Mysore
20
overcast clouds

Social Media

ಸೋಮವಾರ, 22 ಜೂನ್ 2026
Light
Dark

ಕುಮಾರಸ್ವಾಮಿಯವರ ಆರೋಪಗಳಿಗೆ ಹೆದರುತ್ತಾರೆ ಎಂದರೆ ಅದು ಅವರ ಭ್ರಮೆ : ಚಲುವರಾಯಸ್ವಾಮಿ

ಮಂಡ್ಯ : ಪ್ರತಿ ದಿನ ಒಂದಲ್ಲಾ ಒಂದು ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಾತುಗಳಿಗೆ ನಾವು ಹೆದರುತ್ತೇವೆ ಎಂದರೆ ಅದು ಅವರ ಭ್ರಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಛೇಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ಬಂದಾಗ ವರ್ಗಾವಣೆ ನಡೆಯುವುದು ಸರ್ವೇ ಸಾಮಾನ್ಯ. ಇವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮನೆಯವರೆಲ್ಲ ಸೇರಿಕೊಂಡು ರಾಜಕಾರಣ ಮಾಡುತ್ತಿರಲಿಲ್ಲವೇ?. ರಾಜಕಾರಣಕ್ಕೆ ಸಂಬಂಧವೇ ಇಲ್ಲದೇ ಇರುವವವರು ರಾಜಕಾರಣ ಮಾಡಿದ್ದರು. ಆಗ ನಾವೇನಾದ್ರೂ ಕೇಳಿದ್ವಾ ಎಂದು ವ್ಯಂಗ್ಯವಾಡಿದರು.

ಯತೀಂದ್ರ ಸಿದ್ದರಾಮಯ್ಯ ಸಿಎಂ ಜತೆ ವರ್ಗಾವಣೆ ಬಗ್ಗೆ ಮಾತನಾಡಬಾರದು ಎಂದು ಕುಮಾರಸ್ವಾಮಿ ಹೇಳಿದರೆ, ಎಚ್‌ಡಿಕೆ ಕುಟುಂಬದವರೆಲ್ಲ ರಾಜಕಾರಣ ಮಾಡಿರಲ್ಲಿಲ್ವಾ?. ಎಚ್.ಡಿ.ದೇವೇಗೌಡರ ಕುಟುಂಬ ಎಂದರೆ ಒಂದು ಗೌರವ ಇದೆ. ಆದ್ದರಿಂದ ದೊಡ್ಡವರಿಂದ ಮಾರ್ಗದರ್ಶನ ಪಡೆದುಕೊಂಡರೆ ಎಚ್‌ಡಿಕೆಯಿಂದ ಈ ರೀತಿ ತಪ್ಪು ಆಗಲ್ಲ ಎಂದು ಛೇಡಿಸಿದರು.

ಎಚ್‌ಡಿಕೆ ಬಿಜೆಪಿ ವಕ್ತಾರರೇ? : ಬಿಜೆಪಿ ಅವರು ಏನು ಮಾತಾಡುತ್ತಿಲ್ಲ. ಆದರೆ ಎಚ್‌ಡಿಕೆಯಷ್ಟೇ ಮಾತನಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಎಚ್‌ಡಿಕೆ ಅವರನ್ನು ಬಿಜೆಪಿ ವಕ್ತಾರರನ್ನಾಗಿ ನೇಮಕ ಮಾಡಿರಬೇಕು. ಮಾತನಾಡಲು ಬಿಜೆಪಿ ಬಿಟ್ಟುಕೊಟ್ಟಿರಬೇಕು. ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಖುಷಿ ಇದೆ. ಆದ್ದರಿಂದ ಈ ಖುಷಿಯನ್ನು ತಣ್ಣಗೆ ಮಾಡಲು ಎಚ್‌ಡಿಕೆ ಈ ರೀತಿ ಮಾತಾಡುತ್ತಿದ್ದಾರೆ. ಅವರು ಸಿಎಂ ಆದಾಗ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ. ಇದರ ಬಗ್ಗೆ ಏಕೆ ಎಂದು ಕೇಳಿದರೆ ಸಮ್ಮಿಶ್ರ ಸರ್ಕಾರವೆಂದು ಹೇಳುತ್ತಿದ್ದರು. ಆಗ ಸಿಎಂ ಕುರ್ಚಿ ಒಂದೇ ಇದ್ದಿದ್ದು, ಎರಡಲ್ಲ. ಅವರ ಪೆನ್‌ನಲ್ಲಿಯೇ ಸಹಿ ಹಾಕುತ್ತಿದ್ದರು. ಹಣಕಾಸಿನ ಸಚಿವರು ಅವರೇ ಆಗಿದ್ದರು. ಕೊಟ್ಟ ಭರವಸೆಗಳನ್ನು ಈಡೇರಿಸಲು ಯಾವುದೇ ತೊಂದರೆ ಇರಲಿಲ್ಲ ಎಂದು ಟೀಕಿಸಿದರು.

ಈಗ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಇದರಿಂದಾಗಿ ಜಾ.ದಳ ಮತ್ತು ಬಿಜೆಪಿಗೆ ಲೋಕಸಭೆ ಚುನಾವಣೆ ಕಥೆ ಏನು ಎಂಬ ಆತಂಕ ಬಂದಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ದಿಕ್ಕು ತಪ್ಪಿಸಲು ಹೇಳಿಕೆ ಕೊಡುತ್ತಿದ್ದಾರೆ. ಯಾರೋ ಕುಮಾರಸ್ವಾಮಿಗೆ ಹೇಳಿರಬೇಕು, ಅದಕ್ಕೆ ಮಾತನಾಡುತ್ತಿದ್ದಾರೆ. ವರ್ಗಾವಣೆಗಳು ಎಲ್ಲರ ಕಾಲದಲ್ಲೂ ಆಗಿವೆ. ಬಿ.ಎಸ್.ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಎಲ್ಲರ ಕಾಲದಲ್ಲೂ ವರ್ಗಾವಣೆಗಳು ಆಗಿವೆ. ಆದ್ದರಿಂದ ವರ್ಗಾವಣೆ ದಂಧೆ ಎಂದು ಮಾತನಾಡುವುದು ಮಾಜಿ ಸಿಎಂ ಆದವರಿಗೆ ಗೌರವ ತರಲ್ಲ ಎಂದು ತಿರುಗೇಟು ನೀಡಿದರು.

ಎಚ್.ಡಿ.ದೇವೇಗೌಡ ಅವರು ಈ ರಾಜ್ಯದ ಹಿರಿಯ ರಾಜಕಾರಣಿ. ಅವರ ಬಳಿ ಮಾಧ್ಯಮದವರು ಕೇಳಿ ನಿಮ್ಮ ಮಗ ಹೀಗೆ ಹೇಳುತ್ತಾ ಇದ್ದಾರೆ ಎಂದು. ಅವರು ಏನಾದರೂ ಹೇಳಿದರೆ, ನಾವು ಹೇಳುತ್ತೇವೆ. ಈಗಾಗಲೇ ನಾವು ಅನೇಕರಿಗೆ ಉತ್ತರ ಕೊಡದು ಬಿಟ್ಟಿದ್ದೇವೆ. ಮುಂದೆ ಎಚ್‌ಡಿಕೆ ಅವರಿಗೂ ಉತ್ತರ ಕೊಡುವುದನ್ನು ಬಿಟ್ಟು ಬಿಡುತ್ತೇವೆ. ದೇವೇಗೌಡರ ಜತೆ ನಾನು ಇದ್ದಾಗ ಹೇಳುತ್ತಿದ್ದು ಈಗ ಹೇಳುವುದಕ್ಕೆ ಆಗಲ್ಲ. ದೇವೇಗೌಡರು, ಕುಮಾರಸ್ವಾಮಿ ಮತ್ತು ನಾನು ಮೂರು ಜನ ಊಟ ಮಾಡುತ್ತಿದ್ದಾಗ ಹಲವು ವಿಚಾರ ಹೇಳುತ್ತಿದ್ದರು. ಅವುಗಳನ್ನು ಈಗ ಹೇಳುವುದಕ್ಕೆ ಆಗುವುದಿಲ್ಲ. ಖಾಸಗಿ ವಿಚಾರ ಚರ್ಚೆಗಳನ್ನು ಈಗ ಹೇಳುವುದು ಸರಿಯಲ್ಲ. ಒಂದು ವೇಳೆ ದೇವೇಗೌಡರು ವರ್ಗಾವಣೆ ವಿಚಾರ ತಪ್ಪು ಎಂದರೆ ಒಪ್ಪಿಕೊಳ್ಳುತ್ತೇವೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!