Mysore
32
scattered clouds

Social Media

ಭಾನುವಾರ, 24 ಮೇ 2026
Light
Dark

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ

ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ ಅಧಿವೇಶನವನ್ನು ನಡೆಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿರುವುದು ಉತ್ತರ ಕರ್ನಾಟಕ ಭಾಗದ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರವಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿ
ಸಾಮಾನ್ಯವಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿ ವರ್ಷ ಚಳಿಗಾಲದ ಅಧಿವೇಶನವನ್ನು (ನವೆಂಬರ್/ಡಿಸೆಂಬರ್) ಮಾತ್ರ ನಡೆಸಲಾಗುತ್ತಿತ್ತು. ಆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಇಲ್ಲಿ ‘ಮಳೆಗಾಲದ ಅಧಿವೇಶನ‘ ನಡೆಸಲು ಸರ್ಕಾರ ಸಜ್ಜಾಗುತ್ತಿದೆ.

ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಈ ಕುರಿತು ವಿಸ್ಕೃತ ಸಮಾಲೋಚನೆ ನಡೆಸಿದ್ದಾರೆ. ಅಧಿವೇಶನವನ್ನು ಬೆಂಗಳೂರಿನ ಬದಲು ಬೆಳಗಾವಿಗೆ ಸ್ಥಳಾಂತರಿಸುವುದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗಿದೆ.

ಮಳೆಗಾಲದ ಸದನವನ್ನು ಯಾವಾಗ ಆರಂಭಿಸಬೇಕು ಮತ್ತು ಎಷ್ಟು ದಿನಗಳ ಕಾಲ ನಡೆಸಬೇಕು ಎಂಬ ನಿಖರವಾದ ದಿನಾಂಕಗಳನ್ನು ಮುಂಬರುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮಗೊಳಿಸುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಕರ್ನಾಟಕದ ಮಳೆಗಾಲದ ಅಧಿವೇಶನವು ಜುಲೈ ತಿಂಗಳ ಅವಽಯಲ್ಲಿ ನಡೆಯಲಿದ್ದು, ಈ ಬಾರಿಯೂ ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಭವಾಗುವ ನಿರೀಕ್ಷೆಯಿದೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರಿಂದ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳು, ನೀರಾವರಿ ಯೋಜನೆಗಳು ಹಾಗೂ ಪ್ರಾದೇಶಿಕ ಅಸಮತೋಲನ ನಿವಾರಣೆಯ ಕುರಿತು ಹೆಚ್ಚು ಸಮಯ ವಿನಿಯೋಗಿಸಿ ಚರ್ಚಿಸಲು ಅನುಕೂಲವಾಗುತ್ತದೆ ಎಂಬುದು ಸರ್ಕಾರದ ಆಶಯ.

ಮಳೆಯ ಸವಾಲು ಹಾಗೂ ಸಿದ್ಧತೆ:
ಬೆಳಗಾವಿ ಭಾಗದಲ್ಲಿ ಜುಲೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಅಧಿವೇಶನಕ್ಕೆ ಬರುವ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ಯಾವುದೇ ತೊಂದರೆಯಾಗದಂತೆ ಸುವರ್ಣಸೌಧದ ಆವರಣ ಹಾಗೂ ನಗರದಲ್ಲಿ ವಿಶೇಷ ಮೂಲಸೌಕರ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಹಾರಾಷ್ಟ್ರದ ಜೊತೆಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತುಪಡಿಸಲು ಮತ್ತು ಗಡಿನಾಡ ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಲು ಈ ನಿರ್ಧಾರ ರಾಜಕೀಯವಾಗಿಯೂ ತಂತ್ರಗಾರಿಕೆಯಾಗಿದೆ.

 

Tags:
error: Content is protected !!