ಹುಣಸೂರು : ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ನಿರಂತರ ಹುಲಿ ದಾಳಿಗಳ ಹಿನ್ನೆಲೆಯಲ್ಲಿ ರೈತರು ಅಂತರರಾಜ್ಯ ಕೇರಳ ಹೆದ್ದಾರಿಯನ್ನು ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಮುತ್ತುರಾಯನಹೊಸಹಳ್ಳಿ, ಕಲ್ಲಹಳ್ಳಿ, ಹೈರಿಗೆ, ತಟ್ಟೆಕೆರೆ, ಹೆಮ್ಮಿಗೆ ಹಾಗೂ ಬೀರನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ರೈತರು ದೊಡ್ಡ ಸಂಖ್ಯೆಯಲ್ಲಿ ಹೆದ್ದಾರಿಗಳಲ್ಲಿ ಇಂದು ಟೈರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೇರಳ ಹೆದ್ದಾರಿ ಹಲವು ಗಂಟೆಗಳ ಕಾಲ ಬಂದ್ ಆಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಇದನ್ನು ಓದಿ: ಭಾಷೆ ಬೇರೆಯಾದರೂ, ದೇಶವೊಂದೇ ಭಾರತ
ರೈತರ ಆರೋಪ ಪ್ರಕಾರ, ಕಳೆದ ಒಂದು ವರ್ಷದಿಂದ ಈ ಪ್ರದೇಶದಲ್ಲಿ ಹುಲಿ ದಾಳಿಗಳು ನಿರಂತರವಾಗಿದ್ದು, ಐವತ್ತಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಹಗಲೆಲ್ಲೇ ಹುಲಿಗಳು ಗ್ರಾಮಗಳಲ್ಲಿ ತಿರುಗಾಡುತ್ತಿದ್ದು, ಜಾನುವಾರುಗಳನ್ನು ಮೇಯಿಸಲು ಬಿಡುವುದು ಅಪಾಯವಾಗಿದೆ ಎನ್ನಲಾಗಿದೆ.
ಇದೀಗ ಜೋಳ ಸೇರಿದಂತೆ ಧಾನ್ಯಗಳ ಕಟಾವು ಸಮಯವಾಗಿದ್ದು, ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹೆದರಿರುವುದು, ರೈತರ ಕೆಲಸಕ್ಕೆ ಅಡಚಣೆ ಉಂಟುಮಾಡಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನೂ ಸುರಕ್ಷಿತವಾಗಿ ವಾಪಸ್ಸು ಬರುವವರೆಗೆ ಕಾಯಬೇಕಿರುವ ಪರಿಸ್ಥಿತಿ ಗ್ರಾಮಗಳಲ್ಲಿ ನಿರ್ಮಾಣವಾಗಿದೆ ಎಂದು ರೈತರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದೆ ವೇಳೆ ಮಾನವ–ಜಾನುವಾರುಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದ್ದಾರೆ.





