ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿಯಲ್ಲಿ ಕಾಡಾನೆಗಳು ಹಿಂಡಾಗಿ ಬಂದು ಎಲೆಕೋಸು, ಕಬ್ಬು ಹಾಗೂ ತೆಂಗು ಬೆಳೆಯನ್ನು ಗುರುವಾರ ರಾತ್ರಿ ತಿಂದು, ತುಳಿದು ಹಾಳುಗೆಡಗಿವೆ.
ಗ್ರಾಮದ ಪುಟ್ಟಸ್ವಾಮಿ ಅವರ ಎಲೆಕೋಸು, ನಂಜುಂಡಬಾಯಿ ಅವರ ಕಬ್ಬು, ನಾಗೇಂದ್ರ ಅವರ ತೆಂಗಿನ ಸಸಿಗಳು ಮತ್ತು ಈ ರೈತರ ಸೋಲಾರ್ ತಂತಿಬೇಲಿ-ಕಲ್ಲುಗಳನ್ನು ಮುರಿದುಹಾಕಿವೆ. ಪರಶಿವಪ್ಪ ಅವರ ಜಮೀನಿನಲ್ಲೂ ತಂತಿಬೇಲಿ ಹಾಳು ಮಾಡಿವೆ.
ಆನೆಗಳ ದಾಂಧಲೆಯಿಂದ ಭಯಬೀತರಾದ ರೈತರು ಟ್ರಾಕ್ಟರ್ಗಳನ್ನು ರನ್ ಮಾಡಿ ಜೋರಾಗಿ ಶಬ್ದ ಮಾಡಲಾಗಿ ಅಲ್ಲಿಂದ ಕಾಲುಕಿತ್ತಿವೆ. 10ಆನೆಗಳು ಇನ್ನೂ ಊರ ಹೊರವಲಯದಲ್ಲೇ ಬೀಡುಬಿಟ್ಟಿವೆ. ರಾತ್ರಿ ಆಯಿತೆಂದರೆ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಹಾಳುಮಾಡುತ್ತಿದೆ. ಸುಮಾರು ಒಂದೂವರೆ ತಿಂಗಳಿಂದ ನಿರಂತರವಾಗಿ ದಾಳಿ ಮಾಡುತ್ತಲೇ ಇದ್ದರೂ ಆನೆಗಳ ಉಪಟಳ ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಶಾಂತಮಲ್ಲಪ್ಪ ಆರೋಪಿಸಿದ್ದಾರೆ.
ತಮಿಳುನಾಡಿ ಕಾಡಿಗೆ ವಾಪಸ್ ಕಾಡಾನೆಗಳನ್ನು ಅಟ್ಟುವ ಬದಲು ಒಂದು ಊರಿನಿಂದ ಇನ್ನೊಂದು ಊರಿಗೆ ಕಳಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ರೈತರೊಡಗೂಡಿ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.





