ಕೆ.ಆರ್.ಪೇಟೆ : ಯುವಕರ ಗುಂಪೊಂದು ವಿನಾಕಾರಣ ಹೆಣ್ಣು ಮಕ್ಕಳು ಇರುವ ಕೆಎಸ್ಆರ್ಟಿಸಿ ಬಸ್ಸನ್ನು ಅಡ್ಡಗಟ್ಟಿ ಹೆಣ್ಣು ಮಕ್ಕಳನ್ನು ಕೆಣಕಲು ಪ್ರಯತ್ನಿಸಿ, ಅದು ಸಾಧ್ಯವಾಗದೇ ಇದ್ದಾಗ ಬಸ್ ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ವಿಠಲಾಪುರ ಮಾರ್ಗದ ಪಿಡಿಜಿ ಕೊಪ್ಪಲು ಗೇಟ್ ಬಳಿ ನಡೆದಿದೆ.
ಬೈಕ್ನಲ್ಲಿ ಬಂದಿರುವ ನಾರ್ಗೋನಹಳ್ಳಿ ಗ್ರಾಮದ ಧರ್ಮ, ಭರತ್, ತಿಮ್ಮ, ಶೇಖರ್ ಎಂಬವರು ಬಸ್ಸನ್ನು ಅಡ್ಡಗಟ್ಟಿ ಬಸ್ಸಿನ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಹೆಣ್ಣು ಮಕ್ಕಳಿದ್ದ ಕಾರಣ ಯುವಕರ ಗುಂಪು ಬಸ್ಸಿನೊಳಗೆ ನುಗ್ಗದಂತೆ ತಡೆದು ಹೆಣ್ಣು ಮಕ್ಕಳ ಸುರಕ್ಷತೆಗೆ ಕಂಡಕ್ಟರ್ ಜಗದೀಶ್ ಮತ್ತು ಚಾಲಕ ಈರಗಂಟಪ್ಪ ಮುಂದಾಗಿದ್ದಾರೆ. ಬಸ್ಸಿನೊಳಗೆ ಹೋಗುತ್ತಿದ್ದವರನ್ನು ತಡೆದ ಹಿನ್ನೆಲೆಯಲ್ಲಿ ಕಲ್ಲಿನಿಂದ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕಂಡಕ್ಟರ್ ಜಗದೀಶ್ ಅವರಿಗೆ ತಲೆ ಮತ್ತು ಕಣ್ಣಿನ ಭಾಗಕ್ಕೆ ಗಂಭೀರವಾದ ಗಾಯಳಾಗಿವೆ. ಡ್ರೈವರ್ ಈರಗಂಟಪ್ಪ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಬಸ್ಸಿನ ನಿರ್ವಾಹಕ ಜಗದೀಶ್ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಯಿತು. ನಂತರ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪಟ್ಟಣದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆ:
ಪಿಡಿಜಿ ಕೊಪ್ಪಲು ಗೇಟ್ ಬಳಿ ಯುವಕರ ಗುಂಪು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಸಾರಿಗೆ ಇಲಾಖೆಯ ನೌಕರರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಾಲ್ಲೂಕು ಕೆಎಸ್ಆರ್ಟಿಸಿ ನೌಕರರ ಯೂನಿಯನ್ ವತಿಯಿಂದ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ಕೂಡಲೇ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಽಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.





