Mysore
24
overcast clouds

Social Media

ಬುಧವಾರ, 30 ಏಪ್ರಿಲ 2025
Light
Dark

ಆಂದೋಲನ ಓದುಗರ ಪತ್ರ : 03 ಬುಧವಾರ 2022

ಸ್ತುತ್ಯಾರ್ಹ ಕಾರ್ಯಕ್ರಮ

‘ಆಂದೋಲನ -೫೦’ ಸಾರ್ಥಕ ಪಯಣದ ಸಂಭ್ರಮ, ಸಡಗರದ ಸಮಾರಂಭ ಮೈಸೂರಿನಲ್ಲಿ ಜರುಗಿದ ನಂತರ ಹೆಚ್ ಡಿ ಕೋಟೆ ಯಲ್ಲೂ ಕಾರ್ಯಕ್ರಮ ಆಯೋಜಿಸಿದ್ದು ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಜನತೆ ಅತ್ಯಂತ ಹೆಮ್ಮೆ ಪಡುವಂತಹ ವಿಚಾರವಾಗಿದೆ. ‘ಆಂದೋಲನ’ ಸಂಸ್ಥಾಪಕ ಸಂಪಾದಕರಾದ ರಾಜಶೇಖರಕೋಟಿಯವರು ಹೆಚ್ ಡಿ ಕೋಟೆ ತಾಲ್ಲೂಕಿನ ಜನತೆಯೊಂದಿಗೆ ಹೆಚ್ಚಿನ ನಿಕಟ ಸಂಪರ್ಕವಿಟ್ಟು ಕೊಂಡು ತಾಲ್ಲೂಕಿನ ‘ಆಗು-ಹೋಗು’ಗಳಿಗೆ ಸ್ಪಂದಿಸಿದ ರೀತಿಗೆ ಗೌರವ ಸಲ್ಲಿಸಲು ಅವಕಾಶ ನೀಡುವಂತಹ ರೀತಿಯಲ್ಲಿ ‘ಆಂದೋಲನ’ದಿನ ಪತ್ರಿಕೆ ಸಂಪಾದಕರಾದ ರವಿ ಕೋಟಿ ಹಾಗೂ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಯವರು ‘ಆಂದೋಲನ-೫೦’ ಸಾರ್ಥಕ ಪಯಣದ ಕಾರ್ಯಕ್ರಮ ವನ್ನು ಮೈಸೂರಿನ ನಂತರ,ಹೆಚ್ ಡಿ ಕೋಟೆಯಲ್ಲಿ ನಡೆಸಿದ್ದು ಸ್ತುತಾರ್ಹ್ಯವಾಗಿದೆ.

-ರವಿ ಕೋಟೆ, ಮೈಸೂರು.


ರೂಪಾಯಿ ಕುಸಿತಕ್ಕೆ ಕಾರಣವೇನು?

ಜನವರಿಯಲ್ಲಿ (೨೦೨೨) ಒಂದು ಡಾಲರಿಗೆ ರೂಪಾಯಿ ಮೌಲ್ಯ ೭೪.೫೦ ಇದ್ದದ್ದು ಆರು ತಿಂಗಳಲ್ಲಿ ನಿರಂತರ ಕುಸಿತ ಕಂಡಿದೆ. ಈಗ ಕೆಲವು ದಿನಗಳ ಹಿಂದೆ ಒಂದು ಡಾಲರಿಗೆ ೮೦ ರೂಪಾಯಿ ದಾಟಿತ್ತು. ನಮ್ಮ ದೇಶ ಹೊರದೇಶಗಳೊಂದಿಗೆ ಮಾಡುವ ಒಟ್ಟು ಆಮದು ರಫ್ತಿನಲ್ಲಿ ಶೇ.೮೫.೬ರಷ್ಟು ವ್ಯವಹಾರವನ್ನು ಡಾಲರಿನಲ್ಲಿ ಮಾಡುತ್ತದೆ. ಹಾಗಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರಿಗೆ ಬೇಡಿಕೆ ಜಾಸ್ತಿಯಾದಷ್ಟೂ ರೂಪಾಯಿಯ ಬೆಲೆ ಕುಸಿಯತೊಡಗುತ್ತದೆ. ಹಾಗೆಯೇ ಭಾರತ ತಾನು ಮಾಡುವ ರಫ್ತಿಗಿಂತ ಆಮದು ಜಾಸ್ತಿಯಾಗುತ್ತಾ ಹೋದಂತೆ ವ್ಯಾಪಾರದ ಕೊರತೆ ಜಾಸ್ತಿಯಾಗುವ ಜೊತೆಗೆ ಡಾಲರಿನ ಮುಂದೆ ರೂಪಾಯಿ ಬೆಲೆಯೂ ಕುಸಿಯುತ್ತಾ ಹೋಗುತ್ತದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ೨.೬೫ ಲಕ್ಷ ಕೋಟಿ ರೂ.ಗಳಷ್ಟು ಭಾರೀ ಮೊತ್ತದ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ಅವರುಗಳು ಈ ಹಿಂತೆಗೆದಿರುವ ಹಣವನ್ನು ಡಾಲರಿಗೆ ಬದಲಾಯಿಸಿಕೊಳ್ಳುತ್ತಿರುವುದರಿಂದ ಡಾಲರಿಗೆ ಬೇಡಿಕೆ ಹೆಚ್ಚಾಗಿ, ಇದರಿಂದಲೂ ರೂಪಾಯಿ ಬೆಲೆ ಕುಸಿಯುತ್ತಾ ಬಂದಿದೆ.

-ಮದನ್ ಹಾದನೂರು, ಮೈಸೂರು.


ಅತಿರೇಕದ ಪ್ರತಿಕ್ರಿಯೆಯ ಹುಚ್ಚಾಟ

ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಅಮಾನುಷ ಹತ್ಯೆಯ ನಂತರ ಕೆಲವು ರಾಜಕಾರಣಿಗಳು ಮನಂಬಂದಂತೆ ಹೇಳಿಕೆ ನೀಡುತಿದ್ದಾರೆ. ಕೊಲೆಗಾರರನ್ನು ಶೂಟೌಟ್ ಮಾಡಬೇಕು, ಎನ್ ಕೌಂಟರ್ ಮಾಡಬೇಕು ಎಂದೆಲ್ಲಾ ಪ್ರಕ್ರಿಯಿಸುತ್ತಿದ್ದಾರೆ. ಅವರ ಅಕ್ರೋಶದ ಹಿಂದಿನ ನೋವು ಅರ್ಥವಾಗುತ್ತದೆ. ಅದರೂ ಈ ನಾಡಿನಲ್ಲಿ ಕಾನೂನು ಪ್ರಕ್ರಿಯೆ ಇದೆ ಎನ್ನುವುದನ್ನು ಮರೆಯಲಾಗದು. ವರ್ಷಗಳ ಹಿಂದೆ ಅಪ್ರಬುದ್ಧ ಹುಡುಗಿಯೊಬ್ಬಳು ಹುಚ್ಚು ಅವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದಾಗಲೂ ಅವಳಿಗೆ ಗುಂಡಿಕ್ಕಬೇಕು, ಎನ್ ಕೌಂಟರ್ ಮಾಡಬೇಕು ಎಂದು ಮುಂತಾಗಿ ಕೋರಸ್ ಕೇಳಿತ್ತು. ಹತ್ಯಾಕಾರಾರು ಮಾಡಿದ್ದನ್ನೇ ಸರ್ಕಾರ ಮಾಡಿದರೆ ಅವರಿಗೂ ಸರ್ಕಾರಕ್ಕೂ ಏನು ವ್ಯತ್ಯಾಸ? ಹತ್ಯಾಕಾರರನ್ನು ಕಾನೂನಿನ ಪ್ರಕ್ರಿಯೆಯ ಮೂಲಕ ದಂಡಿಸಬೇಕೇ ವಿನಹ ಹುಚ್ಚು ಅವೇಶದಿಂದ ಅಲ್ಲ. ಅದರ ಬದಲಿಗೆ ಶೀಘ್ರ ವಿಚಾರಣೆ ನಡೆಸಿ ದಂಡನೆಯಾಗಲಿ ಎಂದು ಒತ್ತಾಯಿಸಲಿ.

-ರಮಾನಂದ ಶರ್ಮಾ, ಬೆಂಗಳೂರು.


ಕೋಮುಗಲಭೆ ಅಂತ್ಯಗೊಳ್ಳಬೇಕು

ನಮ್ಮ ಸಾರ್ವಜನಿಕ ಪ್ರಜ್ಞೆ ಎಷ್ಟು ಕಲುಷಿತವಾಗಿದೆ ಎಂದರೆ ರಾಜಕೀಯ ಸಿದ್ಧಾಂತ, ಮತೀಯ ಅಸ್ಮಿತೆ ಅಥವಾ ಜಾತಿ ಅಸ್ಮಿತೆಗಳು ಹೊತ್ತ ಹತ್ಯೆಗಳು ಮಾತ್ರವೆ ನಮ್ಮನ್ನು ಚಿಂತೆಗೆ ನೂಕುತ್ತವೆ. ಇದರಿಂದ ಆಚೆಗಿನ ಹತ್ಯೆಗಳು ನಮ್ಮನ್ನು ಹೆಚ್ಚಾಗಿ ಕಾಡುವುದಿಲ್ಲ. ಹಂತಕರು ಯಾರು, ಹತ್ಯೆಗೀದಡಾವರು ಯಾರು ಎಂಬ ಪ್ರಶ್ನೆ ಎದುರಾದ ಕೂಡಲೇ ಯಾವುದೊ ಒಂದು ಅಸ್ಮಿತೆ ನಮ್ಮ ಆಲೋಚನೆ, ಮಾತುಕತೆಗಳು ಕೇಂದ್ರಬಿಂದುವಾಗಿ ಬರುತ್ತದೆ. ಮತ ದ್ವೇಷ, ಜಾತಿ ದ್ವೇಷ, ಜಾತಿ ಶ್ರೇಷ್ಠತೆ, ಈ ಎಲ್ಲಾ ಅವಗುಣಗಳು ಯುವ ಜನರ ಮನಸ್ಸುಗಳಲ್ಲಿ ಉದ್ದೀಪನಗೊಳಿಸುವ ಉನ್ಮಾದ ಬಹಳ ಅಪಾಯಕಾರಿ. ಬೆಳ್ಳಾರೆಯ ಪ್ರವೀಣ್ ಮತ್ತು ಮಸೂದ್ ಇಬ್ಬರೂ ಇಂತಹುದೆ ಉನ್ಮದದ ಬಲಿಪಶುಗಳೇ? ತನಿಖೆಯಿಂದ ಇದು ಗೊತ್ತಗಬೇಕು. ಹಂತಕರು ಯಾರೇ ಇದ್ದರೂ, ಯಾವ ಧರ್ಮ, ಜಾತಿ, ಪಂಗಡ, ಪಕ್ಷಕ್ಕೆ ಸೇರಿದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲೇ ಬೇಕು. ಕಾನೂನು ಈ ದೆಸೆಯಲ್ಲಿ ತನ್ನ ಮಹತವದ ಪಾತ್ರ ವಹಿಸುವುದು ತುಂಬಾ ಮುಖ್ಯ. ಇದು ಕಾನೂನಿನ ಮೇಲೆ ಜನರಿಟ್ಟಿರುವ ಅಪಾರ ನಂಬಿಕೆಯನ್ನು ದೃಢೀಕರಿಸಬಲ್ಲದು.

-ಲಾವಣ್ಯ, ಸಾಗರ್ ಕೆ ಎನ್, ಮಹಾರಾಜ ಕಾಲೇಜು, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ