Mysore
21
scattered clouds

Social Media

ಭಾನುವಾರ, 25 ಜನವರಿ 2026
Light
Dark

ಮೇಕೆದಾಟು ಯೋಜನೆಗೆ ಅನುಮತಿ ಕೊಟ್ಟರೆ ಎರಡೂ ರಾಜ್ಯಗಳ ಸಂಘರ್ಷ ತಪ್ಪಲಿದೆ : ಸಿಎಂ

ಮಳವಳ್ಳಿ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡಿ. ಈ ಯೋಜನೆ ಮಾಡಿದರೆ ೬೬ ಟಿಎಂಸಿ ನೀರು ಶೇಖರಣೆ ಆಗಲಿದೆ. ಇದರಿಂದ ಎರಡೂ ರಾಜ್ಯಗಳಿಗೂ ಅನುಕೂಲ ಆಗಲಿದೆ. ಸಂಘರ್ಷವೂ ತಪ್ಪಲಿದೆ. ಆದ್ದರಿಂದ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಈ ಯೋಜನೆಗೆ ಅನುಮತಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಕಳಿ ವ್ಯಕ್ತಪಡಿಸಿದರು.

ತಾಲ್ಲೂಕಿನ ಶಿವನಸಮುದ್ರ(ಬ್ಲಫ್)ನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋಧ್ಯಮ ಇಲಾಖೆ ವತಿಯಿಂದ ಏರ್ಪಡಿಸಿರುವ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ತೆಂಗಿನ ಹೊಂಬಾಳೆ ಅನಾವಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡಿಗೆ ೧೭೭.೨೫ ಟಿಎಂಸಿ ನೀರು ಬಿಡಲು ತೀರ್ಮಾನ ಮಾಡಿದೆ. ಆದರೂ, ಮೇಕೆದಾಟು ಯೋಜನೆಗೆ ಅಡ್ಡಿಯಾಗುತ್ತಿದೆ. ಅದು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಉಪಕ್ರಮ. ಇಲ್ಲಿವರೆಗೆ ೯೮ ಟಿಎಂಸಿ ನೀರು ಕೊಡಬೇಕಿತ್ತು, ಆದರೂ ಈಗಾಗಲೇ ೨೨೧ ಟಿಎಂಸಿ ನೀರು ಹೋಗಿದೆ. ನಾವು ಉತ್ತಮ ಮಳೆ ಆದ್ರೆ ನೀರು ಇಟ್ಟುಕೊಳ್ಳೋಕೆ ಆಗಲ್ಲ. ಮಳೆ ಆದಾಗಲೆಲ್ಲ ನೀರು ಕೊಡುತ್ತೇವೆ. ಈ ಬಾರಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಹಾಗಾಗಿ ವಿದ್ಯುತ್ ಅಭಾವ ಬರಲ್ಲ. ತಮಿಳುನಾಡು ಕರ್ನಾಟಕ ನಡುವೆ ಕಾವೇರಿ ವಿವಾದವೂ ಬರೊಲ್ಲ.

ಮಳೆ ಸರಿಯಾಗಿ ಆದ್ರೆ ನೀರಿನ ಸಮಸ್ಯೆಯೇ ಬರುವುದಿಲ್ಲ. ಆದ್ದರಿಂದ ತಮಿಳುನಾಡು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಈ ಮೇಕೆ ದಾಟು ಯೋಜೆಗೆ ಅನುಮತಿಸಬೇಕೆಂದು ಪುನರುಚ್ಚರಿಸಿದರು. ಇವತ್ತು ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ. ಪ್ರತಿ ವರ್ಷ ಜಲಪಾತೋತ್ಸವವನ್ನ ಸರ್ಕಾರ ಮಾಡುತ್ತಿದೆ. ಜನ ಇದನ್ನ ಅನುಭವಿಸಬೇಕು, ಜನರನ್ನ ಆಕರ್ಷಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ. ರಾಜ್ಯದಲ್ಲಿ ನದಿಗಳಿವೆ. ಅವೆಲ್ಲವೂ ಆರ್ಥಿಕ ವೃದ್ಧಿಗೆ ಸಹಕಾರಿಯಾಗಿವೆ. ಗಗನಚುಕ್ಕಿ ಜಲಪಾತ ಅತ್ಯಂತ ಸೊಗಸಾದ, ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಇದನ್ನ ನೋಡಲು ಪ್ರವಾಸಿಗರು ಬರುತ್ತಾರೆ. ಕಳೆದ ವರ್ಷವೂ ನಾನು ಇಲ್ಲಿಗೆ ಸೆಪ್ಟೆಂಬರ್‌ನಲ್ಲಿ ಬಂದಿದ್ದೆ. ಈ ವಾತಾವರಣ ಅನುಭವಿಸಿದವರಿಗೆ ಗೊತ್ತು ಎಂದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಪಿ.ರವಿಕುಮಾರ್ ಗಣಿಗ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಸುಧಾಮ್ ದಾಸ್, ಮಂಜುನಾಥ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದೀನಿ, ಎಸ್‌ಪಿ. ಮಲ್ಲಿಕಾರ್ಜುನ ಬಾಲದಂಡಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಚಂದ್ರಮ್ಮ, ಉಪ ವಿಭಾಗಾಽಕಾರಿ ಶಿವಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ದಡದಪುರ ಶಿವಣ್ಣ, ಐಜಿಪಿ ನಂಜುಂಡಸ್ವಾಮಿ, ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಪರ ಜಿಲ್ಲಾಽಕಾರಿ ಶಿವಮೂರ್ತಿ ಇತರರು ಭಾಗವಹಿಸಿದ್ದರು.

Tags:
error: Content is protected !!