Mysore
20
broken clouds

Social Media

ಗುರುವಾರ, 13 ನವೆಂಬರ್ 2025
Light
Dark

ನಿಗದಿಗಿಂತ ಅಧಿಕ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದರೆ ಲೈಸನ್ಸ್‌ ರದ್ದು : ಕೃಷಿ ಇಲಾಖೆಯಿಂದ ಎಚ್ಚರಿಕೆ

ಮೈಸೂರು : ಕೃಷಿ ಪರಿಕರಗಳ ಮಾರಾಟಗಾರರು ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಮಾರಾಟಗಾರರು ನಿಗದಿಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹವರ ಲೈಸನ್ಸ್‌ ರದ್ದು ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಡಾ.ಎಚ್‌.ಬಿ.ಮಧುಲತಾ ಎಚ್ಚರಿಕೆ ನೀಡಿದರು.

ಕರ್ಜನ್‌ ಪಾರ್ಕ್‌ನಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ತಾಲೂಕಿನ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘‘ಇತ್ತೀಚಿನ ದಿನಗಳಲ್ಲಿ ನಕಲಿ ರಸಗೊಬ್ಬರಗಳ ಹಾವಳಿ ವರದಿಯಾಗುತ್ತಿರುವುದರಿಂದ ಎಲ್ಲ ರೈತರು ಎಚ್ಚರ ವಹಿಸಿ, ತಾವು ಪಾವತಿಸುವ ಹಣಕ್ಕೆ ಬಿಲ್‌ ಕೇಳಿ ಪಡೆಯಬೇಕು. ರಸಗೊಬ್ಬದ ಚೀಲವನ್ನು ನೋಡಿ ಖರೀದಿ ಮಾಡಬೇಕು,’’ ಎಂದು ಸಲಹೆ ನೀಡಿದರು.

ವಿವರ ಕಡ್ಡಾಯ : ರಸಗೊಬ್ಬರ ತಯಾರಕರ ಹೆಸರು ಮತ್ತು ವಿಳಾಸ ಚೀಲದ ಮೇಲೆ ಮುದ್ರಿತವಾಗಿರಬೇಕು. ರಸಗೊಬ್ಬರದ ಹೆಸರು ಮತ್ತು ಬ್ರ್ಯಾಂಡ್‌ ನಮೂದಿಸಿರಬೇಕು. ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡವಾರು ಪೋಷಕಾಂಶಗಳ ವಿವರ ಇರಬೇಕು. ಗರಿಷ್ಠ ಮಾರಾಟ ಬೆಲೆ ಇರಬೇಕು. ಗರಿಷ್ಠ ಮತ್ತು ನಿವ್ವಳ ತೂಕವಿರಬೇಕು. ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್‌ ಸೂಪರ್‌ ಪಾಸ್ಪೇಟ್‌, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣಗಳ ಚೀಲ ಅಥವಾ ಡಬ್ಬಗಳ ಮೇಲೆ ಬ್ಯಾಚ್‌ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ನಮೂದಿಸಿರಬೇಕು, ಎಂದು ಹೇಳಿದರು.

ಮಾರಾಟಗಾರರಿಂದ ಸಹಿ : ರಸಗೊಬ್ಬರವನ್ನು ಖರೀದಿಸಿದ್ದಕ್ಕೆ ನಮೂನೆ ಎಂ ನಲ್ಲಿ ರಶೀದಿ ಪಡೆಯಬೇಕು. ಖರೀದಿಸಿದ ರಶೀದಿಯಲ್ಲಿ ರಸಗೊಬ್ಬರಗಳ ವಿವರಗಳನ್ನು ತುಂಬಿ, ರೈತ ಸಹಿ, ಮಾರಾಟಗಾರರ ಸಹಿ ಕಡ್ಡಾಯವಾಗಿರಬೇಕು. ಆಧಾರ್‌ ಆಧಾರಿತ ಪಿಒಎಸ್‌ ಯಂತ್ರಗಳ ಮೂಲಕ ಕಡ್ಡಾಯವಾಗಿ ಹೆಬ್ಬೆಟ್ಟು ಪಡೆದು, ಬಿಲ್‌ ನೀಡಬೇಕು. ಈ ಎಲ್ಲಾ ಅಂಶಗಳನ್ನು ರೈತರು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರೊಂದಿಗೆ ವ್ಯವಹರಿಸಬೇಕು,’’ ಎಂದು ತಿಳಿಸಿದರು.

ಕಡ್ಡಾಯವಾಗಿ ರೈತರಿಗೆ ಬಿಲ್‌ ನೀಡಬೇಕು : ಯಾವ ಡೀಲರ್‌ಗಳು ರೈತರೊಂದಿಗೆ ಅನುಚಿತವಾಗಿ ವರ್ತಿಸುವುದು ಅಥವಾ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಮೇಲ್ಕಂಡ ನಿಯಮಗಳನ್ನು ಮೀರಿ ನಡೆದುಕೊಳ್ಳುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ, ಎಂದು ಸೂಚನೆ ನೀಡಿದರು. ತಮ್ಮಲ್ಲಿ ದಾಸ್ತಾನಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ, ಕೀಟನಾಶಕಗಳ ಪ್ರಮಾಣ ಮಾರಾಟ ದರ ಮತ್ತು ಮಾರಾಟಗಾರರ ಲೈಸನ್‌ಗಳನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಕಡ್ಡಾಯವಾಗಿ ರೈತರಿಗೆ ಬಿಲ್‌ ನೀಡಬೇಕು.

ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹಾಯ ಧನದಲ್ಲಿ ಬಿತ್ತನೆ ಬೀಜಗಳಾದ ಮುಸುಕಿನ ಜೋಳ, ಹೆಸರು, ಉದ್ದು, ಅಲಸಂದೆ ಲಭ್ಯವಿದ್ದು, ರೈತರು ಈ ಸೌಲಭ್ಯಗಳನ್ನು ಪಡೆಯಲು ತಮ್ಮ ಆಧಾರ್‌ ಸಂಖ್ಯೆ ಅಥವಾ ಎಫ್‌ಐಡಿ ಸಂಖ್ಯೆಯನ್ನು ಮತ್ತು ಪರಿಶಿಷ್ಟ ಜಾತಿ, ಪಂಗಡ ವರ್ಗದ ರೈತರು ಜಾತಿ ಪ್ರಮಾಣ ಪತ್ರ ಪ್ರತಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್‌, ಕೃಷಿ ಅಧಿಕಾರಿಗಳಾದ ಪಿ.ಎನ್‌.ವೆಂಕಟೇಶ, ಆನಂದ ಕುರ್ಮಾ, ಪಿ.ಎನ್‌.ಜೀವನ್‌, ಸಿ.ಎಂ.ಕಾರ್ತಿಕ್‌, ತೊರವಳ್ಳಿ ಚಿಕ್ಕಣ್ಣ, ನಾಗೇಂದ್ರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರೈತ ಮುಖಂಡರಾದ ವರಕೂಡು ಕೃಷ್ಣೇಗೌಡ, ವೆಂಕಟೇಶ್‌, ವಿಜಯೇಂದ್ರ, ಕಂದಾಯ ಇಲಾಖೆಯ ಶಿರಸ್ತೇದಾರ್‌ ಲೋಕೇಶ್‌ ಮತ್ತಿತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!