ತಮಿಳುನಾಡು ಕನ್ನಡ ಜಾನಪದ ಪರಿಷತ್ ಉದ್ಘಾಟನೆ
ಚಾಮರಾಜನಗರ: ತಾಳವಾಡಿ ತಾಲೂಕಿನ ಹತ್ತಾರು ಗ್ರಾಮಗಳಲ್ಲಿರುವ ಕನ್ನಡಿಗರು ತಮ್ಮ ಮೂಲ ಕನ್ನಡ ಸಂಸ್ಕೃತಿ, ಪರಂಪರೆಯನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಕಡೆ ಕನ್ನಡ ಜಾನಪದ ಪರಿಷತ್ ಘಟಕ ಸ್ಥಾಪಿಸಿರುವುದು ಹೆಮ್ಮೆಯ ವಿಚಾರ ಎಂದು ತಾಳವಾಡಿ ಕನ್ನಡ ಸಂಘದ ಅಧ್ಯಕ್ಷರಾದ ಎಸ್ ಚೆನ್ನಂಜಪ್ಪ ತಿಳಿಸಿದರು.
ತಮಿಳುನಾಡಿಗೆ ಸೇರಿದ ಗಾಜನೂರಿನಲ್ಲಿರುವ ವರನಟ ರಾಜಕುಮಾರ್ ಮನೆಯ ಮುಂಭಾಗ ತಮಿಳುನಾಡು ಕನ್ನಡ ಜಾನಪದ ಪರಿಷತ್ತಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ತಾಳವಾಡಿ ಭಾಗದಲ್ಲಿ ಕನ್ನಡಿಗರಿದ್ದ ಹತ್ತಾರು ಗ್ರಾಮಗಳು ತಮಿಳುನಾಡಿಗೆ ಸೇರ್ಪಡೆಯಾದವು. ಕನ್ನಡಿಗರು ಮಾತ್ರ ತಮ್ಮ ಮೂಲ ಸಂಸ್ಕೃತಿಯನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ ಎಂದರು.
ಮೂಲ ಸಂಸ್ಕೃತಿಯಾದ ಜನಪದವನ್ನು ಬೆಳೆಸಲು ಇದು ಸಹಕಾರಿಯಾಗಲಿದೆ. ಈ ಕಾರ್ಯ ಮಾಡಿರುವ ಜನಪದ ಬಾಲಾಜಿ, ಸುರೇಶ್ ಋಗ್ವೇದಿ, ಸುರೇಶನಾಗ್ ಅಭಿನಂದನೆಗೆ ಅರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಬಾಲಾಜಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ಘಟಕಗಳನ್ನು ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲೂ ಸ್ಥಾಪಿಸಲಾಗಿದೆ. ತಮಿಳುನಾಡಿನ ಡಾ.ರಾಜಕುಮಾರ್ ಮನೆಯ ಮುಂಭಾಗ ಜಾನಪದ ಪರಿಷತ್ ಸ್ಥಾಪನೆಯಾಗಿರುವುದು ಮೆಚ್ಚಿನ ಸಂಗತಿ ಎಂದರು.
ಪ್ರತಿ ವರ್ಷ ಗಡಿ ಕನ್ನಡಿಗರ ಸಮಾವೇಶ ಹಾಗೂ ಗಡಿ ಕನ್ನಡಿಗ ಹೊರ ಕನ್ನಡಿಗರ ಪ್ರಶಸ್ತಿ ವಿತರಣಾ ಸಮಾರಂಭವನ್ನು ಆಚರಿಸಲಾಗುವುದು. ಜಾನಪದ ಶ್ರೇಷ್ಠತೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಮತ, ಧರ್ಮ ರಾಜ್ಯಗಳ ಭೇದವಿಲ್ಲದೆ ಜನಪದ ಜಗತ್ತಿನಲ್ಲಿ ಹರಡಿದೆ ಎಂದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್.ಋಗ್ವೇದಿ ಮಾತನಾಡಿ, ತಾಳವಾಡಿ ತಾಲ್ಲೂಕಿನ ಡಾ.ರಾಜಕುಮಾರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಒಡನಾಡಿ ಐ.ಎನ್.ಎ. ರಾಮರಾವ್ ಅವರು ಕನ್ನಡದ ಎರಡು ಶ್ರೇಷ್ಟ ರತ್ನಗಳು ಎಂದರು.