ಕಾಣಿಸಿತು. ಎಲ್ಲ ಗೇಟುಗಳಲ್ಲಿ ರೀಫಂಡ್ ಪಾಸ್ ಕೊಡಲು ಶುರು ಮಾಡಿದರು. ಅರ್ಧಗಂಟೆಯೊಳಗೆ ಥಿಯೇಟರ್ ಖಾಲಿ.
ಮೇಲಧಿಕಾರಿಗಳಿಗೆ ಕರೆ ಮಾಡಿ ‘ಪರಿಸ್ಥಿತಿ ಹೀಗೀಗಿದೆ. ಏನು ಮಾಡಲಿ ಸರ್?’ ಕೇಳಿದೆ.
ಹಾಗ್ ಮಾಡಿ ಹೀಗ್ ಮಾಡಿ ಎಂದವರು, ಹೇಗೂ ಸ್ಪಾಟಲ್ಲಿ ಇದ್ದೀರಾ? you are the better judge ನೀವಂದಂಗೇ ಮಾಡಿ ಬಿಡಿ! ಎಂಬ ಸೂಚನೆ ಬಂತು.
ಥಿಯೇಟರ್ ಖಾಲಿಯಾಗಿತ್ತು. ಒಳಗಡೆ, ಬಾಲ್ಕನಿ, ಹೊರಗಿನ ಕಾರಿಡಾರ್, ಟಿಕೆಟ್ ಕೌಂಟರ್ ಎಲ್ಲ ಕಡೆಗೂ ಪೊಲೀಸರನ್ನು ನಿಯೋಜಿಸಿ ಹೆಜ್ಜೆ ಪ್ರತಿ ಹೆಜ್ಜೆ ತಡಕ ತೊಡಗಿದೆವು. ರಾತ್ರಿ ಎಂಟಾಗಲಿತ್ತು. ಸಂಜೆ ಆರೂವರೆ ಶೋ ರದ್ದಾಗಿತ್ತು.
‘ಎರಡು ಶೋ ಲಾಸ್ ಆಗಿದೆ. ಎಂಟೂವರೆ ಕೊನೆ ಶೋಗಾದ್ರೂ ಬಿಟ್ಟುಕೊಡಿ’ ಥಿಯೇಟರ್ನವರು ಕೇಳಿಕೊಂಡರು.
ನಮಗೂ ಸಾಕಾಗಿತ್ತು. ಬೋಗಸ್ ಬಾಂಬ್ ಕರೆ ಎಂದು ಖಚಿತವಾಗಿದ್ದರೂ, ಸಂಪೂರ್ಣ ತಲಾಶ್ ಮಾಡದೆ ಹೋಗುವಂತಿಲ್ಲ. ಪೊಲೀಸ್ ಪತ್ತೇದಾರಿ ನಾಯಿಗಳೂ ಬಂದಿದ್ದವು. ಬುಸು ಬುಸು ಉಸಿರುಬಿಡುತ್ತಾ ಹುಡುಕ ತೊಡಗಿದವು. ಅದೇ ಅಂತಿಮ ಟೆಸ್ಟ್! ಬಾಂಬ್ ಇದ್ದರೆ ಪತ್ತೆಯಾಗೇ ಆಗುತ್ತೆ ಎಂದು ನಾನೂ ಆಶಾವಾದಿಯಾಗಿ ಕಾಯುತ್ತಾ ನಿಂತಿದ್ದೆ.
ರವಿಕುಮಾರ್ ಎಂಬ ಪೇದೆ ಆಗಿನ್ನೂ ಸರ್ವೀಸಿಗೆ ಸೇರಿದ್ದವನು ಅನುಮಾನದ ರಾಗ ಎಳೆದ, ‘ಏನಿಲ್ಲಾ ಸಾರ್. ಈ ನಾಯಿಗಳು ನಿಜವಾಗಿ ಪತ್ತೆ ಮಾಡ್ತವಾ ಅಂತ’
‘ಏನಯ್ಯಾ ಹೀಗಂತೀಯಾ? ಅವಕ್ಕೆ ಸ್ಪೆಷಲ್ಲಾಗಿ ಟ್ರೇನಿಂಗ್ ಕೊಟ್ಟಿರ್ತಾರೆ. ಬಾಂಬ್ ಇದೆ ಅಂದ್ರೆ ಸಾಕು ಷ್ಯೂರಾಗಿ ಪತ್ತೆ ಮಾಡ್ತಾವೆ’ ಎಂದೆ.
‘ಸಾರಿ ಸರ್. ಮಾಮೂಲಿ ಸ್ಛೋಟಕಗಳಿದ್ದರೆ ಇವು ವಾಸನೆ ಹಿಡೀತಾವೆ. ಈಗೆಲ್ಲಾ ಈಗಿ ನಂತಹ ಪ್ಲಾಸ್ಟಿಕ್ ಬಾಂಬ್ಗಳು ಬಂದಿವೆ (1996) ಅವಕ್ಕೆ ವಾಸನೇನೂ ಇರೋದಿಲ್ಲ. ರಿಮೋಟ್ ಬೇರೆ ಇರುತ್ತೆ. ಹೊರಗಡೆ ಎಲ್ಲಿಂದಾದರೂ ನಿಂತು ಢಮಾರ್ ಅನ್ನಿಸಬೋದು ಅಲ್ಲವಾ?’
ನನ್ನ ದೃಢನಂಬಿಕೆ ಕುಸಿದು ಹೋಯಿತು. ಅದಕ್ಕಿಂತ ನನ್ನ ಅಜ್ಞಾನದ ಬಗ್ಗೆ ನಾಚಿಕೆಯಾಯಿತು. ಬಾಂಬ್ ಪ್ರಪಂಚ ಎಷ್ಟೊಂದು ಮುಂದುವರಿದಿದೆ. ನಾನಿನ್ನೂ ಪಟಾಕಿ ಯುಗದಲ್ಲೇ ಇದ್ದೀನಿ. ನಾಯಿಗಳ ಶೋ ಮಾಡಿಕೊಂಡು ಜನಗಳನ್ನಿರಲಿ ನಮ್ಮನ್ನೂ ವಂಚಿಸಿಕೊಳ್ಳುತ್ತಿದ್ದೇವೆ ಅಲ್ಲವೇ? ಪೊಲೀಸ್ ಅಂದರೆ ಕಳ್ಳರಿಗಿಂತ ತಂತ್ರಗಾರಿಕೆಯಲ್ಲಿ ಮೂವತ್ತು ವರ್ಷ ಮುಂದಿರಬೇಕು. ನಾವು?
‘ಸರಿ ಬಿಡಪ್ಪಾ. ನಾಯಿ ವೇಷ ಹಾಕ್ಕಂಡಿದ್ದೇವೆ. ಜೋರಾಗಿ ಬೊಗಳಿ ಬಿಡೋಣ. ಈಗ ಥಿಯೇಟರ್ ಕ್ಲಿಯರ್ ಮಾಡಿ ಕೊಡೋಣ. ಮುಂದಿನ ಶೋನಾದ್ರೂ ಮಾಡಿಕೊಳ್ಳಲಿ’ ಎಂದೆ.
ಇನ್ನೇನು ತಲಾಶ್ ಮುಗಿಯಲಿದೆ ಎಂದಾಗ ಮೇಲಽಕಾರಿಯೊಬ್ಬ ಬಂದ. ಆವರೆಗೆ ನಡೆದದ್ದನ್ನೆಲ್ಲಾ ಒಪ್ಪಿಸಿದೆ. ಬಂದ ಮೇಲೆ ತನ್ನದೊಂದು ಅಮೋಘ ಸೂಚನೆ ಕೊಡ ಬೇಕಲ್ಲಾ?
‘ನೀವು ಹೀಗೆ path way ನಲ್ಲಿ ನಡೆದುಕೊಂಡು ಬಂದರೆ ಬಾಂಬ್ ಹುಡುಕಿದಂತೆಯೇ?’ ಎಂದು ರಾಗ ಎಳೆದರು. ‘ಒಂದೊಂದು ಪುಶ್ ಬ್ಯಾಕ್ ಸೀಟನ್ನೂ ಎಳೆದೆಳೆದು ನೋಡಿ. ಸೀಟಿನ ಕೆಳಗಡೆ ಏನಾದ್ರೂ ಬಾಂಬನ್ನು ಅಂಟಿಸಿರಬಹುದು. ಪ್ರತಿಯೊಂದನ್ನೂ ಕೈಯಾಡಿಸಿ ತಡ್ರುಸಿ (ತಡವರಿಸಿ) ನೋಡಬೇಕು. ಹೀಗೆ ಸುಮ್ಮನೆ ಬಂದ ಪುಟ್ಟ ಹೋದ ಪುಟ್ಟ ಅಂತ ಹುಡುಕಿದರೆ ಪ್ರಯೋಜನವಿಲ್ಲ’ ಎಂದರು ಕುಹಕವಾಗಿ, ವಿಕಾರವಾಗಿ.
ಮೇಲಧಿಕಾರಿ ಎಂದರೆ ಪ್ರಬುದ್ಧ, ಜಾಣ, ಮೇಧಾವಿ, ಅಪಾರ ಅನುಭವಿ ತಾನೇ? ಅವರ ಸೂಚನೆ ಮೀರುವುದುಂಟೇ? ಅದೂ ಪೊಲೀಸಿನಲ್ಲಿ? ಕಮಕ್ ಕಿಮಕ್ ಅನ್ನದೆ ಅವರು ಹೇಳಿದಂತೆಯೇ ಪುನಾ ಹುಡುಕತೊಡಗಿದೆವು. ಒಂದೊಂದು ಸೀಟಿನ ಕೆಳಗೂ ಬಗ್ಗಿ, ತಡವರಿಸಿ ನೋಡುವುದರೊಳಗೆ ಅನೇಕರ ಡೊಳ್ಳು ಹೊಟ್ಟೆಗಳು ಕರಗಿಯೇ ಬಿಟ್ಟಿದ್ದವು.
ರಾತ್ರಿ ಹನ್ನೊಂದಾಗಿತ್ತು. ಆ ಅಧಿಕಾರಿ ಹೋಗಿ ಎಷ್ಟೋ ಹೊತ್ತಾಗಿತ್ತು. ನಮ್ಮ ತಪಾಸಣೆ ಮುಗಿದಿರಲಿಲ್ಲ. ಅಷ್ಟರಲ್ಲಿ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿ ಬಂದರು. ‘ಏನಾದ್ರೂ ಪತ್ತೆಯಾಯಿತಾ?’ ಅವರ ಪ್ರಶ್ನೆ.
‘ಪತ್ತೆ ಆಗೋಯ್ತಲ್ಲಾ ಸಾರ್’ ಎಂದೆ ಸಲಿಗೆಯ ನಗೆಯಲ್ಲಿ. ನನಗಿಂತ ಎರಡು ವರ್ಷ ಸೀನಿಯರ್. ಅದೇ ತಾನೆ ಬಡ್ತಿ ಹೊಂದಿದ್ದರು.
‘ಓಹ್ ಹೌದಾ? ಮತ್ತೆ ಏನೂ ಮೆಸೇಜೇ ಬರಲಿಲ್ಲವಲ್ಲಾ?’
‘ಯಾರೋ ಈ ಥಿಯೇಟರ್ಗೆ ಆಗದಿರೋನು ಮಧ್ಯಾಹ್ನ
ಮೂರು ಗಂಟೆ ಶೋ ಶುರುವಾದ ಮೇಲೆ ಕಂಟ್ರೋಲ್ ರೂಮಿಗೆ
ಬಾಂಬ್ ಕರೆ ಮಾಡಿದ್ದಾನೆ. ಆದರೆ ಥಿಯೇಟರ್ನವರಿಗೆ ತಿಳಿಸಿಲ್ಲ. ನಾವು ಬಂದು ಹುಡುಕಿ ನೋಡುವುದರೊಳಗೆ ಎರಡು ಶೋ ಕ್ಯಾನ್ಸಲ್ ಆಯ್ತು.
ಮೂರನೇ ಶೋಗೆ ಅನುವು ಮಾಡಿಕೊಡೋಣ ಎಂದರೆ ಸಾಹೇಬರು
‘ಬಂದು ಕೂಲಂಕಷವಾಗಿ ಹುಡುಕಿ ಅಂದರು. ಮೂರನೇ ಶೋ ಕೂಡ ಚೌರ. ಇನ್ನೊಂದು ಶೋ ಫ್ರೀ ಬಿಡಬೇಕು. ಒಟ್ಟು ನಾಲ್ಕು ಶೋ ದುಡ್ಡು ಅವರಿಗೆ ಲಾಸು ಸರ್. ನಮಗೆ ಇಡೀ ದಿನದ ಡ್ಯೂಟಿ ಲಾಸು. ಮಧ್ಯಾಹ್ನದಿಂದ ಬಸ್ಟಾಂಡಿನಲ್ಲಿ ಮೂರು ಪಿಕ್ ಪಾಕೆಟ್, ಒಂದು ಸೂಟ್ ಕೇಸ್ ಲಿಫ್ಟ್ ಆಗಿದೆ. ಅದು ನಮಗೆ ಗಿಫ್ಟು…’
‘ನಾವೇನೂ ಮಾಡೋದಿಕ್ಕೆ ಆಗೋದಿಲ್ರೀ. ಈಗ ltte ಬೆದರಿಕೆ ಇರೋದ್ರಿಂದ ಅರಮನೆ, ಕೆಆರ್ಎಸ್ ಸ್ಛೋಟದ ಬೆದರಿಕೆ ಇರೋದ್ರಿಂದ ಯಾವುದನ್ನೂ ಲಘುವಾಗಿ ತೆಗೆದು ಕೊಳ್ಳೋದಿಕ್ಕೆ ಆಗೋದಿಲ್ಲ. neceesary evils ಅಂದರೆ ಇವೇ’ ಮಾತು ಮುಗಿಸಿದರು.
(ಮುಗಿದಿದೆ)