ಮೈಸೂರು: ಸಿದ್ದರಾಮಯ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಬ್ರಾಹ್ಮಣಿಕೆ ಹಾಗೂ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದ ಹಿರಿಯ ಸಮಾಜವಾದಿ ಪ.ಮಲ್ಲೇಶ್ ವಿರುದ್ಧ ವಿವಿಧ ಬ್ರಾಹ್ಮಣ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಸೋಮವಾರ ನಗರದ ಗನ್ ಹೌಸ್ ಬಳಿಕ ಶಂಕರ ಮಠದ ಆವರಣದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ನೂರಾರು ಬ್ರಾಹ್ಮಣ ಕಾರ್ಯಕರ್ತರು ಹಾಗೂ ಮುಖಂಡರು ಪ.ಮಲ್ಲೇಶ್ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಬ್ರಾಹ್ಮಣ ಸಮುದಾಯ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಇದನ್ನು ಅರಿಯದ ಕೆಲವರು ಸಮುದಾಯವನ್ನು ಟೀಕಿಸುವುದು ಸರಿಯಲ್ಲ ಎಂದರು.
ವೇದ, ಉಪನಿಷತ್ತುಗಳನ್ನು ಸಮಾಜಕ್ಕೆ ಉಡುಗೆಯಾಗಿ ನೀಡಿದ್ದು ನಮ್ಮ ಸಮಾಜ ಎಂಬುದನ್ನು ಯಾರೂ ಮರೆಯಬಾರದು. ದೇಶದ ಬಗ್ಗೆ ಹಾಗೂ ದೇಶವನ್ನು ಪ್ರೀತಿಸುವವರ ಬಗ್ಗೆ ನಮ್ಮ ಸಮುದಾಯ ಯಾವಾಗಲೂ ಗೌರವದಿಂದ ಕಾಣುತ್ತದೆ. ನಾವು ಯಾವಾಗಲು ಮತ್ತೊಂದು ಸಮುದಾಯದ ವಿರುದ್ಧ ಮಾತನಾಡಿದ ಉದಾಹರಣೆ ಇಲ್ಲ. ಇದನ್ನು ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾವು ಸುಮ್ಮನಿದ್ದೇವೆ ಎಂದರೆ ಅದು ನಮ್ಮ ಅಸಮರ್ಥತೆ ಎಂದು ಯಾರೂ ಭಾವಿಸಬಾರದು. ಯಾರೋ ಒಬ್ಬರು ತಲೆಕೆಟ್ಟವರಂತೆ ಮಾತನಾಡಿದರೆ ನಾವು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಸಮಾಜದ ಸ್ವಾಸ್ಥ್ಯ ನಮ್ಮಿಂದ ಹಾಳಾಗಬರದು ಎಂದು ಸುಮ್ಮನಿರುತ್ತೇವೆ. ಅದು ಅತಿಯಾದಾಗ ಹೋರಾಟ ಅನಿವಾರ್ಯ ಎಂದರು.
ಶಂಕರಮಠದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ಪುತ್ಥಳಿ, ಸಂಸ್ಕೃತ ಪಾಠಶಾಲೆ, ರಾಮಸ್ವಾಮಿ ವೃತ್ತ, ಮೂಡಾ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಪ.ಮಲ್ಲೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.
ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಮುಖಂಡರಾದ ರವಿಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಭಾನುಪ್ರಕಾಶ್ ಶರ್ಮ, ವಿಕಾಸ್ ಶಾಸ್ತ್ರಿ, ಚಂದ್ರಶೇಖರ್, ಇಳೈ ಆಳ್ವಾರ್ ಸ್ವಾಮೀಜಿ, ಮಂಗಳಸೂತ್ರ ಶ್ರೀನಿವಾಸ್ ಮುಂತಾದವರು ಹಾಜರಿದ್ದರು.





