ನಂಜನಗೂಡು: ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಸುತ್ತ ಮುತ್ತ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಂಡಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.
ಹುಲಿ ಓಡಾಡುವ ದೃಶ್ಯ ರೈತ ಮಲ್ಲಿಕ್ ಎಂಬುವವರ ಜಮೀನಿನಲ್ಲಿ ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಡುವಿನಹಳ್ಳಿ, ಹೊಸವೀಡು, ಈರೇಗೌಡನಹುಂಡಿ, ಚಿಲಕಳ್ಳಿ, ಯಡಿಯಾಲ ಸುತ್ತ ಮುತ್ತ ಅಳವಡಿಸಿರುವ ಕ್ಯಾಮರಾಗಳಲ್ಲಿ ಸುಮಾರು ಐದಾರು ಹುಲಿಗಳ ಸಂಚಾರ ಕಂಡುಬರುತ್ತಿದ್ದು, ಆ ಭಾಗದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಯಡಿಯಾಲದಲ್ಲಿರುವ ವಲಯ ಅರಣ್ಯ ಅಧಿಕಾರಿಗಳು ತಮ್ಮ ಕುರ್ಚಿ ಕಾದಾಟವನ್ನು ಬದಿಗಿರಿಸಿ ಈ ಹುಲಿಗಳನ್ನು ಸೆರೆ ಹಿಡಿದು ಜನ ಜಾನುವಾರಗಳ ರಕ್ಷಣೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನು ಹೆಡಿಯಾಲದಲ್ಲಿರುವ 2 ರಿಂದ 3 ಅರಣ್ಯ ಇಲಾಖೆಯ ವಾಹನಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅವಶ್ಯಕವಾಗಿರುವ ಯಾವುದೇ ರೀತಿಯ ರಕ್ಷಣಾ ಕವಚ ಇಲ್ಲವಾಗಿದೆ. ಹಾಗಾಗಿ ಅವರಿಗೂ ಜೀವ ಭಯ ಕಾಡುತ್ತಿದ್ದು, ರಾತ್ರಿಯ ವೇಳೆಗೆ ಗಸ್ತಿಗೆ ಹೋದರೆ ಓಬಿರಾಯನ ಕಾಲದ ಈ ವಾಹನ ಸುರಕ್ಷಿತವಾಗಿ ವಾಪಸ್ ಬರುವ ನಂಬಿಕೆಯೂ ಅಧಿಕಾರಿಗಳಿಗೆ ಇಲ್ಲವಾಗಿದೆ. ಇಂತಹ ವಾಹನಗಳಲ್ಲಿ ನಾವು ಗಸ್ತು ಮಾಡುವುದು ಹೇಗೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಮಧ್ಯೆ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಕುರ್ಚಿ ಉಳಿಸಿಕೊಳ್ಳುವ, ಕಿತ್ತುಕೊಳ್ಳುವ ಹೋರಾಟ ಆರಂಭವಾಗಿದ್ದು, ಜನರ ರಕ್ಷಣೆ ಹೇಗೆ ಎಂಬುದು ರೈತರ ಪ್ರಶ್ನೆಯಾಗಿದೆ.





