ಎಚ್.ಡಿ.ಕೋಟೆ : ಕಾಡಾನೆ ದಾಳಿಯಿಂದ ರೈತ ರಾಜು ಎಂಬವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಎನ್.ಬೆಳತೂರು ಗ್ರಾಮದಲ್ಲಿ ನಡೆದಿದೆ.
3-4 ದಿನಗಳ ಹಿಂದೆ ಬಂಡೀಪುರ ಅರಣ್ಯ ವ್ಯಾಪ್ತಿಯಿಂದ ರೈಲ್ವೆ ಬ್ಯಾರಿಕೇಡ್ ದಾಟಿ ಬಂದ ಮೂರು ಕಾಡಾನೆಗಳು ಭಾನುವಾರ ಮಳಲಿ ಗ್ರಾಮದ ರೈತರ ರೈತ ಪ್ರಕಾಶ್ ಎಂಬವರಿಗೆ ಸೇರಿದ ಜಮೀನಿಗೆ ನುಗ್ಗಿ ಬಾಳೆ ಫಸಲು ನಾಶ ಮಾಡಿವೆ. ಅಲ್ಲದೆ ಮತ್ತೋರ್ವ ರೈತ ಜಗಣ್ಣ ಅವರಿಗೆ ಸೇರಿದ 50ಕ್ಕೂ ಹೆಚ್ಚು ಕ್ರೇಟ್ ಟೊಮೊಟೊ ತಿಂದು ನಾಶ ಮಾಡಿವೆ. ಸೋಮವಾರ ಮುಂಜಾನೆ ಎನ್.ಬೆಳತೂರು ಗ್ರಾಮಕ್ಕೆ ಲಗ್ಗೆ ಹಾಕಿದ ಕಾಡಾನೆಗಳು ಹಸುಗಳನ್ನು ಕಟ್ಟಿ ಹಾಕುತ್ತಿದ್ದ ರಾಜು ಅವರ ಮೇಲೆ ದಾಳಿ ನಡೆಸಿವೆ. ಪರಿಣಾಮ ರಾಜು ಅವರ ಕಾಲು ಮುರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್ಎಫ್ಒ ಸಿದ್ದರಾಮು ಅವರು ರೈತ ರಾಜು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗ್ರಾಮದ ರೈತರು ದಮ್ಮನಕಟ್ಟೆ ಸಫಾರಿ ಕೇಂದ್ರಕ್ಕೆ ತೆರಳಿ ಎಸಿಎಫ್ ಮಧು ಹಾಗೂ ಆರ್ಎಫ್ಒ ಸಿದ್ದರಾಜು ಅವರನ್ನು ಭೇಟಿ ಮಾಡಿ ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳು ವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ನಂತರ ಎಸಿಎಫ್ ಮಧು ಮಾತನಾಡಿ, ಆನೆ ದಾಳಿಯಿಂದ ಗಾಯಗೊಂಡಿರುವ ರೈತ ರಾಜು ಅವರಿಗೆ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು. ಅಲ್ಲದೆ ಆನೆ ದಾಳಿಯಿಂದ ನಾಶವಾಗಿರುವ ಫಸಲಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿ, ಆನೆ ಓಡಿಸುವುದಕ್ಕೆ ವಿಶೇಷ ಆನೆ ಕಾವಲು ಕಾರ್ಯಪಡೆ ನೇಮಿಸಲಾಗುವುದು ಎಂದರು.
ಈ ವೇಳೆ ಶುಂಠಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸುಂದರ, ತಿಮ್ಮಯ್ಯ, ಪ್ರವೀಣ, ಎಜೂರ, ಸೋಮೇಶ್, ಶಿವಪ್ಪ, ಲಕ್ಷ್ಮಣ, ಮರಿಲಿಂಗಯ್ಯ, ನಾಗಯ್ಯ, ಪ್ರಕಾಶ್, ಶಿವಕುಮಾರ್, ಲೋಕೇಶ್, ರಾಜು, ಬಾಣಯ್ಯ ಹಾಜರಿದ್ದರು.





