ರಾಜದ್ರೋಹಕ್ಕೆ ಶಿಕ್ಷೆ ನೀಡುವ ಕಾನೂನನ್ನು ಉಳಿಸಿಕೊಳ್ಳಬೇಕಷ್ಟೇ ಅಲ್ಲದೆ, ಹೆಚ್ಚಿನ ಶಿಕ್ಷೆಯನ್ನು ನಿಗದಿ ಮಾಡಿ ಬಲಪಡಿಸಬೇಕು ಎಂದು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ! ಸ್ವತಂತ್ರ ಸಾರ್ವಭೌಮ ಗಣರಾಜ್ಯವನ್ನು ಹಿಂದಕ್ಕೆ ಎಳೆದೊಯ್ಯುವ ಪ್ರತಿಗಾಮಿ ಶಿಫಾರಸು ಇದು.
ವ್ಯಕ್ತಿಯೊಬ್ಬ ಬಾಯಿಮಾತಿನಲ್ಲಿ ಅಥವಾ ಬರಹದಲ್ಲಿ ಅಥವಾ ಸಂಕೇತ ಗಳಲ್ಲಿ ಅಥವಾ ದೃಶ್ಯ ಪ್ರಾತಿನಿಧ್ಯದಲ್ಲಿ ವಿಧಿದ್ವಾರಾ ಸ್ಥಾಪಿಸಲಾಗಿರುವ ಭಾರತ ಸರ್ಕಾರದ ವಿರುದ್ಧ ದ್ವೇಷ, ತಿರಸ್ಕಾರ ಅಥವಾ ಅಸಂತೋಷ ಉಂಟು ಮಾಡುವುದು ಅಥವಾ ಅಂತಹ ಪ್ರಯತ್ನ ಮಾಡುವುದು ರಾಜದ್ರೋಹ. ಭಾರತೀಯ ಅಪರಾಧ ಸಂಹಿತೆಯ 124ಎ ಸೆಕ್ಷನ್ ಈ ವ್ಯಾಖ್ಯೆಯನ್ನು ನೀಡುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಗ್ಗು ಬಡಿಯಲು 130 ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತ ಜಾರಿಗೆ ತಂದಿದ್ದ ಕಾನೂನು.
ದೇಶ ಸ್ವತಂತ್ರವಾಗಿ ಏಳು ದಶಕಗಳೇ ಉರುಳಿವೆ. ಸರ್ಕಾರದ ನೀತಿ ನಿರ್ಧಾರಗಳನ್ನು, ಕ್ರಿಯೆಗಳನ್ನು ಬರಹ, ಭಾಷಣ, ಸಂಜ್ಞೆ, ಟೀಕಿಸುವ, ವಿಮರ್ಶಿಸುವ, ಶಾಂತಿಯುತವಾಗಿ ಪ್ರತಿಭಟಿಸುವ ಮೂಲಭೂತ ಹಕ್ಕು ಎಲ್ಲ ನಾಗರಿಕರಿಗೂ ಉಂಟು. ಈ ಕ್ರಿಯೆಗಳಿಗೆ ರಾಜದ್ರೋಹದ ಹಣೆಪಟ್ಟಿ ಹಚ್ಚಿ ಸೆರೆಮನೆಗೆ ತಳ್ಳುವುದು ಭಾರತ ಗಣರಾಜ್ಯದ ಮೂಲತತ್ವಗಳ ಉಲ್ಲಂಘನೆ. ಸರ್ಕಾರ ಮತ್ತು ದೇಶ ಒಂದೇ ಅಲ್ಲ. ಇವೆರಡೂ ಬೇರೆ ಬೇರೆ. ಸರ್ಕಾರ ಎಂಬುದು ಭಾರತ ದೇಶ ಅಲ್ಲ. ಸರ್ಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಅಲ್ಲ. ಸಂವಿಧಾನದ 19ನೆಯ ಪರಿಚ್ಛೇದ ನೀಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಕೂಡ ನಿರ್ಬಂಧಿತವೇ ವಿನಾ ಅನಿರ್ಬಂಧಿತ ಅಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವು ದೇಶದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಸಾರ್ವ ಭೌಮತೆಗೆ ಚ್ಯುತಿ ತರುವಂತಿಲ್ಲ. ಈ ಅಂಶವನ್ನು ಕಾನೂನು ಆಯೋಗ ಮರೆತಂತಿದೆ.
ದೇಶವನ್ನು, ಅದರ ಆಧಾರ ಸ್ತಂಭಗಳನ್ನು ಅಸ್ಥಿರಗೊಳಿಸುವ, ಭಯೋತ್ಪಾದನೆ ಉಂಟು ಮಾಡುವ ಕೃತ್ಯಗಳು ಶಿಕ್ಷಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಸರ್ಕಾರದ ವಿರುದ್ಧದ ಕ್ಷೀಣದನಿಯ ಭಿನ್ನಾಭಿಪ್ರಾಯಗಳನ್ನೂ, ಟೀಕೆ ಟಿಪ್ಪಣಿಗಳನ್ನು ಕೂಡ ಕ್ರೂರವಾಗಿ ಹತ್ತಿಕ್ಕುವ ಪ್ರವೃತ್ತಿಯಿದು.
ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತುಳಿಯಲು ಸರ್ಕಾರಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಸಾಹತುಶಾಹಿ ಕಾನೂನು. 2014ರ ನಂತರ ರಾಷ್ಟ್ರೀಯ ಕಳಕಳಿಯ ವಿಚಾರಗಳನ್ನು ಪ್ರಸ್ತಾಪಿಸುವ ಶಿಕ್ಷಣವೇತ್ತರು, ರಾಜಕೀಯ ವಿರೋಧಿಗಳು, ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು ಪತ್ರಕರ್ತರ ದನಿ ಅಡಗಿಸಲು ರಾಜದ್ರೋಹದ ಕಾನೂನನ್ನು ಬಳಸಲಾಗಿದೆ.
ಈ ಕಾನೂನಿನ ಜಾರಿಯನ್ನು ಸುಪ್ರೀಂ ಕೋರ್ಟು 2022ರ ಮೇ ತಿಂಗಳಲ್ಲೇ ತಡೆ ಹಿಡಿದಿದೆ ಮತ್ತು ಬಲವಾದ ಆಕ್ಷೇಪಗಳನ್ನು ಪ್ರಕಟಿಸಿದೆ. ಈ ಕಾನೂನಿನ ಅಡಿಯಲ್ಲಿ ಎಫ್ಐಆರ್ಗಳನ್ನು ದಾಖಲಿಸಕೂಡದು ಎಂದು 2022ರ ಮೇ 11ರಂದೇ ಸೂಚನೆ ನೀಡಿತ್ತು. ಎಲ್ಲ ಬಾಕಿ ವಿಚಾರಣೆಗಳು, ಅಪೀಲುಗಳು, ಹಾಗೂ ಆಪಾದನಾ ಪಟ್ಟಿ ತಯಾರಿಕೆಗೂ ತಡೆಯಾಜ್ಞೆ ನೀಡಿತ್ತು. ಈ ಕರಾಳ ಕಾನೂನನ್ನು ರದ್ದು ಮಾಡುವ ಕುರಿತು ವಾದ ಮಂಡನೆಯನ್ನು ಆಲಿಸುವ ಇಂಗಿತ ನೀಡಿದೆ ಕೂಡ.
ಇಂತಹ ಹಿನ್ನೆಲೆಯಿದ್ದಾಗಲೂ ರಾಜದ್ರೋಹದ ಕಾನೂನನ್ನು ಉಳಿಸಿ ಕೊಂಡು ಅದನ್ನು ಇನ್ನಷ್ಟು ಬಲಪಡಿಸುವ ಅರ್ಥಾತ್ ಕರಾಳಗೊಳಿಸುವ ಶಿಫಾರಸನ್ನು ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವುದು ಅತ್ಯಂತ ದುರದೃಷ್ಟಕರ. ನೆಲದ ಅತ್ಯುನ್ನತ ನ್ಯಾಯಾಲಯ ವರ್ಷದ ಹಿಂದೆ ವ್ಯಕ್ತಪಡಿಸಿದ ಆತಂಕಗಳನ್ನು ಕಾನೂನು ಆಯೋಗ ನಿರ್ಲಕ್ಷಿಸುವುದಾದರೂ ಹೇಗೆ? ವಸಾಹತುಶಾಹಿ ಕಾನೂನಿದು ಎಂಬ ಆಕ್ಷೇಪವನ್ನೂ ಆಯೋಗ ಲೆಕ್ಕಕ್ಕೆ ಇಟ್ಟಿಲ್ಲ. ನಮ್ಮ ಇಡೀ ಕಾನೂನು ವ್ಯವಸ್ಥೆಯ ಹಂದರವೇ ವಸಾಹತುಶಾಹಿಯ ಬಳುವಳಿ ಎಂಬ ಹೊಣೆಗೇಡಿ ವಾದವನ್ನು ಮುಂದೆ ಮಾಡಿದೆ.
ಮಾವೋವಾದಿ ತೀವ್ರವಾದ, ಭಯೋತ್ಪಾದನೆ, ವಿಚ್ಛಿದ್ರಕಾರಿ ಆಂದೋಲನಗಳು ಹಾಗೂ ಈಶಾನ್ಯ ಭಾರತದಲ್ಲಿ ಜನಾಂಗೀಯ ಘರ್ಷಣೆಗಳ ಪರಿಸ್ಥಿತಿಯನ್ನು ಆಯೋಗವು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಬಳಸಿಕೊಂಡಿದೆ. ದೇಶದ ಆಂತರಿಕ ಭದ್ರತೆಗೆ ಬೆದರಿಕೆಗಳಿವೆ ಎಂದಿದೆ.
‘ದೇಶಹಿತಕ್ಕೆ ಬಾಧೆ ಒಡ್ಡುವಂತೆ ನಾಗರಿಕ ಸಮಾಜವನ್ನು (ಸಿವಿಲ್ ಸೊಸೈಟಿ) ಎತ್ತಿಕಟ್ಟುವ, ಬುಡಮೇಲು ಮಾಡುವಂತಹ ಶಕ್ತಿಗಳುೞ ಮತ್ತು ‘ಅದೃಶ್ಯ ಸೇನೆಗಳ ಸಮರ’ ಕುರಿತು ರಾಷ್ಟ್ರೀಯ ಸುರಕ್ಷತಾ ಸಲಹೆಗಾರ ಅಜಿತ್ ದೋವಲ್ ಈ ಹಿಂದೆ ನೀಡಿದ್ದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಮತ್ತು ಟೀಕೆಗೆ ಗುರಿಯಾಗಿತ್ತು. ಜನತಂತ್ರ ವಿರೋಧಿ, ನಾಗರಿಕ ಹಕ್ಕುಗಳ
ದಮನಕಾರಿ ಎಂಬ ಖಂಡನೆಗೆ ಒಳಗಾಗಿದ್ದ ಡೋವಲ್ ಮಾತುಗಳನ್ನು ಆಯೋಗವು ಎತ್ತಿ ಹಿಡಿದು ತನ್ನ ಶಿಫಾರಸಿಗೆ ಸಮರ್ಥನೆಯಾಗಿ ಒದಗಿಸಿರುವುದು ಆಘಾತಕಾರಿ.
ಪಾಕಿಸ್ತಾನ ಸಾಕಿದ್ದ ತಾಲಿಬಾನಿ ಶಕ್ತಿಗಳು ಇದೀಗ ತನ್ನ ಸೃಷ್ಟಿಕರ್ತನನ್ನೇ ನುಂಗಲು ಬಾಯಿ ತೆಗೆದಿವೆ. ಪಾಕಿಸ್ತಾನ ಎದುರಿಸಿರುವ ಆಂತರಿಕ ಭದ್ರತೆಯ ಅಪಾಯಗಳಿಗೆ ಹೋಲಿಸಿದಲ್ಲಿ ಭಾರತದ್ದು ಸಮಸ್ಯೆಯೇ ಅಲ್ಲ. ಹೀಗಿದ್ದಾಗಲೂ ರಾಜದ್ರೋಹದ ಕಾನೂನನ್ನು ಅಲ್ಲಿನ ಲಾಹೋರ್ ಹೈಕೋರ್ಟು ಮೊನ್ನೆ ಸಂವಿಧಾನಬಾಹಿರ ಎಂದು ಸಾರಿತು. ಪಾಕಿಸ್ತಾನದ ಸುಪ್ರೀಂ ಕೋರ್ಟು ಲಾಹೋರ್ ಹೈಕೋರ್ಟಿನ ಈ ತೀರ್ಪನ್ನು ಎತ್ತಿ ಹಿಡಿಯುತ್ತದೆಯೇ ಎಂದು ಕಾದು ನೋಡಬೇಕಿದೆ. ಭಾರತ ಮತ್ತು ಪಾಕಿಸ್ತಾನಕ್ಕೆ ಈ ಕಾನೂನನ್ನು ಕೊಟ್ಟವರು ಬ್ರಿಟಿಷರು. ಅವರು ಈ ಕಾನೂನನ್ನು ರದ್ದು ಮಾಡಿ ಹದಿನಾಲ್ಕು ವರ್ಷಗಳಾದವು.
‘ಸಾರ್ವಜನಿಕ ಅವ್ಯವಸ್ಥೆ ಉಂಟು ಮಾಡುವಂತಹ ಹಿಂಸೆಯನ್ನು ಪ್ರಚೋದಿಸುವ ಪ್ರವೃತ್ತಿ ಎಂಬ ಪದಗಳನ್ನು ರಾಜದ್ರೋಹದ ವ್ಯಾಖ್ಯೆಗೆ ಸೇರಿಸಬೇಕು. ವಾಸ್ತವವಾಗಿ ಹಿಂಸೆಯನ್ನು ಉಂಟು ಮಾಡುವುದಿರಲಿ, ಹಿಂಸೆ ಉಂಟು ಮಾಡುವ ಒಲವನ್ನು ಹೊಂದಿರುವುದೂ ರಾಜದ್ರೋಹವೇ’ ಎಂಬ ಆಯೋಗದ ವಾದ ಅನಾಹುತಕಾರಿ. ಜನತಾಂತ್ರಿಕ ವ್ಯವಸ್ಥೆಗೆ ಮಾರಕ. ಸರ್ವಾಧಿಕಾರೀ ಆಡಳಿತ ವ್ಯವಸ್ಥೆಗಳು ಮಾತ್ರವೇ ಹೊಂದಿರಬಹುದಾದ ಜನ ದಮನ ಉದ್ದೇಶದ ದುಷ್ಟತನ.
ಕಳೆದ ವರ್ಷ ಸುಪ್ರೀಂ ಕೋರ್ಟಿನ ಮುಂದೆ ಈ ಕಾನೂನನ್ನು ಮೋದಿ ಸರ್ಕಾರ ತೀವ್ರವಾಗಿ ಸಮರ್ಥಿಸಿಕೊಂಡಿತ್ತು. ಆದರೆ ಕೋರ್ಟು ಚಾಟಿ ಬೀಸಿದ ನಂತರ ದಾರಿಗೆ ಬಂದಿತ್ತು. ಮರುವಿಮರ್ಶೆ ಮಾಡುವುದಾಗಿ ನಿವೇದಿಸಿ ಕೊಂಡಿತ್ತು. ಸೂಕ್ತ ವೇದಿಕೆಯಿಂದ ಮರುವಿಮರ್ಶೆಗೆ ಒಳಪಡಿಸುವ ತನಕ ಈ ಕಾನೂನಿನ ಕುರಿತ ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲ ಯವನ್ನು ಕೋರಿತ್ತು.
ಮರುವಿಮರ್ಶೆ ಮಾಡುತ್ತೇನೆಂದು ಸುಪ್ರೀಂ ಕೋರ್ಟಿಗೆ ನಿವೇದಿಸಿಕೊಂಡ ಮೋದಿ ಸರ್ಕಾರ ಕಾಲಾವಕಾಶ ಖರೀದಿ ತಂತ್ರವನ್ನು ಅನುಸರಿಸಿತೇ ಎಂಬ ಸಂಶಯ ಈಗ ಮೂಡುವುದೇ ಆದರೆ ಅದು ಸ್ವಾಭಾವಿಕ. ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತದ ಆವರಣ ಗಳು ಕುಗ್ಗತೊಡಗಿವೆ. ಹಿಂದುತ್ವವಾದಿ ಶಕ್ತಿಗಳಿಂದ ತೀವ್ರ ಆಕ್ರಮಣಕ್ಕೆ ಒಳಗಾಗುತ್ತಿವೆ.
ಇಂತಹ ಕಳವಳದ ಕಾಲಘಟ್ಟದಲ್ಲಿ ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಕಾನೂನು ಆಯೋಗದ ಶಿಫಾರಸು ಅತ್ಯಂತ ಆತಂಕಕಾರಿ. ಸಂಸತ್ತಿನ ಕಡೆಗೂ ಆಶೆಗಣ್ಣಿನಿಂದ ನೋಡುವಂತಿಲ್ಲ. ನಾಗರಿಕ ಸ್ವಾತಂತ್ರ್ಯವನ್ನು ಅದು ಎತ್ತಿ ಹಿಡಿದೀತು ಎಂದು ನೆಚ್ಚುವಂತಿಲ್ಲ.
ಉಳಿದಿರುವ ಏಕಮಾತ್ರ ಆಶಾಕಿರಣ ಸುಪ್ರೀಂ ಕೋರ್ಟು. ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರದ ಆಶ್ವಾಸನೆಯ ಮೇರೆಗೆ ತಡೆ ಹಿಡಿದಿದ್ದ ವಿಚಾರಣೆಯನ್ನು ತಾನು ಮುಂದುವರಿಸಬೇಕು. ಜನವಿರೋಧಿ ಕಾನೂನನ್ನು ಅಂತ್ಯಗೊಳಿಸಬೇಕು ಇಲ್ಲವೇ ಈ ಉಗ್ರ ಉರಗದ ಹಲ್ಲಿನ ತಳದ ವಿಷದ ಸಂಚಿಯನ್ನು ಕಿತ್ತೆಸೆಯಬೇಕು.