ಮೈಸೂರು : ಬಹು ನಿರೀಕ್ಷಿತ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಮೈಸೂರು ರಂಗಾಯಣ ಸಜ್ಜಾಗುತ್ತಿದ್ದು, ಬಹುರೂಪಿಗೆ ಮುನ್ನುಡಿಯಾಗಿ ರಂಗಾಯಣಗಳ ನಾಟಕೋತ್ಸವವನ್ನು ಆಯೋಜಿಸಿದೆ.
ರಂಗಾಯಣ ಆವರಣದಲ್ಲಿನ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ನಾಟಕೋತ್ಸವದ ಪೋಸ್ಟರ್ ಬಿಡುಗಡೆ ಮಾಡಿ, ರಂಗಾಯಣದ ಪ್ರಮುಖ ನಾಟಕೋತ್ಸವವಾದ ಬಹುರೂಪಿಗೆ ೨೫ ವರ್ಷ ತುಂಬುತ್ತಿರುವ ಹಿನ್ನೆಲೆ ಈ ಬಾರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಹುರೂಪಿಗೆ ಮುನ್ನುಡಿಯಾಗಿ ನ.೩೦ರಿಂದ ಜ.೪ರವರೆಗೆ ಪ್ರತಿ ಭಾನುವಾರ ನಾಡಿನ ವಿವಿಧ ರಾಂಗಾಯಣಗಳ ತಂಡದಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ನಾಟಕ ಉತ್ಸವದಲ್ಲಿ ಯಕ್ಷ ರಂಗಾಯಣ ಕಾರ್ಕಳ, ಶಿವಮೊಗ್ಗ ರಂಗಾಯಣ, ಧಾರವಾಡ ರಂಗಾಯಣ, ವೃತ್ತಿ ರಂಗಾಯಣ ದಾವಣಗೆರೆ, ಕಲಬುರಗಿ ರಂಗಾಯಣ ಹಾಗೂ ಮೈಸೂರು ರಂಗಾಯಣಗಳಿಂದ ವಾರಾಂತ್ಯದಲ್ಲಿನಾಟಕಗಳು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶನ ಕಾಣಲಿವೆ ಎಂದು ತಿಳಿಸಿದರು.
ಇದನ್ನು ಓದಿ: ನವೆಂಬರ್.20ರಂದು ಮೈಸೂರಿನಲ್ಲಿ ಕೌದಿ ನಾಟಕ ಪ್ರದರ್ಶನ
ನಾಟಕಗಳ ವಿವರ :
ನ.೩೦ರಂದು ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಬಿ.ಆರ್.ವೆಂಕಟರಮಣ ಐತಾಳ್ ನಿರ್ದೇಶನದ ಗುಲಾಮನ ಸ್ವಾತಂತ್ರ್ಯ ಯಾತ್ರೆ ನಾಟಕ ಪ್ರದರ್ಶನ, ಡಿ.೧ರಂದು ಕಾರ್ಕಳದ ಯಕ್ಷ ರಂಗಾಯಣ ತಂಡದಿಂದ ಶ್ರೀಕಾಂತ್ ಎನ್.ವಿ. ನಿರ್ದೇಶನದ ‘ಮಹಾತ್ಮರ ಬರವಿಗಾಗಿ’ ನಾಟಕ ಪ್ರದರ್ಶನ ಇರಲಿದೆ.
ಡಿ.೭ರಂದು ಮೈಸೂರು ರಂಗಾಯಣ ತಂಡದಿಂದ ಗಣೇಶ್ ಮಂದಾರ್ತಿ ನಿರ್ದೇಶನದ ‘ಮೈ ಫ್ಯಾಮಿಲಿ’ ನಾಟಕ, ಡಿ.೧೪ರಂದು ಶಿವಮೊಗ್ಗ ರಂಗಾಯಣದ ತಂಡದಿಂದ ಚಿದಂಬರರಾವ್ ಜಂಬೆ ನಿರ್ದೇಶನದ ನಮ್ಮೊಳಗೊಬ್ಬ ಗಾಂಽ ನಾಟಕ ಪ್ರದರ್ಶನಗೊಳ್ಳಲಿದೆ. ಹಾಗೆಯೇ, ಡಿ.೨೧ರಂದು ದಾವಣಗೆರೆ ರಂಗಾಯಣ ತಂಡದಿಂದ ಮಾಲತೇಶ್ ಬಡಿಗೇರ್ ನಿರ್ದೇಶನದ ‘ಪ್ರತಿ ಗಂಧರ್ವ’ ನಾಟಕ, ಡಿ.೨೮ರಂದು ಧಾರವಾಡ ರಂಗಾಯಣ ತಂಡದಿಂದ ಡಾ. ಪ್ರಕಾಶ್ ಗರುಡ ನಿರ್ದೇಶನದ ‘ಕಂದಗಲ್ಲ ಭಾರತ’ ನಾಟಕ ಹಾಗೂ ೨೦೨೬ರ ಜ.೪ರಂದು ಕಲಬುರ್ಗಿ ರಂಗಾಯಣ ತಂಡದಿಂದ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಕಾಲಚಕ್ರ’ ನಾಟಕ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಉಪನಿರ್ದೇಶಕ ಎಂ.ಡಿ. ಸುದರ್ಶನ್, ಹಿರಿಯ ರಂಗ ಕಲಾವಿದೆ ಕೆ.ಆರ್. ನಂದಿನಿ, ಬಿ.ಆರ್. ಶಶಿಕಲಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





