14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಆಗಬೇಕು ಎಂದ ಅದರ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸಚಿವ ಆರ್.ಅಶೋಕ್ ಒತ್ತಾಯದಂತೆ ಅಲ್ಲೇ ಆ ಕಾರ್ಯಕ್ರಮ ನಡೆಯಿತು. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಂತರ ಅಲ್ಲಿ ನಡೆದ ಮೊದಲ ಉದ್ಘಾಟನಾ ಸಮಾರಂಭವಿದು. ಬಹಳ ಕಡಿಮೆ ಕಾಲಾವಧಿಯಲ್ಲಿ ಹಮ್ಮಿಕೊಂಡ ಕಾರಣ ನೆರೆಯ ಶ್ರೀಲಂಕಾ, ನೇಪಾಳ ಮತ್ತು ಇರಾನ್ ಹಾಗೂ ಇಸ್ರೇಲ್ ಹೊರತುಪಡಿಸಿದರೆ ಬೇರೆ ದೇಶಗಳಿಂದ ಅಭ್ಯಾಗತರಿರಲಿಲ್ಲ. ಕೆಲವು ದೇಶಗಳ ಸಿನಿಮಾ ಮಂದಿಯ ಜೊತೆ ಪತ್ರ ವ್ಯವಹಾರ ಮಾಡಿ ಆಹ್ವಾನಿಸಿ, ಅವರು ಪ್ರಯಾಣಕ್ಕೆ ವೀಸಾ ಮಾಡಿಸಲು ಬೇಕಾದಷ್ಟು ಕಾಲಾವಧಿ ಕೂಡ ಇರಲಿಲ್ಲವೆನ್ನಿ.
ಕೊನೆಯ ಕ್ಷಣದಲ್ಲಿ ಹೆಸರಾಂತ ಛಾಯಾಗ್ರಾಹಕ ಗೋವಿಂದ ನಿಹಲಾನಿ ಮತ್ತು ಆರ್ಆರ್ಆರ್ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಅತಿಥಿಗಳಾಗಿದ್ದರು. ಒಂದೇ ಚಿತ್ರದಲ್ಲಿ ಹೆಸರಾದ ನಟಿ ಸಪ್ತಮಿಗೌಡ ಮತ್ತು ಅಭಿಷೇಕ್ ಅಂಬರೀಶ್ ಕೂಡ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರ ಸಂಪುಟದ ಕೆಲವು ಮಂದಿ ಸಚಿವರು ವೇದಿಕೆಯ ಮೇಲಿದ್ದರು.
ಕನ್ನಡ ಚಿತ್ರೋದ್ಯಮಕ್ಕೆ ಎಲ್ಲ ರೀತಿಯ ಉತ್ತೇಜನ, ನೆರವುಗಳನ್ನು ನೀಡುವುದಾಗಿ ಪ್ರಕಟಿಸಿದ ಬೊಮ್ಮಾಯಿ ಅವರು, ಅಂಬರೀಶ್ ಸ್ಮಾರಕದ ಉದ್ಘಾಟನೆ ಮತ್ತು ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡುವುದನ್ನು ಅಲ್ಲೇ ಪ್ರಸ್ತಾಪಿಸಿದರು. ಕಂಠೀರವ ಸ್ಟುಡಿಯೊದಲ್ಲಿ ಅವರ ಸ್ಮಾರಕ. ಮುಖ್ಯಮಂತ್ರಿಗಳ ನಿವಾಸವಿರುವ ರೇಸ್ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರು. ಅಂಬರೀಶ್ ಹೆಸರಿಡಲು ಇದಕ್ಕಿಂತಲೂ ಸೂಕ್ತವಾದ ರಸ್ತೆ ಇನ್ನೊಂದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುವ ಮೂಲಕ ಅಂಬರೀಶ್ ಮತ್ತು ರೇಸ್ ಜೊತೆಗಿನ ಅವಿನಾಭಾವ ಸಂಬಂಧವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದ ವೇಳೆ ತಿಳಿಯ ಹೇಳಿದರು. ಮಾತ್ರವಲ್ಲ, ತಮ್ಮ ಮತ್ತು ಅಂಬರೀಶ್ ಜೊತೆಗಿನ ಗೆಳೆತನ, ಅಂಬರೀಶ್ ಮೊದಲು ವಾಸವಾಗಿರುತ್ತಿದ್ದ ಉಡ್ಲ್ಯಾಂಡ್ಸ್ ಹೋಟೆಲ್ ಇತ್ಯಾದಿ ಕೂಡ ಪ್ರಸ್ತಾಪಿಸಿದರಲ್ಲದೆ, ಪುನೀತ್ ರಾಜಕುಮಾರ್ ಸ್ಮಾರಕದ ಕೆಲಸದ ಬಗೆಗೂ ಹೇಳಿದರು.
ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ, ಬೆಂಗಳೂರಿನಲ್ಲಿ ಅಂಬರೀಶ್ ಸ್ಮಾರಕ, ಪುನೀತ್ ರಾಜಕುಮಾರ್ ಸ್ಮಾರಕ, ಅಂಬರೀಶ್ ರಸ್ತೆ, ಪುನೀತ್ ರಾಜಕುಮಾರ್ ರಸ್ತೆ ಹೀಗೆ ಜನಪ್ರಿಯ ನಟರ ಹೆಸರಲ್ಲಿ ಸ್ಮಾರಕ, ರಸ್ತೆಗಳಿಗೆ ಹೆಸರನ್ನು ಇಡುವುದರ ಬಗ್ಗೆ ಯಾರ ತಕರಾರೂ ಇಲ್ಲ. ಆದರೆ ಸರ್ಕಾರ, ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯರ ಹೆಸರನ್ನು ಪರಿಗಣಿಸದೆ ಇರುವುದರ ಕುರಿತಂತೆ ಸಂಬಂಧಪಟ್ಟ ವರು ಆಕ್ಷೇಪಿಸುತ್ತಾರೆ.
ಕನ್ನಡದ ಮೊದಲ ಚಿತ್ರದ ನಟರಾದ ಸುಬ್ಬಯ್ಯನಾಯ್ಡು, ಆರ್.ನಾಗೇಂದ್ರ ರಾವ್, ಮೂಕಿ ಚಿತ್ರಗಳ ದಿನಗಳಿಂದಲೂ ಸಕ್ರಿಯರಾಗಿದ್ದ ಗುಬ್ಬಿ ವೀರಣ್ಣ ಅಲ್ಲದೆ ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ ಮುಂತಾದವರ ನೆನಪೇ ಇಲ್ಲದಂತೆ ಸರ್ಕಾರ ಮತ್ತು ಚಿತ್ರೋದ್ಯಮ ವರ್ತಿಸುತ್ತಿದೆ ಎನ್ನುವ ಆರೋಪ ಸುಳ್ಳೇನೂ ಅಲ್ಲ.
ಇನ್ನು ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಗೋವಿಂದ ನಿಹಲಾನಿ ಅವರು ತಮ್ಮ ಮಾರ್ಗದರ್ಶಕರಾಗಿದ್ದ ವಿ.ಕೆ.ಮೂರ್ತಿ ಅವರ ಪುನರವಲೋಕನ ಈ ಚಿತ್ರೋತ್ಸವದಲ್ಲಿ ಇರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ, ತಾವು ಕೂಡ ಮೂರ್ತಿ ಅವರು ಓದಿದ ಬೆಂಗಳೂರಿನ ಎಸ್ಜೆಪಿ (ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ)ಯ ವಿದ್ಯಾರ್ಥಿ ಎನ್ನುವುದನ್ನು ನೆನಪಿಸಿಕೊಂಡರು. ಕಾಕತಾಳೀಯ ಎಂದರೆ ಅಕಾಡೆಮಿಯ ಅಧ್ಯಕ್ಷರಾಗಿರುವ ಅಶೋಕ ಕಶ್ಯಪ್ ಅವರು ಕೂಡ ಈ ಸಂಸ್ಥೆಯಿಂದಲೇ ಛಾಯಾಗ್ರಹಣ ಡಿಪ್ಲೊಮೊ ಪಡೆದವರು.
ಉದ್ಘಾಟನಾ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡವರು ವಿಜಯೇಂದ್ರ ಪ್ರಸಾದ್. ಡಾ.ರಾಜಕುಮಾರ್ ಹಾಡಿರುವ ‘ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು’ ಎನ್ನುವ ಸಾಲಿನೊಂದಿಗೆ ಮಾತು ಆರಂಭಿಸಿದ ಅವರು, ನನಗೆ ಆ ಭಾಗ್ಯ ಇರಲಿಲ್ಲ, ಆದರೆ, ನನ್ನ ಮಗ ಮತ್ತು ಮಗಳು ಕನ್ನಡ ನಾಡಿನಲ್ಲಿ ಹುಟ್ಟಿದ್ದಾರೆ. ಈ ಎತ್ತರಕ್ಕೆ ಏರಿದ್ದಾರೆ. ಕನ್ನಡಿಗರ ಆಶೀರ್ವಾದ ಇದಕ್ಕೆ ಕಾರಣ. ನಿಮ್ಮ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದರು. ಈ ಬಾರಿ ಆಸ್ಕರ್ ಪ್ರಶಸ್ತಿಯ ಕಣದಲ್ಲಿ ಸುದ್ದಿ ಮಾಡಿದ ಆರ್ಆರ್ಆರ್ ಚಿತ್ರದ ನಿರ್ದೇಶಕ ರಾಜಮೌಳಿ ಅವರು ವಿಜಯೇಂದ್ರ ಪ್ರಸಾದ್ ಅವರ ಮಗ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಂಗೀತ ಸಂಯೋಜಕ ಕೀರವಾಣಿ, ವಿಜಯೇಂದ್ರ ಪ್ರಸಾದ್ರ ಸೋದರನ ಮಗ.
ಈ ಬಾರಿ ಚಿತ್ರೋತ್ಸವದಲ್ಲಿ ಕೆಲವೊಂದು ವಿಭಾಗಗಳನ್ನು, ಬಹುಶಃ ಸಮಯದ ಅಭಾವದಿಂದ, ಕೈಬಿಡಲಾಗಿದೆ. ವಿಶೇಷ ವಿಷಯಾಧಾರಿತ ಆಯ್ದ ಚಿತ್ರಗಳ ವಿಭಾಗ, ಆತ್ಮಕಥೆ ವ್ಯಕ್ತಿ–ಚಿತ್ರಗಳು/ ಆತ್ಮಕಥೆ / ಜೀವನಚರಿತ್ರೆ ಆಧಾರಿತ ಚಿತ್ರಗಳ ವಿಭಾಗ, ಕೇಳರಿಯದ ಅದ್ಭುತ ಭಾರತ; ಹೆಚ್ಚು ಪ್ರಚಾರವಿಲ್ಲದ ಭಾಷೆಗಳ ಚಿತ್ರಗಳ ವಿಭಾಗ, ಏಷ್ಯಾ ಚಲನಚಿತ್ರ ಪ್ರಚಾರ ಜಾಲ (ನೆಟ್ಪ್ಯಾಕ್) ಪ್ರಶಸ್ತಿ ವಿಜೇತ ಚಿತ್ರಗಳ ವಿಭಾಗ ಈ ಬಾರಿ ಇರಲಿಲ್ಲ. ಹೆಚ್ಚು ಪ್ರಚಾರವಿಲ್ಲದ ಭಾಷಾಚಿತ್ರಗಳ ವಿಭಾಗ ಇಲ್ಲದೆ ಇದ್ದರೂ, ಸ್ಪರ್ಧೆಯಲ್ಲಿ ತುಳು, ಕೊಡವ, ಮುಡುಗ, ಬೋಡೋ, ಸಂತಾಲಿ ಭಾಷೆಯ ಚಿತ್ರಗಳು ಆ ಕೊರತೆಯನ್ನು ನೀಗಿಸಿದವು.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಮುಖ್ಯವಾಹಿನಿ ಚಿತ್ರಗಳ ಸ್ಪರ್ಧೆ ಇರುವುದಿಲ್ಲ. ಆದರೆ ಈ ಹಿಂದೆ ಕನ್ನಡ ಜನಪ್ರಿಯ ಮನೋರಂಜನಾ ಚಿತ್ರಗಳ ಸ್ಪರ್ಧೆ ಸೇರಿದ್ದನ್ನು ಈ ಬಾರಿ ಕೈಬಿಟ್ಟು, ಪರ್ಯಾಯವಾಗಿ ಕನ್ನಡ ಜನಪ್ರಿಯ ಚಿತ್ರಗಳ ವಿಭಾಗ ಸೇರಿಸಲಾಗಿತ್ತು. ಈ ವಿಭಾಗದ ಆಯ್ಕೆ ಮತ್ತು ಹೊಣೆಗಾರಿಕೆ ವಾಣಿಜ್ಯ ಮಂಡಳಿಯದು. ಅದು ಗಾಳಿಪಟ 2, ವೇದ, ವಿಕ್ರಾಂತ್ ರೋಣ, ಬೈ ಟು ಲವ್, ರಾಜ್ ಲೈಟ್ಸ್ ಅಂಡ್ ಸೌಂಡ್ಸ್, ಹೆಡ್ಬುಷ್, ಪದವಿಪೂರ್ವ, ದ ಫಿಲಂ ಮೇಕರ್, ಕಾಕ್ ಟೈಲ್, ವದನ, ಭರ್ಜರಿ ಆಟ, ಕಾಮಧೇನು, ಹಕ್ಕಿಗಳ ಕನಸು ಚಿತ್ರಗಳ ಹೆಸರನ್ನು ಕಳುಹಿಸಿತ್ತು.
ಈ ಚಿತ್ರಗಳಲ್ಲಿ ಹಲವು ಚಿತ್ರಗಳ ಡಿಸಿಪಿ ಬಂದಿಲ್ಲ. ಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಸರಿಯಾದ ಪ್ರತಿಕ್ರಿಯೆಯೂ ಇರಲಿಲ್ಲ ಎನ್ನುತ್ತಾರೆ ಇವುಗಳ ಪ್ರದರ್ಶನದ ಜವಾಬ್ದಾರಿ ಹೊತ್ತವರು. ಜನಪ್ರಿಯ ಚಿತ್ರಗಳ ಬಹುತೇಕ ಮಂದಿ, ಚಿತ್ರೋತ್ಸವಕ್ಕೂ ತಮಗೂ ಏನೂ ಸಂಬಂಧ ಇಲ್ಲ ಎನ್ನುವಂತಿದ್ದರು. ಇದು ಚಿತ್ರಗಳ ನಟನಟಿಯರು, ತಂತ್ರಜ್ಞರು ಮಾತ್ರವಲ್ಲ, ಉದ್ಯಮಿಗಳಿಗೂ ಅನ್ವಯವಾಗುವ ಮಾತು.
ಚಿತ್ರೋತ್ಸವದಲ್ಲಿ ಪ್ರತಿನಿಧಿಗಳಾಗಲು, ಆನ್ಲೈನ್ ಮೂಲಕ ಅವಕಾಶ ಇತ್ತು. ಚಿತ್ರೋದ್ಯಮದ ಗಣ್ಯರು, ಸ್ಪರ್ಧೆಯಲ್ಲಿರುವ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು, ಮಾಧ್ಯಮದ ಮಂದಿ ಮೊದಲಾದವರಿಗೆ ಉಚಿತ ಪಾಸ್ಗಳು. ಮೂಲಗಳ ಪ್ರಕಾರ, ಆನ್ಲೈನ್ನಲ್ಲಿ ಪ್ರತಿನಿಧಿಯಾದವರು ದುಪ್ಪಟ್ಟು ಉಚಿತ ಪಾಸ್ಗಾಗಿ ಬಂದವರೇ.
ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಾಮಾನ್ಯವಾಗಿ ಸ್ಥಳೀಯ ಚಿತ್ರೋದ್ಯಮದಿಂದ ಕೆಲವೇ ಚಿತ್ರಗಳ ಪ್ರದರ್ಶನ ಇರುತ್ತದೆ. ಆದರೆ ಈ ಬಾರಿ, ಸ್ಛರ್ಧೆಯೂ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ನಡೆಯಿತು. ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗದ ಚಿತ್ರಗಳ ನಿರ್ಮಾಪಕ/ ನಿರ್ದೇಶಕರು ಚಿತ್ರೋತ್ಸವ ನಿರ್ದೇಶಕರ ಮುಂದೆ ತಮ್ಮ ಚಿತ್ರಗಳ ಪ್ರದರ್ಶನಕ್ಕಾಗಿ ದುಂಬಾಲು ಬೀಳುತ್ತಿದ್ದ ದೃಶ್ಯಗಳೂ ಇದ್ದವು. ಅವರೂ ಸಾಕಷ್ಟು ಔದಾರ್ಯ ಮೆರೆದರೆನ್ನಿ!
ನಿನ್ನೆ ಚಿತ್ರೋತ್ಸವದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನದ ವೇಳೆ ಚುನಾವಣೆ ಘೋಷಣೆ ಆಗಿರುವುದರಿಂದ ಸಚಿವರು, ರಾಜಕಾರಣಿಗಳು ಈ ಸಮಾರಂಭದಲ್ಲಿ ಭಾಗವಹಿಸುವಂತಿರಲಿಲ್ಲ. ಚುನಾವಣಾ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಾಜ್ಯಪಾಲರೂ ದೆಹಲಿಗೆ ತೆರಳಿದ್ದರು. ಹಾಗಾಗಿ ಈ ಬಾರಿಯ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಲಾಗಲಿಲ್ಲ.