Mysore
27
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಅಂಗಾಂಗ ಕಸಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ : ವೈದ್ಯಕೀಯ ಸಚಿವ ಶರಣಪ್ರಕಾಶ್‌ ಪಾಟೀಲ್

2025ನೇ ಸಾಲಿನ ಎಂಬಿಬಿಎಸ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ

ಬಿ.ಜಿ.ನಗರ (ಮಂಡ್ಯ) : ಕರ್ನಾಟಕವನ್ನು ಆರೋಗ್ಯವಂತ ರಾಜ್ಯವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇತ್ತೀಚೆಗೆ ಹೆಚ್ಚು ಅಗತ್ಯವಾಗಿರುವ ಅಂಗಾಂಗ ಕಸಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲು ನಾವು ಮುಂದಾಗಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರದಲ್ಲಿ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 2025ನೇ ಸಾಲಿನ ಎಂಬಿಬಿಎಸ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮವನ್ನು ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿ ಡಾ. ಶರಣಪ್ರಕಾಶ್‌ ಪಾಟೀಲ್‌ ಭಾಷಣ ಮಾಡಿದರು.

ಈಗಾಗಲೇ ನಮ್ಮ ಗ್ಯಾಸ್ಟ್ರೋಎಂಟರಾಲಜಿ ಮತ್ತು ಅಂಗಾಂಗ ಕಸಿ ಸಂಸ್ಥೆಯ ಮೂಲಕ ರಾಜ್ಯದಲ್ಲಿ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅಂಗಾಂಗ ಕಸಿಯನ್ನು ಸರ್ಕಾರಿ ಸಂಸ್ಥೆಯಿಂದಲೇ ಮಾಡಲಾಗುತ್ತಿದೆ. ಎಲ್ಲರಿಗೂ ಉತ್ತಮ ಆರೋಗ್ಯ ನೀಡಬೇಕು ಎನ್ನುವುದು ನಮ್ಮ ಗುರಿ ಎಂದು ಸಚಿವರು ತಿಳಿಸಿದರು. ಅಂಗಾಂಗ ಕಸಿ ಖಾಸಗಿಯಾಗಿ ಮಾಡಿಸಿದರ ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಅತ್ಯಾಧುನಿಕ ವೈದ್ಯಕೀಯ ಸಾಧನಗಳೊಂದಿಗೆ, ಮಿತವ್ಯಯವಾಗಿ ನಾವು ಅಂಗಾಂಗ ಕಸಿ ಸೇವೆ ನೀಡಲು ಬದ್ಧರಾಗಿದ್ದೇವೆ ಎಂದು ಡಾ. ಪಾಟೀಲ್‌ ಭರವಸೆ ನೀಡಿದರು.

ಅಂಗಾಂಗ ಕಸಿ ಸೇವೆಯನ್ನು ಮತ್ತಷ್ಟು ಹೆಚ್ಚು ಮಾಡಲು ನಾವು ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿ ನಾವು ಬೆಂಗಳೂರಿನಲ್ಲಿ ಹತ್ತು ಮಹಡಿಯ ಬೃಹತ್‌ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದೇವೆ. ಅಂಗಾಂಗ ಕಸಿ ಸೇವೆ ಅಗತ್ಯವಿರುವವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಸಿಗಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು. ಕಾಂಗ್ರೆಸ್‌ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹೆಚ್ಚು ಅನುದಾನ, ನೆರವು ದೊರೆಯುತ್ತಿದೆ.

ಹೀಗಾಗಿ ನಾವು ಆರೋಗ್ಯವಂತ ಕರ್ನಾಟಕ ನಿರ್ಮಿಸಲು ಪಣತೊಟ್ಟಿದ್ದೇವೆ. ವೈದ್ಯಕೀಯ ಶಿಕ್ಷಣ ಮಾತ್ರವಲ್ಲ, ಇತರೆ ಸಚಿವಾಲಯಕ್ಕೂ ಹೆಚ್ಚಿನ ಸೌಲಭ್ಯ ದೊರೆಯುತ್ತಿದೆ ಎಂದು ವಿವರಿಸಿದರು. ವೈದ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಕರುಣೆ ಇರಲಿ ವೈದ್ಯಕೀಯ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಹಾಗೂ ಕರುಣೆ ಹೆಚ್ಚಾಗಿರಬೇಕು. ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವ ಮನಃಸ್ಥಿತಿ ಇರಬೇಕು.

ನಿಮ್ಮ ಕೈಗುಣ ಚೆನ್ನಾಗಿದ್ದರೆ ರೋಗಿಗಳಿಗೆ ಅರ್ಧ ಚಿಕಿತ್ಸೆ ದೊರಕಿದಂತೆ. ಈ ನಿಟ್ಟಿನಲ್ಲಿ ನೀವು ಎಂದು ಸಚಿವ ಡಾ. ಪಾಟೀಲ್‌ ಸಲಹೆ ನೀಡಿದರು. ಡಾ.ಅರುಂದತಿ ಚಂದ್ರಶೇಖರ, ಡಾ.ಎನ್.ಎಸ್. ನಾಗೇಶ್, ಡಾ ಎಸ್ ಎನ್ ಶ್ರೀಧರ ಉಪಕುಲಪತಿಗಳು ಆದಿಚುಂಚನಗಿರಿ ವಿಶ್ವವಿದ್ಯಾಲಯ, ಡಾ ಸಿ ಕೆ ಸುಬ್ಬರಾಯ ರಿಜಿಸ್ಟ್ರಾರ್ ACU, ಡಾ ಎಂ ಜಿ ಶಿವರಾಮು ಪ್ರಿನ್ಸಿಪಾಲ್, AIMS ಡೀನ್ – ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Tags:
error: Content is protected !!