ಮೈಸೂರು: ಮೈಸೂರು-ಕೊಡಗು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರು ವಿಮಾನ ನಿಲ್ದಾಣ ವಿಸ್ತರಣಾ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಕುರಿತು ನಾಗರೀಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗುರುವಾರ ದೆಹಲಿ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ಸಂಸದರು, ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಮತ್ತು ಭೂ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರವಾಗಿ ಪ್ರಾರಂಭಿಸುವ ಕುರಿತು ಸಚಿವರಲ್ಲಿ ಮನವರಿಕೆ ಮಾಡಿದರು. ಜತೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿರುವ ವಿವಿಧ ಸಮಸ್ಯೆಗಳನ್ನು ಮತ್ತು ಅದನ್ನು ಪರಿಹರಿಸಲು ಅವರ ಸೂಕ್ತ ನಿರ್ದೇಶನವನ್ನು ಕೇಳಿದರು.
ಇದೆ ವೇಳೆ ಮೈಸೂರಿಗೆ ಹೆಚ್ಚಿನ ವಿಮಾನಗಳ ಸಂಪರ್ಕ ಕಲ್ಪಿಸಲು ಸಹಕರಿಸಬೇಕೆಂಬ ವಿನಂತಿಯನ್ನು ಅವರ ಮುಂದಿಟ್ಟರು. ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಅವರು ಆದಷ್ಟು ಬೇಗ ಮೈಸೂರಿನಿಂದ ಹೊಸ ವಿಮಾನ ಸೇವೆಗಳನ್ನು ಪ್ರಾರಂಭಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ನಮಗೆ ಭರವಸೆ ನೀಡಿದ್ದಾರೆ ಎಂದು ಸಂಸದ ಯದುವೇರ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ.