ಮೈಸೂರು: ಶ್ರೀ ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ನಡೆದಿದ್ದು, 156 ನೂತನ ಜೋಡಿಗಳಿಗೆ ಪ್ರತಿಜ್ಞಾವಿಧಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೋದಿಸಿದ್ದಾರೆ.
ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇಂದು(ಜನವರಿ.27) ನಡೆದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ 156 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ ಶ್ರೀ ಕಲ್ಲಯ್ಯಜ್ಜನವರು, ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀರವಿಶಂಕರ್ ಗುರೂಜಿ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ನೆರವೇರಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಸಮೂಹ, ಸುತ್ತೂರು ಶ್ರೀ ಕ್ಷೇತ್ರದ ಭಕ್ತ ಸಮೂಹ, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣ ಹೆಚ್ಚಿಸಿದ್ದು ನಮ್ಮ ಸನಾತನ ಸಂಸ್ಕೃತಿಯ ದರ್ಶನವಾಯಿತು ಎಂದರು.
156 ಜೋಡಿಗಳು ಒಂದೇ ಸಮಯಕ್ಕೆ ಒಂದೇ ಮುಹೂರ್ತದಲ್ಲಿ ಒಟ್ಟಿಗೆ ಮದುವೆ, ಬೇರೆ ಬೇರೆ ಸಮುದಾಯ, ಅನ್ಯಧರ್ಮಿಗಳ ಜೋಡಿಗಳು ಈ ಮದುವೆ ಈ ಮಣ್ಣಿನ ತಪ್ಪಿಸಿಗೆ ಹಾಗೂ ಪರಮಪೂಜ್ಯ ಜಗದ್ಗುರಗಳ ಆಶೀರ್ವಾದವಾಗಿದೆ. ಅಲ್ಲದೇ ಸುತ್ತೂರು ಶ್ರೀ ಕ್ಷೇತ್ರದ ಮಠ ಚರಿತ್ರೆ ಹಾಗೂ ಚಾರಿತ್ರ್ಯೆಯನ್ನು ಪಾಲಿಸುತ್ತ ಬಂದಿದೆ. ಅಕ್ಷರ, ಜ್ಞಾನ, ದಾಸೋಹದ ಜೊತೆ ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡುವ ತಪಸ್ಸು ಈ ಕ್ಷೇತ್ರದ, ಪುಣ್ಯ ಭೂಮಿಯ ಕೊಡುಗೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಳನಿಯ ಶ್ರೀ ಪುಲಿಪ್ಪನಿ ಸಿದ್ಧರ್ ಆಶ್ರಮದ ಶ್ರೀ ವಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್, ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಅವರು ಉಪಸ್ಥಿತರಿದ್ದರು.