ಮಂಡ್ಯ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ನಾನು ಸೋತಿಲ್ಲ. ಬದಲಾಗಿ ಸೋತಿರುವುದು ಶಿಕ್ಷಕ ಮತದಾರರು. ಈ ಬಗ್ಗೆ ಅವರು ಆತ್ಮ ವಿಮರ್ಶೆ ಮಾಡುಕೊಳ್ಳುವ ಕಾಲ ಬಂದಿದೆ ಎಂದು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24 ವರ್ಷಗಳ ಕಾಲ ನಾನು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ ಅದರ ಘನತೆಯನ್ನು ಕಾಪಾಡಿದ್ದೇನೆ. ಆದರೆ ಈ ಚುನಾವಣೆ ಫಲಿತಾಂಶ ಶಿಕ್ಷಕರ ಕ್ಷೇತ್ರಕ್ಕೆ ಕಳಂಕ ತಂದಿದೆ ಎಂದು ವಿಷಾಧಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ. ಆದರೆ ಆಡಳಿತ ಪಕ್ಷದ ಅಭ್ಯರ್ಥಿಯ ಸೋಲನ್ನು ಶಿಕ್ಷಕರು ಬಯಸಿರುವುದು ವಿಷಾದನೀಯ ಎಂದು ನುಡಿದರು.
ಆಡಳಿತ ಪಕ್ಷದ ಅಭ್ಯರ್ಥಿಯಾಗಿದ್ದೇನೆ. ನಮ್ಮ ಸರ್ಕಾರ ಮುಂದಿನ ಐದು ವರ್ಷಗಳು ನಾವು ಅಧಿಕಾರದಲ್ಲಿರುತ್ತೇವೆ. ಶಿಕ್ಷಕರು ಮತ್ತು ದೀರ್ಘಕಾಲದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದೆ. ಇದಕ್ಕಾಗಿ ನನ್ನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದೆ ಹಾಗಿದ್ದರೂ ನನ್ನನ್ನು ಸೋಲಿಸಿದರು ಎಂದರು.
ನಾನು ಜೆಡಿಎಸ್ ಬಿಟ್ಟಿದ್ದು, ಚುನಾವಣಾ ಸೋಲಿಗೆ ಕಾರಣಲ್ಲ. ಮೂರು ವರ್ಷಗಳ ಹಿಂದೆಯೇ ಅವರಿಂದ ಅಂತರ ಕಾಯ್ದುಕೊಂಡು ಚುನಾವಣೆ ಎದುರಿಸಿದ್ದೇನೆ. ಜೆಡಿಎಸ್ ಅಥವಾ ವರಿಷ್ಠರ ಪ್ರಭಾವ ಈ ಚುನಾವಣೆ ಮೇಲೆ ಬೀರಿಲ್ಲ ಎಂದು ಟಾಂಗ್ ಕೊಟ್ಟರು.
ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಕೆಶಿ, ಚೆಲುವರಾಯಸ್ವಾಮಿ ಸೇರಿದಂತೆ ಮೈಸೂರು ಮಂಡ್ಯ, ಚಾಮರಾಜನಗರ ಉಸ್ತುವಾರಿ ಸಚಿವರು ಪ್ರಯತ್ನಿಸಿದರು ನಾನು ಗೆಲ್ಲಲು ಸಾಧ್ಯವಾಗಲಿಲ್ಲ. ಮತ ನೀಡಿದ ಶಿಕ್ಷಕ ಪ್ರಭುಗಳಿಗೆ ನನ್ನ ಕೃತಜ್ಞತೆಗಳು ಎಂದು ಮರಿತಿಬ್ಬೇಗೌಡ ತಿಳಿಸಿದರು.