Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು ವಿವಿ ಕೆಟ್ಟು ಹೋಗಿದೆ: ಸಂಸದ ಪ್ರತಾಪ್‌ ಆಕ್ರೋಶ

ಲಂಚದ ಕಾರಣಕ್ಕಾಗಿ ಒಂದೂವರೆ ವರ್ಷದಿಂದ ಕೆ-ಸೆಟ್‌ ಪರೀಕ್ಷೆ ತಡೆದಿದ್ದೇನೆ ಎಂದ ಸಂಸದ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ವಿವಿ ಕೆಟ್ಟು ಹೋಗಿದೆ ಎಂದು ಸಂಸದ ಪ್ರತಾಪಸಿಂಹ ಕಿಡಿ ಕಾರಿದ್ದಾರೆ.

ಮೈಸೂರು ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಎಜುಕೇರ್ ಐಟಿಇಎಸ್, ವುಮೆನ್ ಕ್ಯಾನ್ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ಉದ್ಯೋಗ ಮೇಳ ಮತ್ತು ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿವಿ ಎಷ್ಟು ಕೆಟ್ಟು ಹೋಗಿದೆ ಎಂದರೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಇದೆ. ಇವತ್ತು ಮಾಸ್ಟರ್ ಡಿಗ್ರಿ ಮಾಡಿದ 1,300 ಮಂದಿ ಮೈಸೂರು ವಿವಿಯಲ್ಲಿ ಡಿ ಗ್ರೂಪ್ ನೌಕರರಾಗಿ ಇದ್ದಾರೆ. 12 ಸಾವಿರ ರೂ. ಸಂಬಳಕ್ಕೆ ಲಂಚ ಕೊಟ್ಟು ಒಳಗೆ ಸೇರಿಕೊಳ್ಳುತ್ತಾರೆ ಎಂದು ದೂರಿದರು.

ಕೆ-ಸೆಟ್ ಪರೀಕ್ಷೆ ಆಗದಂತೆ ತಡೆದಿದ್ದೇನೆ

ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್ ಪರೀಕ್ಷೆಯಲ್ಲೂ ಲಂಚಗುಳಿತನ ನುಸುಳಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. 4ರಿಂದ 6 ಲಕ್ಷ ರೂ. ತೆಗೆದುಕೊಂಡು ಕೆಸೆಟ್‌ ಪರೀಕ್ಷೆ ಪಾಸ್ ಮಾಡಿಕೊಡುತ್ತಾರೆ. ಈ ಬಗ್ಗೆ ಯುಜಿಸಿಯ ಜಗದೀಶ್ ಕುಮಾರ್ ಹತ್ತಿರ ಪ್ರಸ್ತಾಪಿಸಿ ಒಂದೂವರೆ ವರ್ಷದಿಂದ ಕೆ-ಸೆಟ್ ಪರೀಕ್ಷೆ ಆಗದಂತೆ ತಡೆದಿದ್ದೇನೆ. ನಿಜವಾದ ಪ್ರತಿಭಾವಂತ ಮಕ್ಕಳಿಗೆ ಮೋಸ ಆಗಬಾರದು, ಆದ್ಯತೆ ಸಿಗಬೇಕು ಎಂಬುದು ನನ್ನ ಉದ್ದೇಶ ಎಂದು ಅವರು ತಿಳಿಸಿದರು.

ರಿಯಲ್‌ ಎಸ್ಟೇಟ್‌ ಮಾಡಲು ಬಂದಿಲ್ಲ

2ನೇ ಕ್ಲಾಸ್, 4ನೇ ಕ್ಲಾಸ್ ಓದಿರುವವರು ರಿಯಲ್ ಎಸ್ಟೇಟ್ ಮಾಡುತ್ತಿದ್ದಾರೆ. ನಾನು ಮಾಸ್ಟರ್ ಡಿಗ್ರಿ ಮಾಡಿ ಬಂದಿದ್ದೇನೆ. ನಾನೂ ಮಾಡಬಹುದಿತ್ತು. ಮೈಸೂರು ಜನ ನಾನು ಇಲ್ಲಿಗೆ ಬಂದಾಗ ಪ್ರೀತಿಯಿಂದ ನನ್ನನ್ನು ಗೆಲ್ಲಿಸಿ ಕಳುಹಿಸಿಕೊಟ್ಟಿದ್ದಾರೆ. ಅವರ ಸೇವೆಯನ್ನು ಮಾಡಬೇಕು ಎಂಬ ಕಾರಣಕ್ಕೆ ನಾನು ಬೆಂಗಳೂರು ಮತ್ತು ಮೈಸೂರು 10 ಪಥಗಳ ರಸ್ತೆ ತಂದಿದ್ದೇನೆ. ಇದರಿಂದ ಕೈಗಾರಿಕೆಗಳು, ಕಂಪೆನಿಗಳು ಬರುತ್ತವೆ. ಯುವ ಸಮುದಾಯಕ್ಕೆ ಕೆಲಸ ಸಿಗಲಿದೆ ಎಂಬುದು ನನ್ನ ಉದ್ದೇಶ. ನನ್ನಿಂದ ರಿಯಲ್ ಎಸ್ಟೇಟ್ ಅವರಿಗೆ ಅನುಕೂಲವಾಗಿದೆ. ಆದರೆ, ನಾನು ರಿಯಲ್ ಎಸ್ಟೇಟ್ ಮಾಡಿಲ್ಲ ಎಂದವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಶನರಿ ಸಿಎಂ ಆಗಿದ್ರು:

ನಾನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಬ್ಬರನ್ನು ಮಾತ್ರ ತುಂಬಾ ಗೌರವಿಸುತ್ತೇನೆ, ಆದರಿಸುತ್ತೇನೆ. ಅವರು ನಾಲ್ಕು ಪಥದ ರಸ್ತೆಯನ್ನು ಮೈಸೂರಿಗೆ ಮಾಡಿದರು. ಇನ್ಫೋಸಿಸ್ ಟ್ರೈನಿಂಗ್ ಸೆಂಟರ್ ಇಲ್ಲಿಗೆ ಬಂದಿದೆ ಎಂದರೆ ಅದು ಎಸ್.ಎಂ.ಕೃಷ್ಣ ಅವರ ಕೊಡುಗೆ. ಮೈಸೂರಿನಲ್ಲಿ ರಿಂಗ್ ರಸ್ತೆ ಯೋಜನೆ ಮಾಡಿದವರೂ ಎಸ್.ಎಂ.ಕೃಷ್ಣ. ಅವರನ್ನು ಬಿಟ್ಟರೆ ದೂರದೃಷ್ಟಿಯುಳ್ಳ ಮುಖ್ಯಮಂತ್ರಿ ಕರ್ನಾಟಕಕ್ಕೆ ಸಿಗಲಿಲ್ಲ. ಎಲ್ಲರೂ ಕೃಷಿ ಆಧಾರಿತ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದರು ಎಂದು ವಿಶ್ಲೇಷಿಸಿದರು.

ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ “ಸ್ವದೇಶ್ ದರ್ಶನ್ʼ ಯೋಜನೆಯಲ್ಲಿ ಹಂಪಿ ಮತ್ತು ಮೈಸೂರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, 200 ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಉಪ ಮಹಾಪೌರರಾದ ಡಾ.ಡಿ.ರೂಪಾ, ವುಮೆನ್ ಕ್ಯಾನ್ ಪ್ರತಿಷ್ಠಾನದ ರಚನಾ ಮಹೇಶ್, ಆರ್-ಪ್ರೊಸೆಸ್ ಔಟ್ ಸೋರ್ಸಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷೆ ಸವಿತಾ ಮಲ್ಲಪ್ಪ, ಕರ್ನಾಟಕ ವಸ್ತುಪ್ರದರ್ಶನ ಪ್ರಾಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ‌ಗೌಡ, ಎಂಸಿಸಿಐ ಅಧ್ಯಕ್ಷ ಕೆ.ಬಿ.ಲಿಂಗರಾಜು, ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ನಾರಾಯಣ ಮೂರ್ತಿ, ಡಿಐಸಿ ಜಂಟಿ ನಿರ್ದೇಶಕ ಟಿ. ದಿನೇಶ್, ರುಡ್‌ಸೆಟ್ ನಿರ್ದೇಶಕ ಆನಂದ್, ಎಚ್.ರಾಮಕೃಷ್ಣೇಗೌಡ, ಪಿ.ದಿನೇಶ್ ಮತ್ತಿತರರು ಹಾಜರಿದ್ದರು.

 

ವಸ್ತುಪ್ರದರ್ಶನ ವಿಶೇಷವೇನು?

* ಬೆಂಗಳೂರು ಮತ್ತು ಮೈಸೂರಿನಿಂದ ಸುಮಾರು 40 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

* 500ಕ್ಕೂ ಹೆಚ್ಚು ಮಹಿಳಾ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡಿದ್ದರು.

* ಮಹಿಳೆಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನದ 40 ಮಳಿಗೆಗಳನ್ನು ಹಾಕಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!