Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು ವಿಮಾನ ನಿಲ್ದಾಣ ಶೀಘ್ರವೇ ಮೇಲ್ದರ್ಜೆಗೆ : ಪ್ರತಾಪ್ ಸಿಂಹ

ಮೈಸೂರು: ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಇಲ್ಲಿನ ಜಲದರ್ಶಿನಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ 150 ಕೋಟಿ ರೂ. ಬಿಡುಗಡೆಯಾಗಿದೆ. ರನ್ ವೇ ವಿಸ್ತರಣೆಗೆ 160 ಎಕರೆ ಜಮೀನು ಬೇಕು. ಈವರೆಗೆ 47 ಎಕರೆಗೆ ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮೈಸೂರು- ನಂಜನಗೂಡು ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು ಎಂದು ಹೇಳಿದರು.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆಯನ್ನು ಮಾರ್ಚ್ 11ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅದೇ ದಿನ ಮೈಸೂರು- ಕುಶಾಲನಗರ ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಲಿದೆ. ಮಂಡ್ಯ ಜಿಲ್ಲೆಯವರು ಬಿಜೆಪಿಯವರನ್ನೇನೂ ಗಲ್ಲಿಸದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ನಾವೇನೂ ತಾರತಮ್ಯ ಮಾಡಿಲ್ಲ. ಮಂಡ್ಯದಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ದಶಪಥಕ್ಕೆ ಕಾವೇರಿ ಹೆಸರಿಡಲು ಎಲ್ಲರ ಸಹಕಾರ ಕೇಳುತ್ತೇನೆ ಎಂದರು.
ರಾಜ್ಯ ರಾಜಕಾರಣಕ್ಕೆ ಬರುತ್ತೀರಾ? ಎಂಬ ಪ್ರಶ್ನೆಗೆ, ನಾನು 2029ರವರೆಗೆ ಮಾತ್ರ ರಾಜಕೀಯದಲ್ಲಿರಲು ಯೋಜಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಕೈ ಕೆಳಗೆ ಕೆಲಸ ಮಾಡಲಷ್ಟೆ ನನಗಿಷ್ಟ. ನಾನು ದೀರ್ಘಾವಧಿಗೆ ರಾಜಕೀಯದಲ್ಲಿರಲು ಯೋಚಿಸಿಲ್ಲ ಎಂದು ಪ್ರತಿಕ್ರಿಯಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!