ಕೆ.ಆರ್.ಎಸ್. ಅಣೆಕಟ್ಟೆಯಿಂದ ಹರಿಯುವ ವಿಶ್ವೇಶ್ವರಯ್ಯ ನಾಲೆಯ ಆಕರ್ಷಣೆ
ಹೇಮಂತ್ಕುಮಾರ್
ಮಂಡ್ಯ : ಸುಡುವ ಬಿಸಿಲಿನಿಂದ ಕಂಗಾಲಾದ ಜನರು ತಂಪನ್ನೆರೆಯುವ ಜಲಪಾತಗಳತ್ತ ಮುಖ ಮಾಡುತ್ತಾರೆ. ಅಂತೆಯೇ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಬಳಿಯ ಕುರಹಟ್ಟಿ ವಾಟರ್ಫಾಲ್ಸ್ ದೂರದ ಊರುಗಳಿಂದ ಜನರನ್ನು ಕೈಬೀಸಿ ಕರೆಯುತ್ತಿದೆ.
ಇದು ನೈಸರ್ಗಿಕವಾದ ಜಲಪಾತವಲ್ಲ. ಕೆ. ಆರ್. ಎಸ್. ಅಣೆಕಟ್ಟೆಯಿಂದ ಬರುವ ವಿಶ್ವೇಶ್ವರಯ್ಯ ನಾಲೆ. ಈ ನಾಲೆಯ ನೀರು ಈ ಜಾಗದಲ್ಲಿ ಹೆಚ್ಚಾಗಿ ಹರಿಯುವುದರಿಂದ ನಿರ್ಮಾಣವಾಗಿರುವ ಫಾಲ್ಸ್.
ಅಂತರ್ಜಾಲದಲ್ಲಿ ಸರ್ಚ್ ಮಾಡಿ ನೋಡುವ ಬೆಂಗಳೂರು -ಮೈಸೂರು ನಗರದ ಯುವಕ ಮಿತ್ರರು ಹೆಚ್ಚಾಗಿ ಟೆಂಪೂ, ಕಾರುಗಳಲ್ಲಿ ಆಗಮಿಸುತ್ತಾರೆ. ನೈಸರ್ಗಿಕ ಜಲಪಾತಗಳಲ್ಲಿರುವಂತೆ ಯಾವುದೇ ಅಪಾಯಗಳ ಆತಂಕವಿಲ್ಲ. ಕೆಳಗೆ ಲೋಕಪಾವನಿ ನದಿ ಹರಿಯುತ್ತಿದ್ದರೆ, ಮೇಲ್ಗಾಲುವೆ(ಆಕ್ವಾಡಕ್ಟ್) ಮೂಲಕ ಕಾವೇರಿ ಹರಿಯುವ ಆಕರ್ಷಕ ತಾಣವಿದು.
ಈ ಮೇಲ್ಗಾಲುವೆಗೆ 20 ಸಾವಿರ ಕ್ಯೂಸೆಕ್ಸ್ ನೀರು ಹರಿವಿನ ಸಾಮರ್ಥ್ಯವಿದ್ದು, ಹೆಚ್ಚುವರಿ ನೀರು ಮೇಲ್ಗಾಲುವೆಯ ಒಂದು ಬದಿಯಲ್ಲಿ ಮಾತ್ರ ಜಲಪಾತದಂತೆ ಧುಮ್ಮಿಕ್ಕುವುದನ್ನು ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ತಮ್ಮ ವಾಹನಗಳೊಂದಿಗೆ ಫಾಲ್ಸ್ನೊಳಗೆ ಹೋಗಿ ಬಂದು ಖುಷಿ ಪಡುತ್ತಾರೆ. ಆ ಮೂಲಕ ಕಾರನ್ನು ವಾಷ್ ಮಾಡಿಕೊಳ್ಳುವುದನ್ನೂ ಕಾಣಬಹುದು.
ಇನ್ನೂ ಕೆಲ ಸಾಹಸಿಗಳು ಕಾಲುವೆ ಮೇಲಕ್ಕೇ ಹೋಗಿ ಕುಳಿತು ಸಾಹಸ ಮಾಡುವುದೂ ಇಲ್ಲಿ ಸಾಮಾನ್ಯ. ಮೇಲಿನಿಂದ ಧುಮ್ಮಿಕ್ಕುವ ಜಲಪಾತದಲ್ಲಿ ನಿಂತು ರಭಸದಿಂದ ಬೀಳುವ ನೀರಿನಲ್ಲಿ ಖುಷಿ ಪಡುವುದೇ ಇಲ್ಲಿನ ವಿಶೇಷ.
ಈ ಸೊಬಗನ್ನು ಸವಿಯಬೇಕಾದರೆ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯಬಿಟ್ಟಾಗ ಮಾತ್ರ ಇಂತಹ ಫಾಲ್ಸ್ ಕಾಣಸಿಗುತ್ತದೆ. ನೀರಿಲ್ಲದಿದ್ದಾಗ ಕೆಳಗೆ ಹರಿಯುವ ಲೋಕಪಾವನಿಯ ಝುಳು ಝುಳು ನಿನಾದವನ್ನಷ್ಟೇ ಕೇಳಬಹುದು




