Mysore
18
scattered clouds

Social Media

ಸೋಮವಾರ, 26 ಜನವರಿ 2026
Light
Dark

ವೋಟ್‌ ಚೋರಿ : ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನ 

ಮೈಸೂರು : ಮತಗಳ್ಳತನ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ವತಿಯಿಂದ ನಡೆಸುತ್ತಿರುವ ‘ವೋಟ್ ಚೋರಿ ಸಹಿ ಸಂಗ್ರಹ’ ಅಭಿಯಾನವನ್ನೂ ಅರಮನೆ ನಗರಿ ಮೈಸೂರಿನಲ್ಲೂ ನಡೆಸಲಾಯಿತು.

ನಗರದ ಗಾಂಧಿವೃತ್ತದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಚಾಲನೆ ನೀಡಿದರು. ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಪುಸ್ತಕದಲ್ಲಿ ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಿದರು.

ಈ ವೇಳೆ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸರ್ವಾಽಕಾರಿ ಧೋರಣೆ ಪ್ರವೃತ್ತಿ ಎದ್ದು ಕಾಣುತ್ತಿದೆ. ಐದು ವರ್ಷಗಳ ಬದಲಿಗೆ ನೂರು ದಿನಗಳ ಆಡಳಿತ ದೊರತರೆ ದಿನನಿತ್ಯದ ವಸ್ತುಗಳ ಬೆಲೆ ಇಳಿಸುವೆ ಎಂದಿದ್ದರು. ಆದರೆ, ಈವರೆಗೆ ಬೆಲೆಗಳು ಇಳಿಕೆಯಾಗಿಲ್ಲ. ದಿನದಿಂದ ದಿನಕ್ಕೆ ಜನಸಾಮಾನ್ಯರು ಬಳಸುವ ವಸ್ತುಗಳು ಹೆಚ್ಚಾಗುತ್ತಿವೆ. ಇದೇನಾ ಅಚ್ಚೇ ದಿನ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಹುಟ್ಟಿದ ಕಾಂಗ್ರೆಸ್ ದೇಶದ ಎಲ್ಲ ಧರ್ಮ, ಜಾತಿಯನ್ನು ಸಮಾನತೆಯಿಂದ ಕೊಂಡೊಯ್ಯುವ ಕೆಲಸ ಮಾಡಿಕೊಂಡು ಬಂದಿದೆ. ದೇಶದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ತಿದ್ದುವ ಕೆಲಸ ಮಾಡಲಿದೆ. ಅಧಿಕಾರ ಇಲ್ಲವೆಂದು ಮನೆಯಲ್ಲಿ ಕೂರದೆ ಜನಪರವಾಗಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಬಿಜೆಪಿಯವರು ಒಂದೊಂದು ರೀತಿಯ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಬಿಜೆಪಿ ಮತದಾರರನ್ನು ಸೇರಿಸಿದರೆ, ಕಾಂಗ್ರೆಸ್ ಮತದಾರರು ಇರುವ ಕಡೆಗಳಲ್ಲಿ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಖಾಲಿ ನಿವೇಶನ, ಮನೆಗಳಲ್ಲಿ ಸೇರಿಸಿದ್ದರಿಂದ ೨೩ ಸಾವಿರ ಮತದಾರರನ್ನು ಸೇರಿಸಿ ಮತಗಳ್ಳತನ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್, ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್.ಗೌಡ, ಈಶ್ವರ್ ಡಿ.ಚಕ್ಕಡಿ, ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಲತಾ ಸಿದ್ದಶೆಟ್ಟಿ, ಮಾಜಿ ಮಹಾಪೌರರಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಪುಷ್ಪಲತಾ ಜಗನ್ನಾಥ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುಶೀಲ ಕೇಶವಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಪ್ರದೀಪ್ ಕುಮಾರ್, ಕೆ.ವಿ.ಮಲ್ಲೇಶ್, ಕೆಪಿಸಿಸಿ ಎಚ್.ಎ.ವೆಂಕಟೇಶ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಪಂ ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ಡಾ.ಸುಜಾತ ಶ್ರೀನಿವಾಸ ರಾವ್, ಕೆಪಿಸಿಸಿ ಸಂಯೋಜಕ ಎನ್.ಭಾಸ್ಕರ್, ವಕ್ತಾರ ಕೆ.ಮಹೇಶ್, ಸೋಮಶೇಖರ್, ಗಿರೀಶ್ ನಾಯಕ, ಡೈರಿ ವೆಂಕಟೇಶ್, ಮರಿದೇವಯ್ಯ, ಮಂಚೇಗೌಡನಕೊಪ್ಪಲು ರವಿ, ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಆರ್.ನಾಗೇಶ್, ಜವರಪ್ಪ, ಉತ್ತನಹಳ್ಳಿ ಶಿವಣ್ಣ, ಎಂ.ಕೆ.ಅಶೋಕ್, ರೋಹಿತ್ ನಾಯಕ, ಸಾ.ಮ.ಯೋಗೀಶ್, ವಿಶ್ವ ಮತ್ತಿತರರು ಹಾಜರಿದ್ದರು.

Tags:
error: Content is protected !!