Mysore
23
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಮೈಕ್ರೋ ಫೈನಾನ್ಸ್‌ ಕಿರುಕುಳ: ಮಹಿಳೆ ಸಾವು

ಮಂಡ್ಯ: ಮೈಕ್ರೋ ಫೈನಾನ್ಸ್‌ ಸಂಸ್ಥೆಯು ಕಿರುಕುಳ ನೀಡಿದ ಹಿನ್ನಲೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತ ದುರ್ದೈವಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ (59) ಎಂಬ ಮಹಿಳೆ.

ಪ್ರೇಮಾ ಎಂಬುವವರು ಉಜ್ಜೀವನ್‌ ಬ್ಯಾಂಕ್‌ನಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. ಈಗಾಗಲೇ 6 ಲಕ್ಷ ರೂ ಹಣವನ್ನು ಕಟ್ಟಿದ್ದರು. ಇನ್ನು 6 ಲಕ್ಷ ರೂ. ಹಣ ಕಟ್ಡಬೇಕೆಂದು ಬ್ಯಾಂಕ್‌ ಸಿಬ್ಬಂದಿ ಮನೆ ಸೀಜ್‌ ಮಾಡಿದ್ದರು. ಇದರಿಂದ ಮನನೊಂದು ಮಹಿಳೆ ನಿನ್ನೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರೇಮಾರನ್ನು ಮೀಮ್ಸ್‌ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತ ಪ್ರೇಮಾ ಮಗಳು ಮಾಣಿಕ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಯಿ ಸಾವಿಗೆ ಉಜ್ಜೀವನ್‌ ಬ್ಯಾಂಕ್‌ ಸಿಬ್ಬಂದಿಗಳೆ ಕಾರಣ. ನಮ್ಮ ತಾಯಿ 2018ರಲ್ಲಿ ಉಜ್ಜೀವನ್ನ್‌ ಬ್ಯಾಂಕ್‌ನಲ್ಲಿ 6 ಲಕ್ಷ ರೂ. ಸಾಲ ಪಡೆದು ನಂತರ ಆ ಸಾಲವನ್ನು ಇಲ್ಲಿಯವರೆಗೆ ಕಟ್ಟಿ ತೀರಿಸಿದ್ದಾರೆ. ಆದರೂ ಬ್ಯಾಂಕ್‌ ಸಿಬ್ಬಂದಿಗಳು ಇನ್ನು 6 ಲಕ್ಷ ರೂ. ಹಣ ಕಟ್ಟಬೇಕೆಂದು ಹಿಂಸೆ ನೀಡಿ ಮನೆ ಸೀಜ್‌ ಮಾಡಿದ್ದಾರೆ. ಇದರಿಂದ ಮನನೊಂದ ನಮ್ಮ ತಾಯಿ ಕ್ರಿಮಿನಾಶಕ ಮಾತ್ರೆ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ನಮಗೆ ಯಾರು ದಿಕ್ಕು ಎಂದು ಅಳಲು ತೋಡಿಕೊಂಡರು.

ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಮಗಳ ಮದುವೆಗೆ ಮೃತ ಪ್ರೇಮಾ ಉಜ್ಜೀವನ್‌ ಬ್ಯಾಂಕ್‌ನಿಂದ 6ಲಕ್ಷ ರೂ. ಹಣ ಸಾಲ ಪಡೆದು ಇಲ್ಲಿಯವರೆಗೆ ಸಾಲ ಕಟ್ಟಿಕೊಂಡು ಬಂದಿದ್ದರು. ಕಳೆದ ಮೂರು ತಿಂಗಳಿನಿಂದ ಅವರು ಸಾಲ ಕಟ್ಟಿರಲಿಲ್ಲ. ಹೀಗಾಗಿ ಉಜ್ಜೀವನ್‌ ಬ್ಯಾಂಕ್‌ನವರು ಕೋರ್ಟ್‌ನಿಂದ ಸ್ಟೇ ತಂದು ಮನೆ ಜಪ್ತಿ ಮಾಡಿದ್ದಾರೆ. ಇದರಿಂದ ಮನನೊಂದು ಪ್ರೇಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಕೋರ್ಟ್‌ನಿಂದ ಆರ್ಡರ್‌ ಇರೋದರಿಂದ ನಾವು ನಮ್ಮ ಇತಿಮಿತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಜಪ್ತಿ ಮಾಡಿರುವ ಮನೆ ವಾಪಸ್‌ ಮಾಡಲು ಬ್ಯಾಂಕ್‌ಗೆ ತಿಳಿಸಿದ್ದೇವೆ. ಜೊತೆಗೆ ಜಿಲ್ಲಾಡಳಿತದಿಂದ ಪರಿಹಾರದ ಬಗ್ಗೆಯೂ ಚಿಂತಿಸಿದ್ದೇವೆ ಎಂದು ತಿಳಿಸಿದ್ದಾರೆ.

 

 

Tags: