Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಭವಿಷ್ಯದಲ್ಲಿ ಕಾಶಿಯಂತೆ “ಕಾವೇರಿ ಆರತಿ” ಪ್ರಸಿದ್ಧಿ : ನಿಶ್ಚಲಾನಂದನಾಥ ಸ್ವಾಮೀಜಿ ಭವಿಷ್ಯ

ಕಾವೇರಿ ಆರತಿಯಲ್ಲಿ ಜನಮನ ಸೆಳೆದ ಜನಪದ ನೃತ್ಯೋತ್ಸವ

ಕೆ.ಆರ್.ಎಸ್ (ಮಂಡ್ಯ) : ಉತ್ತರ ಭಾರತದ ಕಾಶಿ ಕ್ಷೇತ್ರ ಹೇಗೆ ಗಂಗಾರತಿಗೆ ಪ್ರಸಿದ್ಧಿ ಹೊಂದಿದೆಯೋ ಅದೇ ರೀತಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ನಡೆಯಲಿರುವ “ಕಾವೇರಿ ಆರತಿ” ಕೂಡ ಪ್ರಸಿದ್ಧಿಯಾಗಲಿದೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಭವಿಷ್ಯ ನುಡಿದರು.

ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಕಾವೇರಿ ಆರತಿ ಕಲ್ಪನೆಯೂ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಂತಾಗಲಿದೆ. ಅವರ ಈ ವಿಶೇಷ ಕನಸು ನನಸು ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ “ಕಾವೇರಿ ಆರತಿ” ಕಾಶಿ ಕ್ಷೇತ್ರದಂತೆ ಪ್ರಸಿದ್ಧಿ ಪಡೆಯಲಿದೆ ಎಂದರು.

ಪಂಚಭೂತಗಳಲ್ಲಿ ಜಲದೇವತೆ ಕೂಡ ಒಂದು. ಕನ್ನಡ ನಾಡಿನ ಜೀವನದಿ ಕಾವೇರಿಗೆ “ಕಾವೇರಿ ಆರತಿ” ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವುದರ ಜೊತೆಗೆ ಕಾವೇರಿ ಕಲುಷಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೂಡ ಎಲ್ಲರ ಮೇಲಿದೆ ಎಂದು ಹೇಳಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡರು ಮಾತನಾಡಿ, ಕಾವೇರಿ ನಮ್ಮ ತಾಯಿ. ಕಾವೇರಿ ನಮ್ಮ ಉಸಿರು. ಕಾವೇರಿ ಆರತಿ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ನೆರವೇರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:-ತಮಿಳುನಾಡು | ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ ; 20 ಸಾವು ; ಹಲವರಿಗೆ ಗಾಯ

ಕಾವೇರಿ ದಕ್ಷಿಣ ಭಾರತದ ಸಾಂಸ್ಕೃತಿಕ ತೊಟ್ಟಿಲು. ಈ ನಾಡಿನ ಜೀವನಾಡಿ. ಸಾಂಸ್ಕೃತಿಕ ಮತ್ತು ಧಾರ್ಮಿಕತೆಯ ಪ್ರತೀಕವಾಗಿರುವ ಕಾವೇರಿ ಕರ್ನಾಟಕದ ಜೀವನದಿ. ಕೋಟ್ಯಂತರ ಜನರ ದಾಹ ನೀಗಿಸಿ, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಕಾರಣೀಭೂತಳಾಗಿದ್ದಾಳೆ. ಕಾವೇರಿ ವರ್ಷಪೂರ್ತಿ ತುಂಬಿ, ಈ ನಾಡು ಸಮೃದ್ಧಿಯಿಂದ ಕೂಡಿರಲೆಂದು ಕಾವೇರಿ ಆರತಿ ಆಯೋಜಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಕುಮಾರ್ ಮಾತನಾಡಿ, “ಕಾವೇರಿ ಆರತಿ” ಹೊಸ ಪರಂಪರೆಯನ್ನು ಸೃಷ್ಟಿಸಿದೆ. ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಕಾರ್ಯ ಅತ್ಯಂತ ಪವಿತ್ರ ಕಾರ್ಯ. ಬದುಕಿಗೆ ಹೊಸ ಭರವಸೆಯ ಬೆಳಕನ್ನು ಕಾವೇರಿ ಮೂಡಿಸುತ್ತಿದ್ದಾಳೆ. ಮನರಂಜನೆ ಜೊತೆಗೆ ಕಲಾವಿದರನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಸಲುವಾಗಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ನಾನಾ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ಜನಪದ ನೃತ್ಯೋತ್ಸವ
ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದ 2ನೇ ದಿನದಂದು ಬೃಂದಾವನದಲ್ಲಿ “ಕಾವೇರಿ ಆರತಿ” ಕಾರ್ಯಕ್ರಮದಲ್ಲಿ ಗ್ರಾಮೀಣ ಸೊಗಡಿನ ಜಾನಪದ ಕುಣಿತ, ಜನಪದ ಗಾಯನಗಳು ಜನಮನಸೆಳೆದವು.

ಕಾವೇರಿ ಆರತಿಗೂ ಮುನ್ನ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳ ನೃತ್ಯ ಪ್ರವಾಸಿಗರ ಮನ ಸೆಳೆಯಿತು. ಮಂಡ್ಯ ಜಿಲ್ಲೆಯ ಸೊಗಡಿನ ಪೂಜಾಕುಣಿತ, ವೀರಭದ್ರ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ, ಕೋಲಾಟ, ನೃತ್ಯಗಳು ಈ ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರಿದಂತಿತ್ತು. ಮಾದೇಶ್ವರನನ್ನು ಹಾಡಿ ಹೊಗಳಿದ ಕಂಸಾಳೆ ನೃತ್ಯ ಮತ್ತು ಜನಪದದ ವಾದನಕ್ಕೆ ಸಭಿಕರು ಮನಸೋತರು. ಕುಂತಲ್ಲೇ ಹಾಡನ್ನು ಗುನುಗಿದರು.

2ನೇ ದಿನದ ಕಾರ್ಯಕ್ರಮಗಳು
ಉತ್ತರ ಮತ್ತು ದಕ್ಷಿಣ ಭಾರತ ಸಂಪ್ರದಾಯದ ಸಮ್ಮಿಲನದಲ್ಲಿ ಕೆಆರ್ ಎಸ್ ನ ಬೃಂದಾವನದ ಮುಖ್ಯ ವೇದಿಕೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಎರಡನೇ ದಿನ ಬಹಳ ಅದ್ದೂರಿಯಾಗಿ ನೆರವೇರಿತು. ಮೊದಲಿಗೆ ದಕ್ಷಿಣ ಭಾರತ ಶೈಲಿಯಲ್ಲಿ ಕಾವೇರಿ ಆರತಿ ನಡೆಯಿತು. ಬಳಿಕ ವಾರಣಾಸಿ ತಂಡದಿಂದ ಆರತಿ ಪ್ರದರ್ಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Tags:
error: Content is protected !!