Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಸ್ವಾಮಿ ಪ್ರಾಣ ಉಳಿಸಿದ ದನಗಾಹಿಗಳ ಸಾಹಸ…

ಬಳ್ಳೂರು ಹುಂಡಿಯ ಹುಲ್ಲುಗಾವಲು ಪ್ರದೇಶದಲ್ಲಿ ಹುಲಿ ದಾಳಿ ಪ್ರಕರಣ

ಮೈಸೂರು: ದನ ಮೇಯಿಸುತ್ತಿರುವಾಗ ಹಠಾತ್ ಆಗಿ ಹುಲಿಯ ಆಕ್ರಮಣಕ್ಕೆ ತುತ್ತಾದ ಸ್ವಾಮಿ ದಾಸಯ್ಯ (೫೪) ಪ್ರಾಣಾಪಾಯದಿಂದ ಪಾರಾಗಿದ್ದೇ ರೋಚಕ ಕಥೆ.

ಬಳ್ಳೂರು ಹುಂಡಿಯ ಹುಲ್ಲುಗಾವಲು ಪ್ರದೇಶದಲ್ಲಿ ಸೋಮವಾರ ಸಂಜೆ ತಮ್ಮ ಹಸು ಪೂಜಾಳನ್ನು ಮೇಯಿಸುತ್ತಿದ್ದ ಸಂದರ್ಭ ಧನಗಾಹಿಗಳಾದ ಶ್ರೀಕಂಠಮೂರ್ತಿ ಮತ್ತು ಕೂಸಪ್ಪ ಎಂಬವರು ಸಮೀಪದಲ್ಲಿಯೇ ದನ ಮೇಯಿಸುತ್ತಿದ್ದರು. ಹಸುವಿನ ಮೇಲೆ ಎರಗಲು ಬಂದ ಬಂದ ಹುಲಿ ಸ್ವಾಮಿ ದಾಸಯ್ಯನನ್ನು ಕಂಡು ಆತನ ಮೇಲೆ ಎರಗಿದೆ. ಅವರು ಕಿರುಚಿದ್ದನ್ನು ಕೇಳಿಸಿಕೊಂಡ ಶ್ರೀಕಂಠಮೂರ್ತಿ ಮತ್ತು ಕೂಸಪ್ಪ ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದು ಹುಲಿಯತ್ತ ಎಸೆದು ಓಡಿಸುವ ಪ್ರಯತ್ನ ಮಾಡಿದರು. ಬೆದರಿದ ಹುಲಿ ಸ್ವಾಮಿಯನ್ನು ಬಿಟ್ಟು ಓಡಿ ಹೋದರೂ ತನ್ನ ಪಂಜದಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದೆ. ಸ್ವಾಮಿ ಜರ್ಕಿನ್ ಧರಿಸಿದ್ದರಿಂದ ಎದೆ, ಹೊಟ್ಟೆ ಇತ್ಯಾದಿ ಭಾಗಕ್ಕೆ ಮಾರಣಾಂತಿಕ ಗಾಯವಾಗುವುದು ತಪ್ಪಿದೆ ಎನ್ನಲಾಗಿದೆ.

ಸ್ವಾಮಿಯನ್ನು ಆಸ್ಪತ್ರೆಗೆ ಸಾಗಿಸಲು ಹೊಲದ ಏರಿ ಮೇಲೆ ಕರೆದೊಯ್ಯುತ್ತಿರುವಾಗಲೇ ಹುಲಿ ಮತ್ತೆ ‘ಪೂಜಾ’ ಹಸುವಿನ ಮೇಲೆರಗಿ ಕೊಂದು ಹಾಕಿದೆ. ಬೆಳಿಗ್ಗೆ ಗ್ರಾಮಸ್ಥರು ನೋಡಿದಾಗ ಹುಲಿ ಶೇ.೯೦ರಷ್ಟು ಮಾಂಸ ಕಬಳಿಸಿದ್ದು ಕಂಡುಬಂತು.

‘ನಮ್ಮ ನೋವನ್ನು ಇಲಾಖಾಧಿಕಾರಿಗಳಿಗೆ ಹೇಳಿದರೆ ‘ಪಟಾಕಿ ಹೊಡೆಯಿರಿ ಓಡಿಹೋಗುತ್ತದೆ’ ಎಂದು ಹೇಳಿ ಪಟಾಕಿ ನೀಡುತ್ತಿದ್ದಾರೆ. ರಾತ್ರಿ ಎಂಟು ಗಂಟೆಗೆ ಮರದ ಮೇಲಿನ ಅಟ್ಟಣಿಗೆ ಏರಿದರೆ ಬೆಳಿಗ್ಗೆನೇ ಇಳಿಯುತ್ತೇವೆ. ಹೀಗಿದ್ದೂ ಪ್ರಾಣಿಗಳಿಂದ ಫಸಲು ಹಾನಿಯನ್ನು ತಪ್ಪಿಸಲಾಗಿಲ್ಲ’ ಎಂದು ಗ್ರಾಮಸ್ಥರಾದ ಮಲ್ಲಿಗಮ್ಮ, ಕಾಡಯ್ಯ,ರಾಜಶೇಖರ್, ಕಿರಣ್, ರಾಜಮ್ಮ, ಜ್ಯೋತಿ, ಸುಂದರಮ್ಮ, ಚಂದ್ರಿಕ, ಕುಮಾರ್, ಕೆಂಪರಾಜು, ದೇವರಾಜು ಮತ್ತಿತರರು ಪತ್ರಿಕೆ ಜತೆ ತಮ್ಮ ನೋವು ತೋಡಿಕೊಂಡರು.

ಬಳ್ಳೂರು ಹುಂಡಿ ಮಾತ್ರವಲ್ಲದೆ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ ನಾರಾಯಣಪುರ, ಅಂಜನಾಪುರ, ಈರೇ ಗೌಡನ ಕೊಪ್ಪಲು, ಗಣೇಶಪುರ, ಹರಿಯೂರು, ಹೆಡಿಯಾಲ, ಬೇಗೂರು ಮುಂತಾದ ಗ್ರಾಮಗಳಿಗೂ ವನ್ಯಪ್ರಾಣಿಗಳು ಆಹಾರ ಅರಸಿ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!