Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಮೈಸೂರು: ‘ಬಿಜೆಪಿಯು ಮೀಸಲಾತಿಯನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನ ಬಚಾವೋ–ದೇಶ ಬಚಾವೋ’ ಎಂಬ ಘೋಷಣೆಯಡಿ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದಿಂದ ಇಲ್ಲಿನ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್‌ ಪ್ರತಿಮೆ ಬಳಿ ನಡೆದ ಧರಣಿಯಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರು. ಎಲ್ಲರೂ ತೋಳಿಗೆ ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡಿದ್ದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಈ ಸರ್ಕಾರವು ಮೀಸಲಾತಿಗೆ ಅಪಾಯ ತಂದಿದೆ. ಗೊಂದಲವನ್ನು ಉಂಟು ಮಾಡುತ್ತಿದೆ. ಚುನಾವಣೆಯಲ್ಲಿ ಗೆಲ್ಲಬೇಕೆಂಬ ದುರುದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಿ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎನ್ನುವುದು ‌ಗೊತ್ತಿದ್ದರೂ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಮೀಸಲಾತಿಯನ್ನೇ ತೆಗೆಯುವ ‌ಒಳ ಸಂಚನ್ನು ಬಿಜೆಪಿಯವರು ನಡೆಸುತ್ತಿದ್ದಾರೆ. ರಾಜಕೀಯ ‌ಲಾಭಕ್ಕೋಸ್ಕರ ಸಮುದಾಯಗಳಿಗೆ ಅಪಾಯ ಆಗುವಂತೆ ಮಾಡಿದರೆ ನಾವು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ಶಾಸಕ ತನ್ವೀರ್ ಸೇಠ್‌ ಮಾತನಾಡಿ, ‘ಒಂದು ಜಾತಿಯ ಮೇಲೆ ಮತ್ತೊಂದು ಜಾತಿ ಎತ್ತಿ ಕಟ್ಟಲು ಮೀಸಲಾತಿ ‌ವಿಷಯದಲ್ಲಿ ಗೊಂದಲ ಸೃಷ್ಟಿಸಲಾಗಿದೆ. ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ತೆಗೆದಿದ್ದಾರೆ. ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿಯವರು ಹಿಂದೆಯೇ ಹೇಳಿದ್ದಾರೆ. ಜಾತ್ಯತೀತ ತತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ. ಯುವಕರಿಗೆ ಕೆಲಸ ಕೊಡುವುದು ಬಿಟ್ಟು ಅಹಿಂಸೆಯ ದಾರಿ ತೋರುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಮಾತನಾಡಿ, ‘ಅವೈಜ್ಞಾನಿಕ, ಅಸಂವಿಧಾನಿಕವಾಗಿ ಮೀಸಲಾತಿ ಹೆಚ್ಚಿಸುವ ನಿರ್ಧಾರ ಮಾಡುವ ಮೂಲಕ ಬಿಜೆಪಿಯು ಸಂವಿಧಾನಕ್ಕೆ ಅಪಪ್ರಚಾರ ಮಾಡಿದೆ. ಜನರ ದಾರಿ ತಪ್ಪಿಸಲಾಗುತ್ತಿದೆ’ ಎಂದು ಗುಡುಗಿದರು.

‘ನಮ್ಮ ಸಂವಿಧಾನವು ಎಲ್ಲರಿಗೂ ಸಮಾನತೆ ಹಾಗೂ ಅವಕಾಶ ನೀಡುವ ಪ್ರಮುಖ ಆಶಯವನ್ನು ಹೊಂದಿದೆ. ಆದರೆ, ಸಂವಿಧಾನದ ಆಶಯ ಬುಡಮೇಲು ಮಾಡಲು ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯು ಕೆಲಸ ಮಾಡುತ್ತಿವೆ. ಭಾವನಾತ್ಮಕ ವಿಷಯಗಳ ಮೂಲಕ ಜನರಲ್ಲಿ ‌ಗೊಂದಲ ಸೃಷ್ಟಿಸಿ ಸಂವಿಧಾನಕ್ಕೆ ಮಸಿ ಬಳಿಯುವ ಕೆಲಸದಲ್ಲಿ ತೊಡಗಿದೆ. ಸಂವಿಧಾನ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ದೂರಿದರು.

ಶಾಸಕ ಜಮೀರ್ ಅಹಮದ್ ಖಾನ್ ಮಾತನಾಡಿ, ‘ನಮಗೆ 28 ವರ್ಷಗಳಿಂದ ಇದ್ದ ಮೀಸಲಾತಿಯನ್ನು ತೆಗೆದಿದ್ದಾರೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ‌ಮೊರೆ ಹೋಗಿದ್ದೇವೆ. ನ್ಯಾಯಾಂಗದಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಮಾತನಾಡಿದರು.

ಮುಖಂಡರಾದ ಚಂದ್ರಮೌಳಿ, ವಾಸು, ಎಂ.ಕೆ.ಸೋಮೇಖರ್, ಕೆ.ಮರೀಗೌಡ, ಹರೀಶ್ ಗೌಡ, ರೋಜಿ ಜಾನ್‌, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಶಿವಣ್ಣ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಕಾಗಲವಾಡಿ ಎಂ.ಶಿವಣ್ಣ, ಡಿ.ರವಿಶಂಕರ್, ದರ್ಶನ್‌ ಧ್ರುವನಾರಾಯಣ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!