Mysore
29
overcast clouds

Social Media

ಶನಿವಾರ, 15 ಆಗಸ್ಟ್ 2026
Light
Dark

ಮಂಡ್ಯ | ರಸ್ತೆ ಅಪಘಾತ ; ಯುವಕ ಸಾವು

ಮಂಡ್ಯ : ಟಾಟಾ ನಿಕ್ಸಾನ್ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ವಿ.ಮನು (36) ಎಂಬುವವರು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪ ಬೋರಾಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಪತ್ರಕರ್ತೆ ಹರವು ಸ್ಪೂರ್ತಿ ಅವರ ಪತಿ, ಕೆ.ಎಂ.ದೊಡ್ಡಿ ವೆಂಕಟೇಶ್ ಅವರ ಪುತ್ರ ಬೆಂಗಳೂರಿನ ಖಾಸಗಿ ಕಂಪೆನಿಯ ಸಾಪ್ಟ್ ವೇರ್ ಇಂಜಿನಿಯರ್ ವಿ.ಮನು ಮೃತ ವ್ಯಕ್ತಿ.

ಶನಿವಾರ ಬೆಂಗಳೂರಿನಿಂದ ಸ್ವ-ಗ್ರಾಮ ಕೆ.ಎಂ.ದೊಡ್ಡಿಗೆ ಮನು ಟಾಟಾ ನಿಕ್ಸಾನ್ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಮಳವಳ್ಳಿಯಿಂದ ಮದ್ದೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಬಸ್ ನ ಮುಂಬದಿಯ ಚಕ್ರ ಪಂಕ್ಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮನು ಅವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿ‌ನ ಚಿಕಿತ್ಸೆಗೆ ಮಂಡ್ಯ ಮಿಮ್ಸ್ ಗೆ ಕರೆತರುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ 6 ವರ್ಷದ ಮಗ ಸುಧನ್ವ, ಪತ್ನಿ ಪತ್ರಕರ್ತೆ ಹರವು ಸ್ಪೂರ್ತಿ ಹಾಗೂ ಪತ್ರಕರ್ತ, ಲೇಖಕ ಹರವು ದೇವೇಗೌಡ ಸೇರಿದಂತೆ ಅಪಾರ ಬಂಧುಗಳಿದ್ದಾರೆ. ಮೃತರ ಅಂತ್ಯಕ್ರಿಯೆ ಕೆ.ಎಂ.ದೊಡ್ಡಿ ಬಳಿಯ ಮೆಣಸಗೆರೆಯಲ್ಲಿ ನಾಳೆ ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು, ಬಸ್ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags:
error: Content is protected !!