ಮೈಸೂರು: ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ನಡೆದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಫರ್ಧೆಯಲ್ಲಿ ಪಾಲಹಳ್ಳಿಯ ದೇವಿರಮ್ಮ ಕೃಪೆ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮೈಸೂರು ಜಿಲ್ಲಾ ಘಟಕ ಹಾಗೂ ಯುವಶಕ್ತಿ ಪಡೆಯ ಜಂಟಿ ಆಶ್ರಯದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ ಜೋಡೆತ್ತುಗಳು ಅಂತಿಮ ಹಂತದವರೆಗೂ ಪಟ್ಟುಬಿಡದೇ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ತಮ್ಮ ಮಾಲೀಕರಿಗೆ ಬೆಳ್ಳಿ ಗದೆ ಮತ್ತು ಟ್ರೋಫಿಯನ್ನು ಉಡುಗೊರೆ ನೀಡಿದವು. ಮೈಸೂರು, ಮಂಡ್ಯ, ದಾವಣಗೆರೆ, ಚಿಕ್ಕಮಗಳೂರು, ರಾಮನಗರ, ಚಿತ್ರದುರ್ಗ ಸೇರಿದಂತೆ ರಾಜ್ಯದ ಹಲವೆಡೆಗಳಿಂದ ರೈತರು, ಯುವ ರೈತರು ಎತ್ತಿನಗಾಡಿಯನ್ನು ಗಾಳಿಯ ವೇಗಕ್ಕೆ ತಕ್ಕಂತೆ ಮುನ್ನುಗ್ಗಿಸಿದ ಕೌಶಲ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತು. ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಸ್ಪರ್ಧೆ ವೀಕ್ಷಿಸಿ ಸಂಭ್ರಮಿಸಿದರು.
ಪ್ರಥಮ ಸ್ಥಾನ ಪಡೆದ ಪಾಲಹಳ್ಳಿಯ ದೇವಿರಮ್ಮ ಕೃಪೆ ತಂಡಕ್ಕೆ ಹಳ್ಳಿಕಾರ್ ಹಸು, ೧.೫ ಕೆ.ಜಿ. ತೂಕದ ಬೆಳ್ಳಿ ಗದೆ ಮತ್ತು ಟ್ರೋಫಿ, ಎರಡನೇ ಸ್ಥಾನಗಳಿಸಿದ ಸಿದ್ದಲಿಂಗಪುರದ ಭೈರವೇಶ್ವರ ಕೃಪೆ ತಂಡಕ್ಕೆ ೧ ಕೆ.ಜಿ. ತೂಕದ ಬೆಳ್ಳಿ ಟ್ರೋಫಿ ಮತ್ತು ಟಗರನ್ನು ನೀಡಲಾಯಿತು. ತೃತೀಯ ಸ್ಥಾನಗಳಿಸಿದ ಪಾಲಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ತಂಡಕ್ಕೆ ೫೦೦ ಗ್ರಾಂ ಬೆಳ್ಳಿ ಟ್ರೋಫಿ ಹಾಗೂ ೧ ಕುರಿಯನ್ನು ನೀಡಲಾಯಿತು. ಮಲ್ಲಿಗೆರೆಯ ರೋಲೆಕ್ಸ್ ಸರ್ಜಾ ಕೆ.ಎ.೧೧ ತಂಡಕ್ಕೆ ನಾಲ್ಕನೇ ಬಹುಮಾನವಾಗಿ ೩೦೦ ಗ್ರಾಂ ಬೆಳ್ಳಿ ಹಾಗೂ ೧ ಮೇಕೆ ನೀಡಲಾಯಿತು. ಉತ್ತಮ ರೈಡರ್ಸ್ಗಳಾಗಿ ಚಿಕ್ಕಾಡೆ ಮಾಹಿ, ಸೆವೆನ್ ಗೌತು ಪ್ರಶಸ್ತಿ ಪಡೆದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಎತ್ತಿನಗಾಡಿ ಸ್ಪರ್ಧೆ ಪ್ರತಿವರ್ಷ ನಡೆಯುವಂತಾಗಬೇಕು. ಇಂದು ಗ್ರಾಮೀಣ ಕ್ರೀಡೆಗಳು ನಶಿಸುವ ಹಾದಿಯಲ್ಲಿವೆ, ನಮ್ಮ ನೆಲದ ಕ್ರೀಡೆಯನ್ನು ನಾವು ಬೆಳೆಸಬೇಕು. ಅವುಗಳ ಉಳಿವಿಗಾಗಿ ಇಂತಹ ಆಯೋಜನೆಗಳು ನಡೆಯುತ್ತಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್, ಯುವಶಕ್ತಿ ಪಡೆ ಅಧ್ಯಕ್ಷ ಕಾರ್ತಿಕ್, ಮಾಜಿ ಗ್ರಾಂಪಂ ಅಧ್ಯಕ್ಷ ಎಸ್.ವಿಜಯಕುಮಾರ್, ಗ್ರಾಪಂ ಸದಸ್ಯ ಶಿವು, ಯುವ ರೈತ ದಿವಾಕರ್, ಮೋಹನ್ ಕುಮಾರ್(ಬಾಬು) ಭಾಗವಹಿಸಿದ್ದರು.
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮೈಸೂರು ಜಿಲ್ಲಾ ಘಟಕ ಹಾಗೂ ಯುವಶಕ್ತಿ ಪಡೆಯ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯ ರೋಚಕ ದೃಶ್ಯ ನೋಡುಗರ ಮೈನವಿರೇಳಿಸಿತು.





