ಮಂಡ್ಯ: ಸಾವಿರಾರು ಎಕರೆ ಪ್ರದೇಶಕ್ಕೆ ಕಾವೇರಿ ನೀರು ಉಣಿಸುವ ಮಂಡ್ಯ ಜಿಲ್ಲೆ ವಿಸಿ ನಾಲೆ ಇದೀಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾವಿನ ಕೂಪವಾಗಿ ಬದಲಾಗಿದೆ.
ಕಳೆದ 2018ರಿಂದ ಇಲ್ಲಿಯವರೆಗೆ ನಡೆದಿರುವ ವಿಸಿ ನಾಲೆ ದುರಂತದಲ್ಲಿ 46 ಮಂದಿ ಸಾವನ್ನಪ್ಪಿದ್ದಾರೆ. ಅಂದಿನಿಂದ ಇಂದಿನವರೆಗೂ ನಾಲೆಗೆ ತಡೆಗೋಡೆ ನಿರ್ಮಾಣಕ್ಕೆ ಸ್ಥಳೀಯರು ಪದೇ ಪದೇ ಆಗ್ರಹಿಸುತ್ತಲೇ ಬಂದಿದ್ದು, ಜಿಲ್ಲಾಡಳಿತ ಮಾತ್ರ ಕಂಡು ಕಾಣದಂತೆ ಭಾರೀ ನಿರ್ಲಕ್ಷ್ಯ ತೋರುತ್ತಿದೆ.
ವಿಸಿ ನಾಲೆಯಲ್ಲಿನ ಕಿರಿದಾದ ರಸ್ತೆ, ತಡೆಗೋಡೆ ಇಲ್ಲದ ಕಾರಣ ಈ ದುರಂತ ಸಂಭವಿಸುತ್ತಿದೆ. 560 ಕಿ.ಮೀ ಉದ್ದದ ವಿಸಿ ನಾಲೆ ಇದ್ದು, ನಾಲೆಯ ಯಾವ ಜಾಗ ಅಪಾಯಕಾರಿಯಾಗಿದೆ ಎಂದು ತಿಳಿಯಲು ವಿಶೇಷ ತಂಡವನ್ನು ನಿಯೋಜನೆ ಮಾಡಲಾಗಿತ್ತು. ಆ ತಂಡ ಅಪಘಾತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿಯವರೆಗೆ ನಾಲೆಯ ಪಕ್ಕ ತಡೆಗೋಡೆಗಳನ್ನು ನಿರ್ಮಾಣ ಮಾಡಿಲ್ಲ. ಇದರಿಂದ ದಿನೇ ದಿನೇ ಈ ರೀತಿಯ ಘಟನೆಗಳು ಜರುಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.