ಚಿರತೆ ದಾಳಿ ಬಗ್ಗೆ ಆತಂಕಗೊಂಡಿದ್ದ ಸ್ಥಳೀಯರು, ಸ್ಥಳಕ್ಕೆ ಜಿಟಿಡಿ, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ
ಮೈಸೂರು: ನಗರದ ರಾಮಕೃಷ್ಣನಗರದಲ್ಲಿ ಅರ್ಧ ತಿಂದ ಕರುವಿನ ಕಳೇಬರ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದು ಅದು ಕರುವಿನ ಸಾವು ಚಿರತೆ ದಾಳಿಯಿಂದ ಆಗಿಲ್ಲ, ಅದು ಸಾವಿಗೀಡಾಗಿರುವುದು ನಾಯಿಗಳ ದಾಳಿಯಿಂದ ಎಂದು ಖಾತ್ರಿ ಪಡಿಸಿದ್ದಾರೆ.
ಭಾನುವಾರ ಬೆಳಿಗ್ಗೆ ರಾಮಕೃಷ್ಣನಗರದ ದಿಗಂತ ಭವನದ ಬಳಿ ಕರುವೊಂದರ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಸ್ಥಳೀಯರು ಭಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೆಳಿಗ್ಗೆ ೬.೩೦ಕ್ಕೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳವನ್ನು ಪರಿಶೀಲನೆ ನಡೆಸಿದಾಗ ಅಲ್ಲಿ ಕೆಲವು ಹೆಜ್ಜೆ ಗುರುತುಗಳು ಇದ್ದವು. ಇದು ಚಿರತೆಯದಲ್ಲ ಎಂದು ಇಲಾಖೆಯ ಸಿಬ್ಬಂದಿ ಹೇಳಿದರೂ ಸ್ಥಳೀಯರು, ಚಿರತೆಯದ್ದೇ ಎಂದು ವಾದ ಮಾಡಲು ಆರಂಭಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಶಾಸಕ ಜಿ.ಟಿ.ದೇವೇಗೌಡ ಸ್ಥಳೀಯರಿಗೆ ಧೈರ್ಯ ಹೇಳಿದರು.
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ದಿಗಂತ ಭವನದಲ್ಲಿ ಅಳವಡಿಸಿರಲಾಗಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಬೆಳಗಿನ ಜಾವ ಸುಮಾರು ೪.೨೦ರ ಸಮಯದಲ್ಲಿ ನಾಲ್ಕು ನಾಯಿಗಳು ಕರುವಿನ ಮೇಲೆ ದಾಳಿ ಮಾಡಿರುವುದು ತಿಳಿದುಬಂದಿದೆ. ಈ ಮೂಲಕ ಜನರಲ್ಲಿದ್ದ ಆತಂಕವನ್ನು ನಿವಾರಿಸಲಾಗಿದೆ.
ಎರಡು ದಿನಗಳ ಹಿಂದೆ ನಗರದ ಕೆ.ಸಿ.ಬಡಾವಣೆಯಲ್ಲಿಯೂ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಅಲ್ಲಿ ಬೋನ್ ಇಡಲಾಗಿದೆ.