ಮೈಸೂರು: ಕೊಡಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಮೊಟ್ಟೆ ಹೊಡೆದ ಹಿನ್ನಲೆಯಲ್ಲಿ ಮೈಸೂರು ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರ ಮನೆ ಮುಂದೆ ಜಮಾಯಿಸಿ ಮೊಟ್ಟೆ ನೀಡಲು ಮುಂದಾದರು.
ವಿಜಯನಗರ ೩ನೇ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಮನೆ ಮುಂದೆ ದಾಂಗುಡಿಯಿಟ್ಟ ಕಾಂಗ್ರೆಸ್ ಯುವ ಮುಖಂಡ ಪವನ್, ಚಾಮರಾಜ ಕ್ಷೇತ್ರದ ದೇವರಾಜ ಬ್ಲಾಕ್ ಅಧ್ಯಕ್ಷ ಚಂದ್ರು, ಯುವ ಕಾಂಗ್ರೆಸ್ ಮೈಸೂರು ನಗರ ಉಪಾಧ್ಯಕ್ಷ ಅಬ್ರಹಾರ್, ನಿಶಾಂತ್, ಯಶವಂತ, ಸಂಜಯ್, ವಿನೋದ್, ಮದನ್ ಮೊಟ್ಟೆ ಇರಿಸಿದ ಒಂದು ಟ್ರೇ ಅನ್ನು ನೀಡಲು ಮುಂದಾದರು.
‘ನಮ್ಮ ಸಿದ್ದರಾಮಯ್ಯ ಸರ್ಕಾರದಲ್ಲಿ ಮಕ್ಕಳಿಗೆ ಪೌಷ್ಟಿಕಾಹಾರದ ರೂಪವಾಗಿ ಮೊಟ್ಟೆ ಭಾಗ್ಯ ನೀಡಿದರು. ಆದರೆ, ಕೊಡಗಿನ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಹೊಡೆದು ಅದರ ಅರ್ಥ ಕಳೆದಿದ್ದಾರೆ. ಅದನ್ನು ತಿಳಿಯಪಡಿಸಲೆಂದೇ ಸಂಸದರ ಮನೆಗೆ ಬಂದಿದ್ದೇವೆ ಹೊರತು ಪ್ರತಿಭಟನೆಗಲ್ಲ. ನಾವು ತಂದಿರುವ ಮೊಟ್ಟೆ ಸ್ವೀಕರಿಸಬೇಕು’ ಎಂದು ಕೋರಿದರು. ಬಳಿಕ ಪೊಲೀಸರು ಅಡ್ಡಗಟ್ಟಿ ಇಡೀ ತಂಡವನ್ನು ಸ್ಥಳದಿಂದ ಹೊರ ಕಳುಹಿಸಿದರು.