Mysore
28
few clouds

Social Media

ಮಂಗಳವಾರ, 10 ಮಾರ್ಚ್ 2026
Light
Dark

ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ: ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ಮೈಸೂರು: ಡೀಸೆಲ್ ಬೆಲೆ ಏರಿಕೆ ಹಾಗೂ ಟೋಲ್ ದರ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ನಡೆಯುತ್ತಿದ್ದು, ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೈಸೂರಿನಲ್ಲಿರುವ ಸುಮಾರು 9 ಸಾವಿರ ಗೂಡ್ಸ್ ಲಾರಿಗಳು ಸಂಪೂರ್ಣ ಬಂದ್ ಆಗಿದ್ದು, ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಡೀಸೆಲ್ ದರ ಕಡಿಮೆ ಮಾಡಿ, ಟೋಲ್ ದರ ರದ್ದುಗೊಳಿಸಬೇಕು. ಆರ್‌ಟಿಓ ಗಡಿ ಚೆಕ್‌ಪೋಸ್ಟ್ ರದ್ದುಗೊಳಿಸಿ, ಎಫ್‌ಸಿ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಮುಷ್ಕರ ನಡೆಯುತ್ತಿದ್ದು, ಬನ್ನಿಮಂಟಪದ ಗೂಡ್ಸ್ ಶೆಡ್ ಬಳಿ ಸಾವಿರಾರು ಲಾರಿಗಳು ರಸ್ತೆಗಿಳಿಯದೇ ನಿಂತಲ್ಲೇ ನಿಂತಿವೆ. ಗೂಡ್ಸ್ ರೈಲಿನಲ್ಲಿ ಬಂದಿರುವ ರೈತರ ರಸಗೊಬ್ಬರವನ್ನ ಅನ್ ಲೋಡ್ ಮಾಡದೇ ಮುಷ್ಕರದಲ್ಲಿ ಭಾಗಿಯಾಗಿರುವ ಚಾಲಕರು, ಬೇಡಿಕೆ ಈಡೇರುವವರೆಗೂ ಸೇವೆ ಆರಂಭಿಸಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಆಂದೋಲನ ಜೊತೆ ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮ ಅವರು, ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮುಂದೆ ಉಗ್ರ ಹೋರಾಟ ಮುಂದುವರಿಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Tags:
error: Content is protected !!