Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಟಿಪ್ಪು ಕುರಿತ ಅಡ್ಡಂಡ ನಾಟಕ ವಿರುದ್ಧ ದೂರು: ಇಬ್ರಾಹಿಂ

ಮೈಸೂರು: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದು ನಿರ್ದೇಶಿಸಿರುವ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ವಿರುದ್ಧ ಮೈಸೂರಿನಲ್ಲಿ ದೂರು ದಾಖಲಾದ ಬೆನ್ನಲ್ಲೇ ಬೆಂಗಳೂರಿನಲ್ಲೂ ಶುಕ್ರವಾರ ದೂರು ದಾಖಲು ಮಾಡಲು ಸಿದ್ಧತೆ ನಡೆದಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾ.ದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮೈಸೂರು ಸಾಂಸ್ಕ ತಿಕ ನಗರಿ, ವಿದ್ಯಾನಗರಿಯಾಗಿದೆ. ಆದರೆ, ಇಲ್ಲಿನ ಸಂಸದ ಪ್ರತಾಪ್ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ಟಿಪ್ಪು ಕುರಿತ ಪುಸ್ತಕ, ನಾಟಕ ಆಕ್ರೋಶಕ್ಕೆ ಕಾರಣವಾಗಿದೆ. ಗಲಾಟೆ ನಡೆಯಬಾರದು ಎಂದು ಸಭೆ ನಡೆಸಿದ್ದೇನೆ. ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ಕೆಟ್ಟದ್ದಾಗಿ ಚಿತ್ರಿಸಲಾಗಿದೆ. ನಮ್ಮ ಧರ್ಮ ಗುರುಗಳ ಜತೆಗೆ ಚರ್ಚಿಸಿ ಒಂದು ದೂರು ದಾಖಲಿಸಿದ್ದು, ಬೆಂಗಳೂರಿನಲ್ಲಿ ಶೀಘ್ರದಲ್ಲೇ ದೂರು ದಾಖಲಿಸಲಾಗುವುದು ಎಂದು ಹೇಳಿದರು.
ಪ್ರತಾಪ್ಸಿಂಹ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ನಂಜುಂಡೇಶ್ವರನಿಗೆ ಪಂಚ ವಜ್ರವನ್ನು ಕೊಟ್ಟಿದ್ದು ಟಿಪ್ಪು ಸುಲ್ತಾನ್. ಇದನ್ನು ಪ್ರತಾಪ್ ಸಿಂಹ ವಾಪಸ್ ಇಸ್ಕೋತಾರಾ?, ಮೋದಿ ನಿಂತು ಭಾಷಣ ಮಾಡುವ ಕೆಂಪು ಕೋಟೆಯನ್ನು ಷಹಜಹಾನ್ ಕಟ್ಟಿಸಿದ್ದು, ಅಲ್ಲಿ ನಿಂತು ಯಾಕೆ ಭಾಷಣ ಬಿಗಿತೀರಿ. ಅದನ್ನು ಪ್ರತಾಪ್ಸಿಂಹ ಒಡೆಸಿ ಬಿಡುತ್ತಾರಾ?, ಟಿಪ್ಪು ದೇಶದ್ರೋಹಿಗಳನ್ನು ಕೊಂದಿದ್ದಾನೆ. ಅಂದಿನ ದೇಶದ್ರೋಹಿ ಸಂತತಿಗಳು ಇಂದಿಗೂ ಇವೆ. ಆದರೆ, ಇವರ ಪುಸ್ತಕದಲ್ಲಿ ಒಕ್ಕಲಿಗರ ಹೆಸರು ಮುನ್ನೆಲೆಗೆ ತಂದು ನಮ್ಮ ಹಾಗೂ ಗೌಡರ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಶಾಸಕ ತನ್ವೀರ್ಸೇಠ್ಗೆ ಏನೂ ಗೊತ್ತಿಲ್ಲ. ಅವರ ತಂದೆ ಅಜೀಜ್ ಸೇಠ್ ೫೦ ವರ್ಷಗಳವರೆಗೆ ಕೆಲಸ ಮಾಡಿದ್ದಾರೆ. ಅವರ ಪ್ರತಿಮೆ ಎಲ್ಲಾದರೂ ಇದೆಯಾ? ಏಕೆ ಹಾಕಿಲ್ಲ. ಟಿಪ್ಪು ಜಯಂತಿ ಮಾಡಿದ್ದು ತಪ್ಪು, ನಮ್ಮಲ್ಲಿ ಜಯಂತಿ ಸಹ ಇಲ್ಲ. ಅಂದೇ ಶಾರದ ಪೀಠದ ಶ್ರೀ ಹಾಗೂ ಸುತ್ತೂರು ಶ್ರೀಗಳನ್ನು ಕರೆಸಿ ಟಿಪ್ಪು ಜಯಂತಿ ಮಾಡದಂತೆ ಸಿದ್ದರಾಮಯ್ಯಗೆ ಹೇಳಿದ್ದರೂ ಕೇಳಲಿಲ್ಲ. ಬಿಜೆಪಿ-ಕಾಂಗ್ರೆಸ್ ಟಿಪ್ಪು ಹೆಸರಿನಲ್ಲಿ ರಾಜಕೀಯ ಮಾಡುತ್ತಿವೆ. ನಮಗೆ ಅದರ ಅಗತ್ಯವಿಲ್ಲ ಎಂದು ತಿಳಿಸಿದರು.
ಮುಖಂಡರಾದ ಅಬ್ದುಲ್ ಖಾದರ್ ಶಾಹಿದ್, ಮುತಹಿರ್ ಪಾಷ, ಆಫ್ತಾಬ್, ಜಿಷಾನ್, ಹಫಿಝ್ ಹರ್ಷದ್ ಸಾಬ್, ಸಜ್ಜಾದ್ ಸಾಬ್, ಕಲೀಂಬಾಯ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.


ಜೆಡಿಎಸ್ ಅಧಕಾರಕ್ಕೆ ಬಂದರೆ ಟಿಪ್ಪು ವಿವಿ ಸ್ಥಾಪನೆ
ಮೈಸೂರು: ಜಾ.ದಳ ಅಧಿಕಾರಕ್ಕೆ ಬಂದರೆ ಟಿಪ್ಪು ವಿಶ್ವವಿದ್ಯಾನಿಲಯವನ್ನು ಕೋಲಾರ ಮತ್ತು ಶ್ರೀರಂಗಪಟ್ಟಣದಲ್ಲಿ ಮಾಡುತ್ತೇವೆ. ಕೆಂಪೇಗೌಡ ವಿಶ್ವವಿದ್ಯಾನಿಲಯ ಮಾಡುತ್ತೇವೆ ಎಂದು ಜಾ.ದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು.
ಇನ್ನು ಆರು ತಿಂಗಳು ತಡೆದುಕೊಂಡರೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಇಂಥಹ ಅಹಿತಕರ ಘಟನೆ, ಸಮಾಜದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಾರೆ. ಪರಿಸ್ಥಿತಿ ಬದಲಾಗಿದೆ ಅಂತ ಧರ್ಮ ಬದಲಾಯಿಸಲು ಆಗುತ್ತಾ? ರಾಜಕೀಯ ಕಾರಣಗಳಿಂದ ಧರ್ಮ ಬದಲಾಯಿಸಲು ಆಗಲ್ಲ. ರಾಜಕಾರಣ ಇವತ್ತು ಇರುತ್ತದೆ ಅಥವಾ ನಾಳೆ ಸಾಯುತ್ತದೆಯೇ ಹೊರತು ನಮಗೆ ಧರ್ಮನೇ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!