ನಿಮ್ಮಲ್ಲಿ ಕೈಮುಗಿಯುವೆ,ನನ್ನನ್ನು ಬಿಟ್ಟು ಬಿಡಿ: ಎಸ್.ಎ.ರಾಮದಾಸ್
ಮೈಸೂರು: ನಿಮ್ಮಲ್ಲಿ ಕೈ ಮುಗಿಯುವೆ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಎನ್ನುತ್ತಲೇ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅರೆಕ್ಷಣ ಗದ್ಗದಿತರಾದರು. ನಗರದ ಎಲೆತೋಟದ ಬಳಿ ನಿರ್ಮಿಸುತ್ತಿರುವ ಬಸ್ ನಿಲ್ದಾಣದ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಮದಾಸ್, ದಯಮಾಡಿ ಈ ವಿಚಾರವನ್ನು ಬಿಟ್ಟು ಬಿಡೋಣ. ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುವೆ ಎಂದರು. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ ಎಂದರು. ನನ್ನನ್ನು ಪಕ್ಷದಿಂದ ಹೊರ ಹಾಕಲು ಕಿರುಕುಳ ನೀಡಲಾಗುತ್ತಿದೆ ಎನ್ನುವುದನ್ನು ಪರೋಕ್ಷವಾಗಿ ಆರೋಪ ಮಾಡಿದರಲ್ಲದೆ, ಕಳೆದ ೩೦ ವರ್ಷಗಳಿಂದ ಬಿಜೆಪಿಯ ೧೧ ಜನ ಶಾಸಕರು ಇದ್ದರು. ಕಿರುಕುಳ ನೀಡಿದ್ದರಿಂದ ಹತ್ತು ಜನರು ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಪ್ರಶ್ನೆ ಮಾಡದೆ ಬಿಟ್ಟುಬಿಡುವಂತೆ ಕೋರಿದರು. ಮತದಾರರ ಆಶೀರ್ವಾದದಿಂದ ಶಾಸಕನಾಗಿದ್ದೇನೆ.ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್,ಸ್ಮಶಾನ,ರಸ್ತೆಗಳ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಏನಾದರೂ ಸಾಧನೆ ಮಾಡಬೇಕು ಎನ್ನುವುದು ಗುರಿಯಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಯಾವುದೇ ವರದಿ ಕೊಟ್ಟರೂ ಅದಕ್ಕೆ ತಲೆಬಾಗುತ್ತೇನೆ ಎಂದು ನುಡಿದರು. ಪಕ್ಷದ ಹಿರಿಯ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಎಲೆತೋಟದ ಬಳಿ ನಿರ್ಮಿಸುತ್ತಿರುವ ಮಾದರಿಯಲ್ಲಿ ಹನ್ನೊಂದು ಕಡೆಗಳಲ್ಲಿ ನಿರ್ಮಾಣ ಮಾಡುತ್ತೇವೆ.ಜನರಿಗೆ ಒಳ್ಳೆಯದಾಗಬೇಕು ಎನ್ನುವುದು ನಮ್ಮ ಉದ್ದೇಶ ಹೊರತು ಬೇರೇನೂ ಇಲ್ಲ ಎಂದು ಮಾರ್ಮಿಕವಾಗಿ ಪ್ರತಾಪ್ ಸಿಂಹ ಅವರಿಗೆ ಕುಟುಕಿದರು.
ಕೆಆರ್ಐಡಿಎಲ್ಗೆ ನಿರ್ದೇಶನ ಕೊಡಲು ಅಧಿಕಾರ ಕೊಟ್ಟವರ್ಯಾರು?: ಪ್ರತಾಪ್ ಸಿಂಹ ಗುಡುಗು
ಅನಧಿಕೃತ ಗುಂಬಜ್ ಮಾದರಿಯ ಗೋಪುರ ತೆರವು ಆಗಲೇಬೇಕಿದೆ
ಮೈಸೂರು: ನಗರದ ಎಲೆತೋಟದಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣದ ವಿಚಾರದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ(ಕೆಆರ್ಐಡಿಎಲ್)ಶಾಸಕ ಎಸ್.ಎ.ರಾಮದಾಸ್ ಅವರ ಆಪ್ತರೊಬ್ಬರು ನಿರ್ದೇಶನ ಕೊಟ್ಟಿದ್ದಾರೆ.ಸಂಸದನಾಗಿರುವ ನನಗೆ ಆ ಅಧಿಕಾರವಿಲ್ಲ. ಆದರೆ, ಈ ವಿಚಾರದಲ್ಲಿ ಶಾಸಕರ ಆಪ್ತರು ಕೆಆರ್ಐಡಿಎಲ್ಗೆ ನಿರ್ದೇಶನ ಕೊಡಲು ಅಧಿಕಾರ ಕೊಟ್ಟವರು ಯಾರು ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು. ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಏನೇ ಆಗಬೇಕಾದರೂ ಜಿಲ್ಲಾಧಿಕಾರಿ ಮುಖಾಂತರ ನಿಯಮಾನುಸಾರ ಆಗಬೇಕು. ಆದರೆ,ಶಾಸಕರ ಆಪ್ತರೊಬ್ಬರು ನಿರ್ದೇಶನ ನೀಡುವ ಮೂಲಕ ಬದಲಿಸುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು. ನಿಲ್ದಾಣದ ವಿವಾದ ಮುಂದಿಟ್ಟುಕೊಂಡು ನನಗೆ ಪಕ್ಷದೊಳಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ಎಸ್.ಎ.ರಾಮದಾಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಅವರು(ರಾಮದಾಸ್)ನಮ್ಮ ಪಕ್ಷದ ಹಿರಿಯ ಶಾಸಕರಾಗಿದ್ದಾರೆ. ಪ್ರಧಾನಿ ಮೋದಿ ಅವರಿಂದ ಆತ್ಮೀಯತೆಯಿಂದ ಮೈಗೆ ಗುದ್ದಿಸಿಕೊಂಡಿರುವಂತಹ ರಾಮದಾಸ್ರಿಗೆ ಕಿರುಕುಳ ನೀಡುವಷ್ಟು ದೊಡ್ಡವನು ನಾನಲ್ಲ.ಯಾರು ಕಿರುಕುಳ ನೀಡಿದ್ದಾರೆ ಅವರನ್ನೇ ಕೇಳಿ ಎಂದು ಪ್ರಶ್ನಿಸಿದರು.
ಮೂಲ ವಿನ್ಯಾಸಕ್ಕೆ ನಿರ್ಮಿಸಲಿ: ಬಸ್ ನಿಲ್ದಾಣಗಳನ್ನು ಮೂಲ ವಿನ್ಯಾಸಕ್ಕೆ ಅನುಗುಣವಾಗಿ ನಿರ್ಮಿಸಬೇಕು ಎಂಬುದು ನನ್ನ ಆಶಯವಾಗಿದೆ. ಈ ವಿಚಾರದಲ್ಲಿ ಯಾವುದೇ ಅನಗತ್ಯ,ಗೊಂದಲವನ್ನು ಉಂಟು ಮಾಡಬಾರದು. ರಾತ್ರಿ ಕೆಲಸ ಮಾಡುವುದು ಕಳ್ಳರು. ರಾತ್ರಿ ಯಾಕೆ ಬಸ್ ನಿಲ್ದಾಣದ ಕೆಲಸ ಮಾಡಬೇಕು.ಬಸ್ ನಿಲ್ದಾಣಕ್ಕೆ ಹೆಸರು ಇಡಲು ಸಹ ಕಾನೂನಿದೆ.ರಾತ್ರೋರಾತ್ರಿ ಹೇಗೆ ಹೆಸರಿಟ್ಟರು. ಈ ವಿಚಾರದಲ್ಲಿ ಎಲ್ಲ ಕಾನೂನು ಉಲ್ಲಂಘನೆಯಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶ ಮಾಡಿ ನೋಟಿಸ್ ಜಾರಿಗೊಳಿಸಿದೆ. ಅವರೇಅನಧಿಕೃತ ಕಟ್ಟಡವೆಂದು ಹೇಳಿದ್ದಾರೆ. ಅವರು ತೆರವು ಮಾಡಬಹುದು. ಮೂಲ ವಿನ್ಯಾಸದಲ್ಲಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟ ಗಡುವು ಮುಗಿದ ಮೇಲೆ ಏನಾಗುತ್ತದೆಯೋ ನೋಡೋಣ ಎಂದು ಹೇಳಿದರು. ಗುಂಬಜ್ ಬಗ್ಗೆ ಪರಿಶೀಲನೆ ನಡೆಸಲು ಹೊಸ ತಜ್ಞರ ಸಮಿತಿಯ ಅವಶ್ಯಕತೆ ಇಲ್ಲ. ಕೆಆರ್ಐಡಿಲ್ನ ತಜ್ಞರೇ ಮೂಲ ನಕ್ಷೆ ಅನುಮತಿ ಕೊಟ್ಟಿದ್ದಾರೆ.ಹೀಗಾಗಿ,ಗುಂಬಜ್ನ ಮಾದರಿಯ ಗೋಪುರವನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ರಾಜಕಾರಣಕ್ಕೆ ಬಂದಿಲ್ಲ: ಮೈಸೂರಿಗೆ ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜತೆ ಸೇರಿಕೊಂಡುವ್ಯವಹಾರ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಖಾರವಾಗಿ ಟಾಂಗ್ ಕೊಟ್ಟರು. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ.ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್ಪ್ರೆಸ್ ಹೆಸರು ಬದಲಾಯಿಸುತ್ತೇನೆಂದು ಹೇಳಿದ್ದಂತೆ ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ನನ್ನ ಮಾತಿಗೆ ಬದ್ಧ. ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ತೆರವು ಮಾಡಲೇಬೇಕು ಎಂದರು. ನಗರದ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೆ ಹೊರತು ಅವರ ಶತ್ರುಗಳ ಹೆಸರು ಹೇಳಬಾರದು. ಮಹಾರಾಜರ ಆಡಳಿತದ ಅಭಿವೃದ್ಧಿಗಳನ್ನು ಹೇಳುವುದು ನ್ಯಾಯ ಸಮ್ಮತ ಎಂದರು.