ಮೈಸೂರು: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಸೌಜನ್ಯಕ್ಕಾದರೂ ಸಂತಾಪ ಸೂಚಿಸಿಲ್ಲ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಂತ್ಯ ಸಂಸ್ಕಾರವು ಗೌರವಯುತವಾಗಿ ನಡೆದಿದೆ. ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಹೀಗಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದರು.
ಇದೇ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಶ್ವಾನಾಥ್, ರಾಷ್ಟ್ರಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಆದರೆ ಸೋನಿಯಾ ಗಾಂಧಿ ಸೌಜನ್ಯಕ್ಕೂ ಸಂತಾಪ ಸೂಚಿಸಿಲ್ಲ. ಎಸ್.ಎಂ ಕೃಷ್ಣ ಅವರ ಬಗ್ಗೆ ತುಟಿ ಬಿಚ್ಚಿಲಿಲ್ಲ. ಒಬ್ಬ ವ್ಯಕ್ತಿ ಕಾಲವಾದಾಗ ಮನುಷ್ಯತ್ವ ಇರಬೇಕು. ದ್ವೇಷ ಇರಬಾರದು. ಸತ್ತಾಗಲು ದ್ವೇಷ ಮಾಡುವುದು ಸರಿಯಲ್ಲ. ದೇವರಾಜ ಅರಸ್ ಸತ್ತಾಗಲು ಸಹ ಸಂತಾಪ ಸೂಚಿಸಲಿಲ್ಲ. ಪಿವಿ ನರಸಿಂಹರಾವ್ ಸಾವನ್ನಪ್ಪಿದಾಗಲು ಸಂತಾಪ ಸೂಚಿಸಲಿಲ್ಲ. ವಿಪಿ ಸಿಂಗ್ ಹಾಗೂ ಚಂದ್ರಶೇಖರ್ ಸತ್ತಾಗಲು ಸಂತಾಪ ಸೂಚಿಸಲಿಲ್ಲ ಎಂದು ಸೋನಿಯಾ ಗಾಂಧಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮನುಷ್ಯತ್ವ ಕಳೆದುಕೊಂಡ ಬ್ಯುಸಿನೆಸ್ ಇಂಡಸ್ಟ್ರಿ
ಹಲವು ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಗೆ ಹೆಸರು ತಂದವರು ಎಸ್ ಎಂ ಕೃಷ್ಣ ಅವರು. ಇದೀಗ ಅವರ ಸಾವಿನಲ್ಲಿ ರಾಜಕಾರಣ, ಪಕ್ಷ ದ್ವೇಷ ಮುಖ್ಯವಾಗಬಾರದು. ಮೈಸೂರಿನಲ್ಲಿ ಇನ್ಫೋಸಿಸ್ ಸಂಸ್ಥೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇದಕ್ಕೆಲ್ಲ ಎಸ್ ಎಂ ಕೃಷ್ಣ ಅವರು ದೂರದೃಷ್ಠಿಯ ಕೈಗಾರಿಕರಣ ಕಾರಣ. ಆದರೆ,ಇನ್ಫೋಸಿಸ್ ಸಂಸ್ಥೆಯಿಂದಲೂ ಒಂದು ಸಂತಾಪ ಸೂಚಿಸಲಿಲ್ಲ. ಬ್ಯುಸಿನೆಸ್ ಇಂಡಸ್ಟ್ರಿ ಮನುಷ್ಯತ್ವ ಕಳೆದುಕೊಂಡಿದೆ ಎಂದು ಬೇಸರಿಸಿದರು.
ರಿಂಗ್ ರೋಡ್ಗೆ ಎಸ್.ಎಂ ಕೃಷ್ಣ ಹೆಸರಿಡಿ
ಮೈಸೂರಿನ ರಿಂಗ್ ರೋಡ್ ಅನ್ನು ಎಸ್ ಎಂ ಕೃಷ್ಣ ನಿರ್ಮಾಣ ಮಾಡಿದ್ದು. ರಿಂಗ್ ರೋಡ್ ಗೆ ಅವರ ಹೆಸರಿಡಬೇಕು. ಮೈಸೂರನ್ನು ಹೆರಿಟೇಜ್ ಸಿಟಿ ಮಾಡಿದ್ದು ಎಸ್ ಎಂ ಕೃಷ್ಣ. ಪಾರಂಪರಿಕ ನಗರವನ್ನು ಈಗಿನ ಸರ್ಕಾರ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು.