ಮೈಸೂರು: ಮೂವರು ಬೇಟೆಗಾರರ ಎನ್ಕೌಂಟರ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಸುನೀಲ್ ಬೋಸ್ ಅವರು, ನಾನು ಒಂದು ಸೈಡ್ ಸ್ಟೋರಿ ಕೇಳಿದ್ದೇನೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬೇಟೆಯಾಡಿ ಮಾಂಸ ಮಾರಾಟ ಮಾಡ್ತಿದ್ರು. ಈ ನಡುವೆ ಅವರು ನಮ್ಮ ಮೇಲೆ ಫೈರ್ ಮಾಡಿದ್ರು. ಬಳಿಕ ನಾವು ಫೈರ್ ಮಾಡಿದ್ವಿ ಅಂತ ಅರಣ್ಯ ಇಲಾಖೆ ಅವ್ರು ಶೂಟ್ ಮಾಡಿದ್ದಾರೆ. ಶೂಟ್ ಮಾಡುವ ಮುನ್ನ ಗಾಳಿಯಲ್ಲಿ ಗಂಡು ಹಾರಿಸಬಹುದು. ಅರಣ್ಯ ಇಲಾಖೆ ಸಿಬ್ಬಂದಿಗಳು ಇದನ್ನು ಮಾಡಿಲ್ಲ. ಅರಣ್ಯ ಇಲಾಖೆ ಲೋಪ ಇದೆ ಅನ್ನಿಸುತ್ತಿದೆ. ಮೃತದೇಹಗಳನ್ನು ಮೈಸೂರಿಗೆ ತಂದಿದ್ದು ಯಾಕೆ ಅನ್ನೋ ಪ್ರಶ್ನೆ ನಾನು ಕೇಳಿದ್ದೇನೆ. ಈ ಘಟನೆಯಲ್ಲಿ ಓರ್ವ ಬದುಕಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಬಳಿ ಮಾಹಿತಿ ಪಡೆದುಕೊಳ್ಳುತ್ತೇವೆ. ನಾನು ಕೂಡ ಈಗ ಘಟನಾ ಸ್ಥಳಕ್ಕೆ ಹೋಗುತ್ತೇನೆ. ಹೆಚ್ಚಿನ ಮಾಹಿತಿ ಪಡೆದು ಮಾತನಾಡುತ್ತೇವೆ ಎಂದು ಹೇಳಿದರು.




